ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದು ಕಾಲಕ್ಕೆ ದಿನಗೂಲಿ ನೌಕರನಂತೆ ವೇತನಕ್ಕೆ ಸೇರಿ ಕಾರ್ಮಿಕ ನಾಯಕನಾಗಿದ್ದ ಸಾಮಾನ್ಯ ವ್ಯಕ್ತಿ ಬೆಳೆಯುತ್ತಾ ಬೆಳೆಯುತ್ತಾ ಜನನಾಯಕನಾಗಿ ಉಕ್ಕಿನ ನಗರಿಯ ಹೃದಯ ಸಾಮ್ರಾಟ್ ಆಗಿ ಬೆಳೆದ ಪರಿಯೇ ಒಂದು ಇತಿಹಾಸ. ಅವರೇ ಭದ್ರಾವತಿ ಜನರಿಂದ ದೈಹಿಕವಾಗಿ ಮರೆಯಾದ ಎಂ.ಜೆ. ಅಪ್ಪಾಜಿ ಗೌಡ.
ಮಂಡ್ಯ ಜಿಲ್ಲೆಯ ಮುತ್ತಿಗೆರೆಯಿಂದ ಭದ್ರಾವತಿಗೆ 1978ರಲ್ಲಿ ಕೆಲಸ ವರಸಿ ಬಂದ ಅಪ್ಪಾಜಿ ಈಲ್ಲಿನ ವಿಐಎಸ್’ಎಲ್ ಕಾರ್ಖಾನೆಯಲ್ಲಿ ರೂ20 ದಿನಗೂಲಿಯಂತೆ ಕಾರ್ಮಿಕ ವೃತ್ತಿಗೆ ಸೇರಿ ಬಡತನದಲ್ಲಿಯೇ ಜೀವನ ಆರಂಭಿಸಿದರು.
ಕಾರ್ಮಿಕ ಸಂಘದ ಪದಾಧಿಕಾರಿಯಾಗಿದ್ದ ಅಪ್ಪಾಜಿ ಕೆಲವೇ ದಿನಗಳಲ್ಲಿ ಅಂದಿನ ಜನತಾ ಪರಿವಾರದ ಮುಖಂಡರಾಗಿದ್ದ ಸಾಲೇರ ಸಿದ್ದಪ್ಪನವರ ರಾಜಕೀಯ ಗರಡಿಯಲ್ಲಿ ಧುಮುಕಿ ಸಿದ್ದಪ್ಪನವರು ಶಾಸಕರಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
1989ರ ಚುನಾವಣೆಯಲ್ಲಿ ಪರಾಭವ
ಸ್ವತಃ ಪ್ರಥಮ ಬಾರಿಗೆ ಸಮಾಜವಾದಿ ಜನತಾ ಪಕ್ಷದ ನೇಗಿಲ ಹೊತ್ತ ರೈತನ ಗುರುತಿನ ಅಡಿಯಲ್ಲಿ ಅಭ್ಯರ್ಥಿಯಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಸ್ಸಾಮಿಯಾ ಎದುರು ಪರಭವ ಅನುಭವಿಸಿದರಾದರೂ ಇವರು ಗಳಿಸಿದ ಮತಗಳ ಪ್ರಮಾಣ ಭವಿಷ್ಯತ್ತಿನಲ್ಲಿ ಈತ ಈಕ್ಷೇತ್ರದ ಶಾಸಕ ನಾಗುವ ಲಕ್ಷಣವನ್ನು ಹೊಂದಿದ್ದಾನೆ ಎಂಬ ಕುರುಹನ್ನು ಜನರಿಗೆ ತೋರಿಸಿದ್ದರು.
1994ರಲ್ಲಿ ಏಣಿ ಏರಿ ಗೆಲುವು
1994ರಲ್ಲಿ ಅಪ್ಪಾಜಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಸಿಗದಿದ್ದಾಗ ಜನತಾದಳದ ವಿರುದ್ಧ ಬಂಡಾಯದ ಬಾವುಟವನ್ನು ಹಾರಿಸಿ ಪಕ್ಷೇತರರಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಏಣಿ ಗುರುತಿನಿಂದ ಸ್ಪರ್ಧೆಗೆಯಿಳಿದು ನಿರೀಕ್ಷೇಗೂ ಮೀರಿ ಮತಗಳನ್ನು ಗಳಿಸಿ ಜಯದ ಬಾವುಟವನ್ನು ಹಿಡಿದು ರಾಜಕೀಯದಲ್ಲಿ ಗೆಲುವಿನ ಏಣಿ ಏರಿ ಪ್ರಥಮ ಬಾರಿಗೆ ಭದ್ರಾವತಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು.
