ಉಡುಪಿ, ಸೆ.2: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಉಡುಪಿ ಜಿಲ್ಲೆಯಲ್ಲಿ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರಪ್ರದೇಶದಲ್ಲಿ ಜನಜೀವನಕ್ಕೆ ಬಂದ್ ನ ಬಿಸಿ ತಟ್ಟಿದೆ, ಆದರೇ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಮುಖ್ಯವಾಗಿ ಖಾಸಗಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಬಂದ್ ನ ಪರಿಣಾಮ ವ್ಯಕ್ತವಾಯಿತು. ಆದರೇ ಬಹುತೇಕ ಅಂಗಡಿಗಳು, ಹೊಟೇಲುಗಳು ತೆರೆದಿದ್ದವು, ಆದರೇ ವ್ಯವಹಾರ ಮಾತ್ರ ಗಣನೀಯವಾಗಿ ಕಡಿಮೆಯಾಗಿತ್ತು.
ಬಸ್ಸುಗಳಲ್ಲದ್ದರಿಂದ ಜನರು ಆಟೋ ರಿಕ್ಷಾಗಳನ್ನೇ ಅವಲಂಭಿಸಿದ್ದು, ಆಟೋ ಚಾಲಕರು ಮುಂಜಾನೆಯಿಂದಲೇ ಭರ್ಜರಿ ಲಾಭ ಮಾಡಿಕೊಂಡರು. ಕೆಲವು ಆಟೋ ಚಾಲಕರು ಪ್ರಯಾಣಿಕರನ್ನು ಸುಲಿಗೆ ಮಾಡಿದರು ಎಂಬ ದೂರುಗಳೂ ಕೇಳಿ ಬಂದವು.ಹೆಚ್ಚಿನ ಖಾಸಗಿ ಶಾಲಾ ಕಾಲೇಜುಗಳಿಗೆ ಹಿಂದಿನ ದಿನವೇ ರಜೆ ಸಾರಲಾಗಿತ್ತು. ಸರ್ಕಾರಿ ಕಚೇರಿ, ಬ್ಯಾಂಕುಗಳು ತೆರೆದಿದ್ದರೂ ಸಿಬ್ಬಂದಿಗಳು, ಕಾರ್ಮಿಕರು ಬಾರದೇ ಕೆಲಸ ಕಾರ್ಯಗಳು ನಡೆಯಲಿಲ್ಲ.

ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಉಡುಪಿ ನಗರದಲ್ಲಿ ಬೃಹತ್ ಜಾಥಾ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿದರು.
ಸರ್ಕಾರಿ ಬಸ್ಸಿಗೆ ಕಲ್ಲೆಸೆತ
ಕುಂದಾಪುರ ತಾಲೂಕಿನ ತಲ್ಲೂರು ಎಂಬಲ್ಲಿ ಬೆಳಿಗ್ಗೆ ೮ ಗಂಟೆಗೆ ಸರ್ಕಾರಿ ಬಸ್ಸಿಗೆ ಕಲ್ಲೆಸೆದ ಘಟನೆಯೂ ನಡೆದಿದೆ. ಬಾಗಲಕೋಟೆಯಿಂದ ಉಡುಪಿಗೆ ಬರುತ್ತಿದ್ದ ಈ ಸರ್ಕಾರಿ ಬಸ್ಸಿಗೆ ತಲ್ಲೂರು ಸೇತುವೆಯ ಬಳಿ ಗುಂಪೊಂದು ಕಲ್ಲೆಸೆದಿದೆ. ಇದರಿಂದ ಬಸ್ಸಿನ ಗಾಜುಗಳು ಹುಡಿಯಾಗಿವೆ, ಆದರೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅನಾಹುತಗಳಾಗಿಲ್ಲ.















