ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೋಲಾರದಲ್ಲಿ ಕಂಡುಬಂದಿರುವುದು ಸಾಮಾನ್ಯ ಎಕ್ಕೆಗಿಡದ ಮಿಡತೆಯಾಗಿದ್ದು, ಲೋಕ್ಟಸ್ ಮಿಡತೆಗೂ ಇದಕ್ಕೂ ಸಂಬಂಧವಿಲ್ಲ.ಕರ್ನಾಟಕಕ್ಕೆ ಲಾಕ್ಟಸ್ ಮಿಡತೆ ಹಾವಳಿ ಸಾಧ್ಯತೆ ತೀರಾ ಕಡಿಮೆಯಿದ್ದು, ರೈತರು ಯಾವುದೇ ಕಾರಣಕ್ಕೂ ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಮಧ್ಯಪ್ರದೇಶ, ಮಹಾರಾಷ್ಟ್ರ ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳಲ್ಲಿ ರೈತರನ್ನು ಬಾಧಿಸಿರುವ ಲೋಕ್ಟಸ್ ಮಿಡತೆ ಹಾವಳಿ ರಾಜ್ಯಕ್ಕೆ ಬಾಧಿಸದಂತೆ ತೆಗೆದುಕೊಳ್ಳಬಹುದಾದ ಕ್ರಮಗಳು ಮುನ್ನೆಚ್ಚರಿಕೆಗಳ ಕುರಿತು ಕೃಷಿ ಸಚಿವರಾದ ಬಿ.ಸಿ. ಪಾಟೀಲರು ವಿಕಾಸಸೌಧದಲ್ಲಿಂದು, ಕೃಷಿ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ಕೀಟಶಾಸ್ತ್ರಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿಸಚಿವರು, ಮಿಡತೆ ಗಾಳಿಯನ್ನು ಅವಲಂಬಿಸಿರುವುದರಿಂದ ಗಾಳಿಯ ದಿಕ್ಕು ಬದಲಾದಂತೆ ಮಿಡತೆಗಳು ಪಸರಿಸುವುದು ಬದಲಾಗುತ್ತದೆ. ಕೃಷಿ ತಜ್ಞರ ಪ್ರಕಾರ ಕರ್ನಾಟಕಕ್ಕೆ ಮಿಡತೆ ಹಾವಳಿ ಸಾಧ್ಯತೆ ಕಡಿಮೆಯಿದೆ. ಮೇ.26 ರಿಂದ ಎರಡು ದಿನಗಳು ಮಾತ್ರ ದಕ್ಷಿಣಾಭಿಮುಖವಾಗಿ ಗಾಳಿ ಬೀಸುತ್ತಿದ್ದು, ಎರಡು ದಿನಗಳ ಬಳಿಕ ಅಂದರೆ ಮೇ.30 ರಷ್ಟೊತ್ತಿಗೆ ಅದರ ದಿಕ್ಕು ಬದಲಾಗುವ ಸಾಧ್ಯತೆಯಿದೆ. ಹೀಗಾಗಿಮಿಡತೆಗಳು ಕರ್ನಾಟಕ ಮುಟ್ಟುವ ಸಾಧ್ಯತೆ ಕಡಿಮೆಯಿದೆ. ಬೀದರ್ ಗಡಿಯಿಂದ ಮಿಡತೆಗಳು ಸುಮಾರು 450 ಕಿ.ಮೀ. ದೂರದಲ್ಲಿರುವುದರಿಂದ ರಾಜ್ಯ ಮುಟ್ಟುವ ಸಾಧ್ಯತೆ ಬಹಳಷ್ಟು ಕಡಿಮೆ ಇದೆ ಎಂದರು.