1996ರಲ್ಲಿ ದೇವೆಗೌಡರು ಪ್ರಧಾನಮಂತ್ರಿ ಆಗಿದ್ದಾಗ ವಿಐಎಸ್’ಎಲ್ ಕಾರ್ಕಾನೆಯನ್ನು ಸೈಲ್ಗೆ ವಿಲೀನ ಗೊಳಿಸುವ ಪಕ್ರಿಯೆಯಲ್ಲಿ ಅಪ್ಪಾಜಿಯವರ ಪಾತ್ರ ಗಣನೀಯವಾಗಿತ್ತು.
ಶಾಸಕರಾದ ನಂತರ ಕ್ಷೇತ್ರದ ಜನರ ನಡುವೆ ಸದಾ ಬಯಸಿದಾಗ ಸಿಗುವ ಶಾಸಕರಾಗಿ ಜನಪ್ರಿಯತೆ ಗಳಿಸಿಕೊಂಡರು. ಮತ್ತೊಂದೆಡೆ ಇವರ ಬೆಂಬಲಿಗರ ಸಂಖ್ಯೆಯೂ ಹೆಚ್ಚುತ್ತಾ ಸಾಗಿತು.
1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಅಪ್ಪಾಜಿ ಅದೇ ಮೊದಲ ಬಾರಿಗೆ ಸ್ಪರ್ಧೆಗಿಳಿದಿದ್ದ ಬಿ.ಕೆ. ಸಂಗಮೇಶ್ವರ್ ಅವರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗುವ ಮೂಲಕ ಕ್ಷೇತ್ರದ ರಾಜಕಾರಣದಲ್ಲಿ ವ್ಯಕ್ತಿ ಆಧಾರಿತ ರಾಜಕಾರಣಕ್ಕೆ ಮುನ್ನುಡಿ ಬರೆದರು.
ನಂತರದ ದಿನಗಳಲ್ಲಿ ತಾಲೂಕು ಪಂಚಾಯ್ತಿ, ನಗರಸಭೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಘಸಂಸ್ಥೆಗಳಲ್ಲಿನ ಚುನಾವಣೆಯಲ್ಲಿ ಅಪ್ಪಾಜಿ ಪ್ರಭಾವದಿಂದ ಅಭ್ಯರ್ಥಿಗಳು ಗೆಲುವು ಸಾಧಿಸುವ ಮಟ್ಟಿಗೆ ಕ್ಷೇತ್ರದ ರಾಜಕಾರಣದಲ್ಲಿ ಹೊಸ ಅಧ್ಯಾಯವನ್ನು ಸೃಷ್ಠಿಸಿದರು.
ಕೈತಪ್ಪಿತ್ತು ಹ್ಯಾಟ್ರಿಕ್
2004ರ ವಿಧಾನಸಭಾ ಚುನಾವಣೆಯಲ್ಲಿ ಜಯದ ಹ್ಯಾಟ್ರಿಕ್ ಸಾಧಿಸುವ ಕನಸಿನೊಂದಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಿಳಿದ ಅಪ್ಪಾಜಿಯವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಕೆ. ಸಂಗಮೇಶ್ವರ್ ಎದುರು ಪರಾಭವ ಅನುಭವಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ತಪ್ಪಿಸಿಕೊಂಡರು. ಅಪ್ಪಾಜಿಯವರ ಬಗ್ಗೆ ಜನರಿಗೆ ಸರ್ವರೀತಿಯ ಅಭಿಮಾನವಿದ್ದರೂ, ಅವರ ಕೆಲವು ಅನುಚರರ ಸ್ವೇಚ್ಛಾಚಾರ ವರ್ತನೆಯೇ ಅಪ್ಪಾಜಿಯವರ ಅಂದಿನ ಸೋಲಿಗೆ ಪ್ರಮುಖ ಕಾರಣವೆಂದು ನಾಗರೀಕರು ಅಭಿಪ್ರಾಯಪಟ್ಟರು. ಅಂದಿನಿಂದ ಈಕ್ಷೇತ್ರದಲ್ಲಿ ಅಪ್ಪಾಜಿ-ಸಂಗಮೇಶ್ ನಡುವಿನ ವ್ಯಕ್ತಿಗತ ರಾಜಕಾರಣ ವಿಜೃಂಭಿಸುತ್ತಾ ಈ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ನೆಪಮಾತ್ರಕ್ಕೆ ಇರುವಂತಾಯಿತು.
