ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಿಸಿಲಿನ ಹೆಚ್ಚಳ, ದುಷ್ಕರ್ಮಿಗಳ ಕಿಡಿಗೇಡಿತನ, ಸಾರ್ವಜನಿಕರ ಬೇಜವಾಬ್ದಾರಿತನ ಹೀಗೆ ಹತ್ತು ಹಲವು ಕಾರಣಗಳಿಂದ ಆಗುವ ಕಾಳ್ಗಿಚ್ಚಿನಿಂದ ಮಲೆನಾಡಿನ ಕಾಡುಗಳನ್ನು ಸಂರಕ್ಷಣೆ ಮಾಡುವುದು ಸವಾಲಾಗಿ ಪರಿಣಮಿಸಿದೆ.
ಪಶ್ಚಿಮಘಟ್ಟ ಸಾಲಿನ ಆಗುಂಬೆ ಸುತ್ತಮುತ್ತಲ ನಿತ್ಯಹರಿದ್ವರ್ಣದ ಪ್ರದೇಶವನ್ನು ಹೊರತುಪಡಿಸಿ ಎಲೆ ಉದುರುವ ಕಾಡುಗಳಲ್ಲಿ ಯಾವ ಹೊತ್ತಿನಲ್ಲಾದರೂ ಕಾಳ್ಗಿಚ್ಚು ಉಂಟಾಗುವ ಸಾಧ್ಯತೆ ಎದುರಾಗಿದ್ದು, ನೆಲಕ್ಕೆ ಬಿದ್ದ ತರಗೆಲೆಗಳು ಬಿಸಿಲಿನ ತೀವ್ರತೆಗೆ ಒಣಗಿದ್ದು, ಬೆಂಕಿ ತಗುಲಿದರೆ ಇಡೀ ಕಾಡೇ ಸುಟ್ಟು ಕರಕಲಾಗುವ ಆತಂಕವಿದೆ.
ಸಾರ್ವಜನಿಕರು ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಬಿದ್ದಿರುವ ತರಗೆಲೆಗಳನ್ನು ಗುಡಿಸಿ ಬೆಂಕಿ ತಡೆಗಟ್ಟಲು ಅಗ್ನಿನಂದಕ ಗೆರೆಗಳನ್ನು (ಫೈರ್ ಲೈನ್) ಅರಣ್ಯ ಇಲಾಖೆ ನಿರ್ಮಿಸುತ್ತಿದೆ. ಕಾಡಿಗೆ ಬೆಂಕಿ ತಗುಲದಂತೆ ಎಚ್ಚರಿಕೆ ಕ್ರಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಇಲಾಖೆ ಕೈಗೊಂಡಿದೆ.
ಮಳೆಗಾಲದ ಆರಂಭಕ್ಕೆ ಇನ್ನೂ ಮೂರು-ನಾಲ್ಕು ತಿಂಗಳು ಬಾಕಿ ಇದ್ದು ಅಲ್ಲಿಯವರೆಗೆ ಕಾಡಿಗೆ ಬೆಂಕಿ ತಗುಲದಂತೆ ಎಚ್ಚರ ವಹಿಸುವ ಸವಾಲು ಎದುರಾಗಿದೆ. ತಾಪಮಾನ ಹೆಚ್ಚಳ ಕಾಳ್ಗಿಚ್ಚಿಗೆ ಪೂರಕ ವಾತಾವರಣ ಸೃಷ್ಟಿಸಿರುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಇದರ ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕೊರತೆಯನ್ನೂ ಎದುರಿಸುತ್ತಿದ್ದು, ಇಂತಹ ತುರ್ತು ಸಂದರ್ಭವನ್ನು ಗಮನದಲ್ಲಿರಿಸಿಕೊಂಡು ಶಿವಮೊಗ್ಗಾದ ಪರೋಪಕಾರಂ, ಉತ್ತಿಷ್ಠ ಭಾರತ ಮತ್ತು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ ಪರಿಸರ ತಂಡಗಳು ಆಯನೂರು ವಲಯ ಅರಣ್ಯಾಧಿಕಾರಿ ರವಿ ಅವರ ಮಾರ್ಗದರ್ಶನದಲ್ಲಿ ಕಾಳ್ಗಿಚ್ಚಿನ ತಡೆಗೆ ನಿರ್ಮಿಸುವ ಬೆಂಕಿ ನಂದಕ ಗೆರೆ ನಿರ್ಮಾಣ ಕಾರ್ಯದಲ್ಲಿ ಇಲಾಖೆಯೊಂದಿಗೆ ಕೈ ಜೋಡಿಸಿತ್ತು.
ಭಾನುವಾರ ಬೆಳಗ್ಗೆ ತಂಡದ ಮಕ್ಕಳು, ಮಹಿಳೆಯರು ಸೇರಿದಂತೆ ನೂರಕ್ಕೂ ಹೆಚ್ಚು ಸದಸ್ಯರು ಕುಂಸಿ ದೊಡ್ಡಮಟ್ಟಿಯಲ್ಲಿರುವ ಮೀಸಲು ಅರಣ್ಯ ಪ್ರದೇಶದ ಕಾಡಂಚಿನ ರಸ್ತೆ ಮಗ್ಗುಲಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಮೂರು ತಾಸುಗಳ ಶ್ರಮದಾನದಲ್ಲಿ ೩ ಕಿ.ಮೀ ಗೂ ಹೆಚ್ಚು ದೂರದ ರಸ್ತೆಯಂಚನ್ನು ದರಗಲೆಗಳಿಂದ ಮುಕ್ತಗೊಳಿಸಲಾಯಿತು.
ನೂರಾರು ಕಿ.ಮೀ. ವ್ಯಾಪ್ತಿಯಲ್ಲಿರುವ ಈ ಕಾಡಂಚುಗಳಲ್ಲಿ ಈ ಕಾರ್ಯ ಸಾಂಕೇತಿಕವಾಗಿದ್ದರೂ ಸೇವಾ ತಂಡಗಳು ಭಾಗವಹಿಸಿರುವುದು ಸಾರ್ವಜನಿಕರು ಹಾಗೂ ರೈತರಲ್ಲಿ ಕಾಡಿನ ಮಹತ್ವ ಮತ್ತು ಕಾಡಿನ ರಕ್ಷಣೆಯಲ್ಲಿ ಜನರ ಪಾತ್ರದ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಪರೋಪಕಾರಂ ಹಾಗೂ ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ ತಂಡದ ಪುಟಾಣಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಿಸರ ಜಾಗೃತಿ ಮೂಡಿಸಿರುವುದಕ್ಕೆ ಅರಣ್ಯ ಇಲಾಖೆ ಕೃತಜ್ಞತೆ ಸಲ್ಲಿಸಿದೆ.
ವರದಿ: ತ್ಯಾಗರಾಜ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post