ಗಾಳಿಯ ದಿಕ್ಕು ಬದಲಾಗಿದೆ
ಒಂದು ವೇಳೆ ಕಾರಣಾಂತರಗಳಿಂದ ಗಾಳಿ ದಿಕ್ಕು ಬದಲಾಗದೇ ಮಿಡತೆಗಳು ಕರ್ನಾಟಕ ಮುಟ್ಟಿದಲ್ಲಿ ಯಾವ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ಡೆವಲಪ್ಮೆಂಟ್ ಕಮಿಷನರ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಎಸ್ ಓಪಿ(STANDARD OPERATING PROCEDURE)ಸಿದ್ಧಗೊಳಿಸಲಾಗಿದೆ. ಅದೇ ರೀತಿ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಮುನ್ನೆಚ್ಚರಿಕೆ ನೀಡಿದ್ದು, ಅಗತ್ಯಬಿದ್ದಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಅವಶ್ಯಕಕ್ರಮಗಳಲ್ಲಿ ಮುಖ್ಯವಾಗಿ ಮೊದಲನೆಯದಾಗಿ ರೈತರು ತಮ್ಮ ಜಮೀನುಗಳಲ್ಲಿ ಮಿಡತೆ ಬಾದೆ ಕಂಡುಬಂದಲ್ಲಿ ಶಬ್ದ ಮಾಡುವ ಮೂಲಕ ದೂರ ಓಡಿಸಬಹುದು. ಇಂತಹ ಬೆಳೆಗಳು ದುಬಾರಿ ಬೆಳೆಗಳಾಗಿದ್ದಲ್ಲಿ ಅವುಗಳ ರಕ್ಷಣೆಗೋಸ್ಕರ ಬೇವು ಆಧಾರಿತ ಕೀಟನಾಶಕಗಳನ್ನು ರೈತರೇ ಸಿಂಪಡಿಸಿಕೊಳ್ಳಬೇಕಾಗುತ್ತದೆ. ಮಿಡತೆಗಳು ಅವುಗಳ ಹಾರುವ ಕ್ರಮದಲ್ಲಿ ಸಾಮಾನ್ಯವಾಗಿ ಸಂಜೆ ವೇಳೆಗೆ ಯಾವುದಾದರೂ ಮರ ಗಿಡಗಳ ಮೇಲೆ ಕೂರುವುದು ಹೆಚ್ಚಿರುವುದರಿಂದ ಅಂತಹ ಸಂದರ್ಭಗಳಲ್ಲಿ ಇವುಗಳ ಹತೋಟಿಗಾಗಿ ಕ್ಲೋರ್ ಫೈರಿಫಾಸ್ ಅಥವಾ ಲಾಮ್ಡಾಸಿಹಲೋತ್ರಿನ್ ಔಷಧಿಗಳನ್ನು ಸರಿಯಾದ ಪ್ರಮಾಣದಲ್ಲಿ ಸಿಂಪಡಣೆ ಮಾಡುವುದು ಎಂದು ತೀರ್ಮಾನಿಸಲಾಗಿದೆ. ಇದಕ್ಕಾಗಿ ಅವಶ್ಯಕವಾದಂತಹ ಸಿಂಪಡಣಾ ವ್ಯವಸ್ಥೆಗಾಗಿ ಫೈರ್ ಇಂಜಿನ್ಸ್, ಟ್ರ್ಯಾಕ್ಟರ್ ಚಾಲಿತ ಸ್ಪ್ರೇಯರ್ ಗಳು ಹಾಗೂ ಡ್ರೋಣ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತ ಕ್ರಮವಾಗಿ ಮಹಾರಾಷ್ಟ್ರದ ಕೃಷಿ ಆಯುಕ್ತರೊಂದಿಗೆ ನಮ್ಮ ರಾಜ್ಯದ ಕೃಷಿ ಆಯುಕ್ತರು ಪ್ರತಿಗಂಟೆಗೊಮ್ಮೆ ಮಿಡತೆಗಳ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ನಿರ್ವಹಣಾ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು.