ಮತ್ತೆ ಪರಾಭವ
2009ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎಂದಿನ ಸಾಂಪ್ರದಾಯಿಕ ಎದುರಾಳಿ ಬಿ.ಕೆ. ಸಂಗಮೇಶ್ ಎದುರು ಸ್ಪರ್ಧೆಗಿಳಿದ ಅಪ್ಪಾಜಿ ಗೆಲ್ಲುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರಾದರೂ ಕೊನೆ ಕ್ಷಣದಲ್ಲಿ ಆದ ಗೊಂದಲಿದಿಂದಾಗಿ ಕೆಲವೇ ನೂರು ಮತಗಳ ಅಂತರದಿಂಧ ಪರಾಭವ ಅನುಭವಿಸಿದರು. ಆದರೂ ರಾಜಕೀಯ ಜೀವನದಲ್ಲಿ ಸೋಲಿನಿಂದ ಕಂಗೆಡದೆ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ, ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತ ಸಾಗಿದ ಅಪ್ಪಾಜಿ ಮಾಜಿ ಶಾಸಕರಾಗಿದ್ದರೂ ಜನರ ಬಾಯಲ್ಲಿ ಜನಪ್ರಿಯ ಶಾಸಕ ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಜನಾನುರಾಗಿಯಾಗಿ ಬೆಳೆದರು.
2014ರಲ್ಲಿ ಪ್ರಚಂಡ ಮತಗಳಿಂದ ಜಯಭೇರಿ
2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 70ಸಾವಿರ ಮತಗಳ ಅಂತರದಿಂದ ತಮ್ಮೆದುರಾಳಿ ಸಂಗಮೇಶ್, ಸಿ.ಎಂ. ಇಬ್ರಹಿಂ ಎಲ್ಲರನ್ನೂ ಸೋಲಿಸುವ ಮೂಲಕ ಅಪ್ಪಾಜಿ ಶಾಸಕ ಸ್ಥಾನದ ಗದ್ದುಗೆಯನ್ನು ಮೂರನೇಬಾರಿಗೆ ಏರಿದರು.
2018ರಲ್ಲಿ ಕೈಕೊಟ್ಟ ಗೆಲುವು
2018ರಲ್ಲಿನಡೆದ ವಿಧಾನಸಭಾ ಚುನಾವಣೆಯಲ್ಲಿ ಪುನಃ ಸ್ಪರ್ಧೆಗಿಳಿದ ಅಪ್ಪಾಜಿಯವರು ಕಾಲಿಗೆ ಚಕ್ರಕಟ್ಟಿ ಕೊಂಡವರಂತೆ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿದರು. ಇವರ ಗೆಲುವು ಖಚಿತ ಎಂಬಷ್ಟರ ಮಟ್ಟಿಗೆ ವಾತಾವರಣ ಸೃಷ್ಠಿಯಾಗಿತ್ತು, ಆದರೆ ಮತದಾನಕ್ಕೆ ಕೆಲವೇ ದಿನಗಳು ಇರುವಾಗ ಇವರ ಆರೋಗ್ಯ ಕೈಕೊಟ್ಟ ಕಾರಣ ಅಂತಿಮ ಹಂತದ ಪ್ರಚಾರದಲ್ಲಿ ಇವರು ಪಾಲ್ಗೊಳ್ಳಲಾಗದ ಕಾರಣ ಚುನಾವಣೆಯಲ್ಲಿ ಪರಾನುಭವ ಅನುಭವಿಸಿದರು.
ಅಪ್ಪಜಿ-ಸಂಗಮೇಶ್ ಒಂದಾದದ್ದು ಒಂದೇ ಕ್ಷಣ
ಕಳೆದ ಲೋಕಸಭೆ ಚುನಾವಣೆಯಲ್ಲಿ ಡಿಕೆಶಿ ಮಾತಿಗೆ ಕಟ್ಟುಬಿದ್ದು ಮಾಜಿ ಶಾಸಕ ಅಪ್ಪಾಜಿ ಹಾಲಿ ಶಾಸಕ ಸಂಗಮೇಶ್ ಕೈಕೈ ಹಿಡಿದು ಒಂದಾದ ಫೋಟೋ ಫೋಸ್ ಕೊಟ್ಟರೇ ಹೊರತು, ಅದನ್ನು ಹೊರತು ಪಡಿಸಿದರೆ ಇವರಿಬ್ಬರು ಈ ಕ್ಷೇತ್ರದ ರಾಜಕಾರಣದ ಪರಸ್ಪರ ವಿರುದ್ಧ ಧ್ರುವಗಳಾಗಿಯೆ ಉಳಿದರು.
