ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ವಿದ್ಯುತ್ ದೀಪ ಆರಿಸಿ, ದೀಪ ಪ್ರಜ್ವಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಸಿಲಿಕಾನ್ ಸಿಟಿಯ ಜನರು ಸಂಪೂರ್ಣ ಪ್ರತಿಕ್ರಿಯಿಸಿದ್ದಾರೆ.
ಸನಾತನ ಸಂಸ್ಕೃತಿಯ ವೈಭವ
ವಿಶೇಷ ಎಂದರೆ ಕ್ಯಾಂಡಲ್ ಹಚ್ಚಿದ್ದಕ್ಕಿಂತಲೂ ಜನರು ಎಣ್ಣೆ ದೀಪವನ್ನೇ ಹೆಚ್ಚಾಗಿ ಹಚ್ಚಿದ್ದು, ಸನಾತನ ಸಂಸ್ಕೃತಿಯ ವೈಭವವನ್ನು ಸಾರಿದ್ದಾರೆ.
ಬನಶಂಕರಿ 3 ನೇ ಹಂತದ ಹೊಸಕೆರೆ ಹಳ್ಳಿಯ ಗುರುದತ್ತ ಬಡಾವಣೆಯಲ್ಲಿ ಮನೆ ಮುಂಭಾಗದಲ್ಲಿ, ತಾರಾಸಿಯ ಮೇಲೆ ರಾತ್ರಿ 9 ಗಂಟೆಯಿಂದ 9 ನಿಮಿಕ್ಷಗಳ ಹಣತೆಯಲ್ಲಿ ದೀಪ ಹಚ್ಚಿ ರಾಷ್ಟ್ರ ಹಾಗೂ ರಾಜ್ಯಕ್ಕೆ ಬಂದು ಒದಗಿರುವ ವಿಪತ್ತು ಗಳನ್ನು ನಿವಾರಿಸಲು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕೊರೋನಾ ಎಂಬ ಪೆಡಂಭೂತವನ್ನು ಹಿಮ್ಮೆಟ್ಟಿಸಲು ಸಿಲಿಕಾನ್ ಸಿಟಿ ಯ ಜನರು ದೀಪ ಬೆಳಗಿಸಿ ಕವಿದಿರುವ ವೈರಸ್ ಎಂಬ ಅಂಧಕಾರವನ್ನು ಹೊಡೆದೋಡಿಸುವ ಕಾರ್ಯಕ್ಕೆ ಕೈ ಜೋಡಿಸಲಾಯಿತು.
ಗುರುದತ್ತ ಬಡಾವಣೆಯ 3 ನೆಯ ಕ್ರಾಸ್’ನಲ್ಲಿ ಇರುವ ಶ್ರೀಮತಿ ಶ್ರೀದೇವಿ ಅರಬಟ್ಟಿ ಅವರು ರಂಗೋಲಿಯಲ್ಲಿ ನವಗ್ರಹ ಮತ್ತು ಅಷ್ಟ ದಿಕ್ಕುಗಳನ್ನು ರಂಗೋಲಿಯಲ್ಲಿ ಬರೆದು ಅದರ ಮುಂಭಾಗದಲ್ಲಿ ದೀಪ ಬೆಳಗಿಸಿ ಮಹಾಮಾರಿ ವಿರುದ್ದ ಜ್ಯೋತಿ ಬೆಳಗಿಸಿದರು.
ಬಡಾವಣೆಯ 3ನೆಯ ಬಿ ಕ್ರಾಸ್’ನಲ್ಲಿರುವ ಶ್ರೀಮತಿ ರಚನಾ ದೇವಿ ಅವರು ಮನೆಯ ಮುಂದೆ ರಂಗೋಲಿ ಹಾಕಿ ಅದರಲ್ಲಿ ಹಣತೆ ಜೋಡಿಸಿ ದೀಪ ಹಚ್ಚಿದರು.
ದೀಪ ಬೆಳಗಿಸಿದ 7 ವರುಷದ ಬಾಲಕಿ
ಬಡಾವಣೆಯ 4 ನೆಯ ಕ್ರಾಸ್’ನಲ್ಲಿರುವ ಶ್ರೀ ಜಿ. ಆನಂದ್ ಮತ್ತು ಶ್ರೀಮತಿ ಎಂ.ಪಿ. ಪವಿತ್ರ ಅವರ ಸುಪುತ್ರಿ ಜಾಗೃತಿ ಗೌಡ ಎಂಬ 7 ವರುಷದ ಬಾಲಕಿ ದೀಪ ಬೆಳಗಿಸುವ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಸ್ಪಂದಿಸುವ ಕೆಲಸ ಮಾಡಿದ್ದಾಳೆ. ಬನಶಂಕರಿ 6 ನೆಯ ಹಂತದ ನ್ಯಾಷನಲ್ ಪಬ್ಲಿಕ್ ಸ್ಕೂಲ್’ನಲ್ಲಿ ಈ ಪೋರಿ 2 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಬಡಾವಣೆಯ ಹಿರಿಯ ನಾಗರಿಕರಾದ ಶಿವಾರಾಂ ಅಡಿಗರು, ಆ ಶ್ರೀ ಜಗನ್ಮಾತೆಯು, ನಮ್ಮ ಬಡಾವಣೆಯ, ನಮ್ಮ ರಾಜ್ಯದ, ನಮ್ಮ ದೇಶದ ಹಾಗೂ ಈ ಜಗತ್ತಿನ ಎಲ್ಲರನ್ನೂ, ಈ ಭಯಾನಕ ಕೊರೋನಾ ವೈರಾಣುವಿನ ಮಾರಣಾಂತಿಕ ಬಾಧೆಯಿಂದ ರಕ್ಷಿಸು ಎಂದು ಎಲ್ಲರೂ ಸೇರಿ ನಮ್ರತೆಯಿಂದ, ಸಂಪೂರ್ಣ ಭಕ್ತಿಯಿಂದ ಬೇಡಿಕೊಳ್ಳೋಣ ಎಂದರು.

Get in Touch With Us info@kalpa.news Whatsapp: 9481252093