ನಿರ್ವಹಣಾ ಕ್ರಮಗಳು: ಜಿಲ್ಲಾಮಟ್ಟದಲ್ಲಿ ಕೀಟನಾಶಕ ನಿರ್ವಹಣಾ ಸಮಿತಿ
ಜಿಲ್ಲಾಮಟ್ಟದಲ್ಲಿ ಕೀಟನಾಶಕ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿಯಿದ್ದು, ಸಮಿತಿಯಲ್ಲಿ ಜಂಟಿ ಕೃಷಿ ನಿರ್ದೇಶಕರು,ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ತೋಟಗಾರಿಕಾ ಉಪನಿರ್ದೇಶಕರು, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆಯನ್ನೊಳಗೊಂಡ ಸಮಿತಿಯಿದೆ. ಮಿಡತೆಗಳು ಹಗಲಿಗಿಂತ ರಾತ್ರಿವೇಳೆ ಹೆಚ್ಚು ಸಂಚರಿಸುವುದರಿಂದ ರಾತ್ರಿವೇಳೆ ಮರ,ಗಿಡಗಳ ಮೇಲೆ ಔಷಧಿ, ಕ್ರಿಮಿನಾಶಕ ಸಿಂಪಡಣೆ ಮಾಡಿ ನಾಶಮಾಡಬಹುದಾಗಿದೆ.
ಗಾಳಿಯ ದಿಕ್ಕು ಆಧರಿಸಿ ಲೋಕ್ಟಸ್ ಮಿಡತೆಗಳು ಚಲಿಸುವುದರಿಂದ ಇವುಗಳ ಚಲನವಲನಗಳ ಮೇಲೆ ನಿಗಾವಹಿಸಲು ಭಾರತೀಯ ಹವಾಮಾನ ಸಂಸ್ಥೆಯಿಂದ ಸತತವಾಗಿ ಗಾಳಿಯ ವೇಗ ಹಾಗೂ ದಿಕ್ಕಿನ ಮಾಹಿತಿ ಸಂಗ್ರಹಿಸಿ ಅದರಾಧರದ ಮೇಲೆ ಮುನ್ಸೂಚನೆ ನೀಡುವುದು. ಹೋಗುತ್ತಿರುವ ದಾರಿಯಲ್ಲಿ ಹೊಗೆ ಹಚ್ಚಿಸಿ ಮಿಡತೆಗಳನ್ನು ಮಂಕಾಗಿಸಿ ಶಬ್ದಮಾಡಿ ನಾಶ ಮಾಡುವುದು.ರಾತ್ರಿ ಮರದಲ್ಲಿ ಇವು ವಿಶ್ರಮಿಸುವುದರಿಂದ ರಾಸಾಯನಿಕ ಸಿಂಪಡಣೆ ಬಳಸಿ ನಿಯಂತ್ರಿಸಬಹುದು.
ರಾಜ್ಯಮಟ್ಟದ ತಂಡ
ಮುಂಜಾಗ್ರತಾ ಕ್ರಮವಾಗಿ ರಾಜ್ಯಮಟ್ಟದಲ್ಲಿ ಕೃಷಿ ಮತ್ತು ತೋಟಗಾರಿಕಾ ನಿರ್ದೇಶಕರು ಹಾಗೂ ಉನ್ನತಮಟ್ಟದ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಈ ತಂಡ ಬೀದರ್, ಕೊಪ್ಪಳ, ಗುಲ್ಬರ್ಗಾ, ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿ ಮಿಡತೆ ನಿಯಂತ್ರಣ ಮುನ್ನೆಚ್ಚರಿಕೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ರಾಜ್ಯವಿಪತ್ತು ನಿರ್ವಹಣಾ ನಿಧಿಯಲ್ಲಿ ಶೇ.25 ರಷ್ಟನ್ನು ಮಿಡತೆ ನಿರ್ವಹಣೆಗೆ ಬಳಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕಾ ಸಚಿವ ನಾರಾಯಣಗೌಡ ಸಹ ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post