ನೇರನಡೆ-ನುಡಿಯ ವ್ಯಕ್ತಿತ್ವ
ಅಧಿಕಾರ ಇರಲಿ ಇಲ್ಲದಿರಲಿ ಅನ್ಯಾಯ ನಡೆದಿದೆ, ನಡೆಯುತ್ತಿದೆ ಎಂದು ತಿಳಿದ ಕೂಡಲೇ ಅಲ್ಲಿಗೆ ಅಪ್ಪಾಜಿ ಹಾಜರ್. ಯಾವುದೇ ಅಧಿಕಾರಿಯಾಗಲಿ ಅವರಿಗೆ ಕೊಡಬೇಕಾದ ಗೌರವವನ್ನು ಕೊಟ್ಟು ಅವರ ತಪ್ಪುಗಳನ್ನು ಹೇಳುತ್ತಾ, ತಿದ್ದಿಕೊಳ್ಳದೆ ಇದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟು ಹೋರಾಟಕ್ಕಿಳಿಯುತ್ತಿದ್ದ ನೇರ, ನಡೆ ನುಡಿಯ ವ್ಯಕ್ತಿತ್ವ ಹೊಂದಿದ್ದ ಅಪ್ಪಾಜಿ ಅನೇಕವೇಳೆ ತಮ್ಮ ಸ್ಪಷ್ಠ ನುಡಿಯಿಂದ ತಮ್ಮ ವಿರೋಧಿಗಳಿಗೂ ಇಷ್ಟವಾಗುವಣಂತಹ ವ್ಯಕ್ತಿತ್ವ ಹೊಂದಿದವರಾಗಿದ್ದರು.
ಭದ್ರಾವತಿ ಬಸ್ಸ್ಟ್ಯಾಂಡ್ ಕಾರಣಕರ್ತರು
ನಗರದ ಬಿ.ಎಚ್. ರಸ್ತೆಯಲ್ಲಿರುವ ಇಂದಿನ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದ ಬಳಿ ಅಸಹನೀಯವಾಗಿದ್ದ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ತೊಡೆದು ಅಲ್ಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಸಿ ಸುಸಜ್ಜಿತ ಬಸ್ ನಿಲ್ದಾಣ ಮಾಡಿದ ರೂವಾರಿ ಅಪ್ಪಾಜಿ ಗೌಡ ಎಂಬುದನ್ನು ಜನರು ಸದಾ ಸ್ಮರಿಸುತ್ತಾರೆ. ಇವರ ಕೊಡುಗೆ ಈ ಕ್ಷೇತ್ರಕ್ಕೆ ಅಪಾರವಾಗಿದೆ. ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆಯ ಹಿಂದೆ ಸಹ ಇವರ ಪರಿಶ್ರಮವಿದೆ.
ಅಪ್ಪಾಜಿಗೆ ಜೆಡಿಎಸ್ ಅಗತ್ಯವಿರಲಿಲ್ಲ ಅದರೆ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್’ಗೆ ಸ್ಥಾನ ಮಾನ ತಂದುಕೊಟ್ಟ ವ್ಯಕ್ತಿ ಅಪ್ಪಾಜಿ, ಕ್ಷೇತ್ರದಲ್ಲಿ ಅಪ್ಪಾಜಿಯ ಹೆಸರು ಹೇಳಿಕೊಂಡು ರಾಜಕಾರಣದಲ್ಲಿ ಸ್ಥಾನಮಾನ ಗಳಿಸಿದವರು ಅನೇಕರು. ಅಪ್ಪಾಜಿ ಸಾವಿನಿಂದ ಕ್ಷೇತ್ರದಲ್ಲಿ ಜೆಡಿಎಸ್ ಪರಿಸ್ಥಿತಿ ಅನಾಥ ಮಗುವಿನಂತಾಗಿದೆ.
Get In Touch With Us info@kalpa.news Whatsapp: 9481252093
Discussion about this post