ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಾವೇರಿ: ಕಳಪೆ ನಕಲಿ ಬಿತ್ತನೆ ಬೀಜ ಮಾರಾಟ ಇದರ ಮೂಲವನ್ನು ಕಂಡುಹಿಡಿಯಬೇಕಿದೆ. ಮೂಲವನ್ನು ಹುಡುಕದೇ ಹೋದರೆ ರೈತ ಸಮುದಾಯಕ್ಕೆ ದೊಡ್ಡನಷ್ಟವಾಗುವ ಸಾಧ್ಯತೆಯಿದೆ. ಇವುಗಳ ಮೂಲ ಆಂದ್ರಪ್ರದೇಶ, ಹೈದರಾಬಾದ್, ವಿಜಯವಾಡ, ಕರೀಂನಗರವಾಗಿದೆ. ಇವರ ಮೇಲೆ ಪೊಲೀಸ್ ಇಲಾಖೆ ಇದೂವರೆಗೂ ಯಾವುದೇ ಕ್ರಮ ಜರುಗಿಸದೇ ಇರುವುದು ವಿಷಾದನೀಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಹಿರೇಕೆರೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ನಕಲಿ ಬೀಜ ಮಾರಾಟಗಾರರ ಮೇಲೆ ಪೊಲೀಸರು ಕ್ರಮ ಜರುಗಿಸದೇ ಇರುವುದು ತಮಗೆ ನೋವುಂಟು ಮಾಡಿದ್ದು, ಈ ಬಗ್ಗೆ ಗೃಹಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆಯಲಾಗಿದೆ. ಮೂರ್ನಾಲ್ಕು ಬಾರಿ ದೂರವಾಣಿ ಕರೆ ಮಾಡಲಾಗಿದೆಯಾದರೂ ಆರೋಪಿಗಳ ಬಂಧನವಾಗಿಲ್ಲ. ಸರಿಯಾದ ಕ್ರಮ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಳಪೆ ಕೀಟನಾಶಕಗಳ ಬಗ್ಗೆಯೂ ತಮ್ಮ ಗಮನಕ್ಕೆ ಬಂದಿದ್ದು,ಅವಧಿ ಮುಗಿದ ಕೀಟನಾಶಕಗಳನ್ನು ಮಾರಾಟ ಮಾಡುವ ಪ್ರವೃತ್ತಿ ಬಗ್ಗೆ ತಮಗೆ ದೂರು ಬಂದಿದ್ದು, ಈ ಬಗ್ಗೆ ಕಾನೂ ಕ್ರಮಕೈಗೊಂಡು, ಅವರ ಪರವಾನಿಗೆ ರದ್ದುಗೊಳಿಸಲು ಕೃಷಿ ಜಾಗೃತದಳ, ಎಡಿಗಳಿಗೆ ಸೂಚಿಸಲಾಗಿದೆ ಎಂದರು.
ಸರ್ಕಾರದಲ್ಲಿ ಏನರೆ ತೊಂದರೆಯಿದ್ದರೂ ಸಹ ರೈತರ ಬಿತ್ತನೆ ಬೀಜಕ್ಕಾಗಲೀ ಗೊಬ್ಬರ ಪೂರೈಕೆಗಾಗಲೀ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಪೂರೈಕೆಯ ಕೊರತೆಯಿಂದಾಗಿ ಬೀಜದ ಕೊರತೆಯಾಗಿತ್ತು. ಆದರೆ ಈಗಿಲ್ಲ. ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ, ಎಷ್ಟೇ ಹಣ ಖರ್ಚಾಗಲಿ ಸರ್ಕಾರ ಭರಿಸಬೇಕು. ರೈತರಿಗೆ ಬಿತ್ತನೆ ಬೀಜವಾಗಲಿ ಗೊಬ್ಬರವಾಗಲಿ ಯಾವುದೇ ಕಾರಣಕ್ಕೂ ಕೊರತೆಯಾಗಬಾರದೆಂದು ಸ್ಪಷ್ಟ ಆದೇಶ ನೀಡಿದ್ದಾರೆ. ಕಳಪೆ ಬಿತ್ತನೆ ಬೀಜ, ನಕಲಿ ಅಕ್ರಮಬೀಜ ಸತತ ಪತ್ತೆ ಕಾರ್ಯಾಚರಣೆಗೆ ಮುಖ್ಯಮಂತ್ರಿಗಳು ಶ್ಲಾಘನೆ ವ್ಯಕ್ತಪಡಿಸಿ, ರೈತರಿಗೆ ಅನ್ಯಾಯವಾಗುವಂತಹ ಯಾವುದೇ ಕೆಲಸವನ್ನು ಸಹಿಸುವುದಿಲ್ಲ ಎಂದಿದ್ದಾರೆ. ಇದಕ್ಕಾಗಿ ತಾವು ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ಹೇಳಿದರು.
