ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆಯನ್ನು ಖಂಡಿಸಿ ಶುಕ್ರವಾರ ಕೊರ್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈಚಾರಿಕ ಚಿಂತನಾ ಬರಹಗಾರರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಘಟನೆಗಳಿಂದ ಭಾವನಾತ್ಮಕ ದ್ವೇಷ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಭಾರತೀಯ ಸಂಸ್ಕೃತಿ ನೆಲೆಗಟ್ಟಿನಲ್ಲಿ ಜನಜೀವನದ ಪರಂಪರೆಯ ಪ್ರಾಚೀನತೆ ಇದೆ. ಅಧ್ಯಯನ ಶೀಲ ಬರಹಗಾರರು ಅಭಿವ್ಯಕ್ತಿಪಡಿಸುವ ವಿಚಾರಗಳ ಬಗ್ಗೆ ವೈಚಾರಿಕ ಭಿನ್ನತೆ ಇದ್ದಲ್ಲಿ ಚರ್ಚೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.
ದೈಹಿಕ ಹಲ್ಲೆ ಘಟನೆಗಳು ಖಂಡನೀಯ. ಸಾಹಿತಿ ಹಂಪ ನಾಗರಾಜಯ್ಯ ಅವರ ಮೇಲೆ ಯಾವುದೇ ಸಾಕ್ಷಿ, ದಾಖಲೆ ಇಲ್ಲದಿದ್ದರೂ ಅನಾಮಿಕನ ದೂರು ದಾಖಲು ಮಾಡಿಕೊಂಡು ಪೊಲೀಸ್ ಠಾಣೆಗೆ ಕರೆಸಿರುವಂತಹ ಘಟನೆಯೂ ನಾಗರೀಕ ಸಮಾಜಕ್ಕೆ ಶೋಭೆ ಅಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ ಎಸ್.ಎಚ್. ಸೈಯದ್, ಬುದ್ಧ ವೇದಿಕೆ ಮೈತ್ರಿ ದ್ಯಾಮಣ್ಣ, ಕನ್ನಡಪರ ಸಂಘಟನೆಯ ಎಚ್.ಎನ್. ಆದರ್ಶ, ಲಕ್ಷ್ಮಣ್ ಪಾಳೆಗಾರ್, ಕೆ.ಬಿ. ನಾಗರಾಜ, ಎಚ್. ಲಂಕಪ್ಪ, ಪಿ.ಡಿ. ಮಂಜುನಾಥ, ಸುರೇಶ್, ಆರ್. ಮಂಜುನಾಥ, ಉಜ್ಜಿನಪ್ಪ ಮತ್ತಿತರರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