ತಿರಸ್ಕೃತ(ಗುಣಮಟ್ಟವಲ್ಲದ ರಿಜೆಕ್ಟೆಡ್) ಬೀಜಗಳನ್ನು ಮೂಲದಲ್ಲಿಯೇ ಸುಟ್ಟುಹಾಕಬೇಕು. ಆದರೆ ಕೆಲವರು ಅವನ್ನು ತಂದು ಬಣ್ಣಹಾಕಿ ಒಳ್ಳೆಯ ಬೀಜಗಳ ಜೊತೆ ಬೆರೆಸಿ ಮಾರಾಟ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಜಾಗೃತ ದಳ ಕ್ಷಿಪ್ರಕಾರ್ಯಾಚರಣೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ. ಇಂತಹ ಅಕ್ರಮದ ಹಿಂದೆ ದೊಡ್ಡ ಲಾಬಿಯೇ ಇದ್ದು, ರೈತನ ಹಿತಕ್ಕಿಂತ ದುಡ್ಡುಮಾಡುವ ದುರುದ್ದೇಶ ಮಾತ್ರ ಇವರದ್ದಾಗಿರುತ್ತದೆ. ದಾಳಿ ಮಾಡಿ ವಶಪಡಿಸಿಕೊಂಡ ಅಕ್ರಮ ಬಿತ್ತನೆ ಬೀಜದ ಬಗ್ಗೆ ಎರಡು ದಿನಗಳಲ್ಲಿ ಪ್ರಯೋಗಾಲಯದಿಂದ ವರದಿ ಪಡೆಯಬೇಕು. ಇಂತಹ ಬೀಜಗಳನ್ನು ಸರ್ಕಾರದ ಆದೇಶ ಪಡೆದು ಸುಟ್ಟುಹಾಕಬೇಕು. ಹಾವೇರಿ ಜಿಲ್ಲೆಯ ಬ್ಯಾಡಗಿ, ಹಾವೇರಿ ಜಿಲ್ಲೆಯ ಇತರೆಡೆ ಹಾಗೂ ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ಸೇರಿದಂತೆ ವಿವಿದೆಡೆ ದಾಳಿ ನಡೆಸಿ ಸುಮಾರು 1 ಲಕ್ಷದ 685 ಕ್ವಿಂಟಾಲ್ ಕಳಪೆ ಬೀಜ ಇದರಲ್ಲಿ 194 ಕ್ವಿಂಟಾಲ್ ಮುಸುಕಿನಜೋಳ, 288.4 ಸೂರ್ಯಕಾಂತಿ, 288.6 ಹತ್ತಿ ಕಳಪೆ ಬಿಡಿಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಕರ್ನಾಟಕ ಮಹಾಮಂಡಳಿಯು ಪಶು ಆಹಾರ ತಯಾರಿಕೆಗೆ ಅವಶ್ಯವಾಗಿರುವ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಾಲ್ಗೆ 1760 ರೂ.ನಂತೆ ಒಂದುವರ್ಷದ ಅವಧಿಗೆ ರೈತರಿಂದ ನೇರವಾಗಿ ಖರೀದಿಸಲು ಮುಂದಾಗಿದೆ. ಇದು ರೈತರಿಗೆ ಸಂತಸದ ವಿಷಯ ಎಂದು ಸಚಿವರು ಮಾಹಿತಿ ನೀಡಿದರು.
Get in Touch With Us info@kalpa.news Whatsapp: 9481252093
Discussion about this post