ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಚುನಾವಣಾ ವ್ಯವಸ್ಥೆ ಬದಲಾಗದ ಹೊರತು ಸಂವಿಧಾನದ ಮೌಲ್ಯಗಳ ಕುಸಿತ ತಪ್ಪಿಸಲು ಸಾಧ್ಯವಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಮನ್ವೆಲ್ತ್ ಸಂಸದೀಯ ಸಂಘದ ಕರ್ನಾಟಕ ಶಾಖೆ ಆಯೋಜಿಸಿದ್ದ ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಒಂದು ಆತ್ಮಾವಲೋಕನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಮಾತನಾಡಿ, ಮಾತೃ ಹೃದಯದವರು ಮಾತ್ರ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬಲ್ಲರು. ಕಲಾಪ ಎಷ್ಟು ದಿನ ನಡೆಸಬೇಕು ಎಂಬ ಸ್ವಾತಂತ್ಯ ವಿಧಾನಸಭೆಯ ಅಧ್ಯಕ್ಷರು ಮತ್ತು ವಿಧಾನ ಪರಿಷತ್ತಿನ ಸಭಾಪತಿಗಳಿಗೆ ಇರಬೇಕು ಎಂದು ಹೇಳಿದರು.
ಕಲಾಪದ ಅವಧಿಯನ್ನು ಸರ್ಕಾರ ನಿರ್ಧಾರ ಮಾಡುವುದು ಸರಿಯಲ್ಲ. ವರ್ಷದಲ್ಲಿ 60 ದಿನಗಳ ಕಾಲ ಕಲಾಪ ನಡೆಯಬೇಕು ಎಂಬ ನಿಯಮವಿದೆ. ಆ ನಿಯಮಕ್ಕೆ ಬದ್ಧವಾಗಿ ಎಲ್ಲರೂ ನಡೆದುಕೊಳ್ಳಬೇಕು ಎಂದರು.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1973ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲಾಯಿತು. ಇದಕ್ಕೆ ಪೂರ್ವಭಾವಿಯಾಗಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಭಾರಿ ಚರ್ಚೆ ನಡೆದಿತ್ತು. ಆದರೆ ಈಗ ತರಾತುರಿಯಲ್ಲಿ ಕಾನೂನುಗಳನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ. ಒಂದೇ ದಿನದಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗುತ್ತಿದೆ. ಯಾವುದೇ ಕಾನೂನು ಜಾರಿಗೆ ತರುವ ಮುನ್ನ ಚರ್ಚೆಗೆ ಅವಕಾಶ ಸಿಗಲೇಬೇಕು. ಅವಸರ ಮಾಡಬಾರದು. ವಿಧೇಯಕ ಮಂಡಿಸಿ ಒಂದೇ ದಿನದಲ್ಲಿ ಅಂಗೀಕಾರ ಮಾಡಿ, ಸುಗ್ರೀವಾಜ್ಞೆ ಜಾರಿಗೆ ತರುವ ಅಭ್ಯಾಸ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.
ಶಾಸಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವುದನ್ನು ತಪ್ಪಿಸಲು ಕಾನೂನು (ಹತ್ತನೇ ಷೆಡ್ಯೂಲ್) ಜಾರಿಗೆ ತರಲಾಯಿತು. ಆದರೂ ಶಾಸಕರು ರಂಗೋಲಿ ಕೆಳಗೆ ನುಸುಳುತ್ತಾರೆ. ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ತರದಿದ್ದರೆ ಸಂವಿಧಾನದ ಮೌಲ್ಯಗಳು ಕುಸಿಯುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ ಮೊದಲು ಮತದಾರರೇ ಹಣ ಕೊಟ್ಟು ಆಶೀರ್ವಾದ ಮಾಡುತ್ತಿದ್ದರು. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಮತ ಕೇಳಬೇಕಾದರೆ ಹಣ ಕೊಡಲೇಬೇಕು. ಕ್ರಿಮಿನಲ್ಗಳು, ಶ್ರೀಮಂತರು, ಹೊಡಿ-ಬಡಿ ಸಂಸ್ಕೃತಿಯವರು ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಚುನಾವಣೆ ಎಂದರೆ ವ್ಯಾಪಾರ, ಹರಾಜು ಎನ್ನುವಂತಾಗಿದೆ. ಹೀಗಾಗಿ ಚುನಾವಣಾ ವ್ಯವಸ್ಥೆ ದಿಕ್ಕಾಪಾಲಾಗಿದೆ. ಮಾಧ್ಯಮದವರಂತೂ ಉದ್ಯಮಿ, ಪತ್ರಕರ್ತ, ರಾಜಕಾರಣಿ ಹೀಗೆ ಎಲ್ಲ ಪಾತ್ರ ನಿಭಾಯಿಸುವುದರಿಂದ ನಾಲ್ಕನೇ ಆಧಾರ ಸ್ಥಂಭ ಗಟ್ಟಿಯಾಗಿ ನಿಲ್ಲುವುದಾದರೂ ಹೇಗೆ ಎಂದರು.
ಚುನಾವಣೆಯನ್ನು ಸರ್ಕಾರವೇ ನಡೆಸುವ ವ್ಯವಸ್ಥೆ ಜಾರಿಗೆ ತರಬೇಕು. ನಾಮಪತ್ರ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಪ್ರಚಾರಕ್ಕೆ ಹೋಗುವಂತಿರಬಾರದು. ಅಧಿಕಾರಕ್ಕಾಗಿ ನಾವೇ ಮೌಲ್ಯಗಳನ್ನು ನಾಶ ಮಾಡುತ್ತಿದ್ದೇವೆ. ಸುಧಾರಣೆ ತರಬೇಕಾದರೆ ರಾಜಕೀಯ ಪಕ್ಷಗಳಲ್ಲಿಯೂ ಬದಲಾವಣೆ ಅನಿವಾರ್ಯ. ಷೆಡ್ಯೂಲ್ 10 ಇನ್ನಷ್ಟು ಬಲಗೊಳ್ಳಬೇಕು. ಪಕ್ಷಾಂತರದ ಪಿಡುಗನ್ನು ಕಡ್ಡಾಯವಾಗಿ ತಪ್ಪಿಸಬೇಕು. ಈ ಯಾವುದೂ ಆಗದೆ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಮೂರು ಹೆತ್ತವಳು ಆರು ಹೆತ್ತವಳಿಗೆ ಬುದ್ಧಿ ಹೇಳಿದಳು ಎಂಬ ಗಾದೆ ಮಾತಿದೆ. ಶಾಸಕರೇ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಕೂರುವುದಿಲ್ಲ. ವಾಟಾಳ್ ನಾಗರಾಜ್ ಅವರು ಶಾಸಕರಾಗಿದ್ದಾಗ ಬೆಳಗ್ಗೆ ಬಂದರೆ ಕಲಾಪ ಮುಗಿಯುವವರೆಗೆ ಹೋಗುತ್ತಿರಲಿಲ್ಲ. ಸಚಿವರೇ ಈಗ ಕಲಾಪದಲ್ಲಿ ಭಾಗವಹಿಸುವುದಿಲ್ಲ. ಇನ್ನು ಶಾಸಕರಿಗೆ ಬುದ್ಧಿ ಹೇಳುವುದಾದರೂ ಹೇಗೆ? ಸಂಸದೀಯ ವ್ಯವಸ್ಥೆ ನಮ್ಮ ದೇಶದಕ್ಕೆ ಹೊಸದೇನೂ ಅಲ್ಲ. ಬುದ್ಧ ಮತ್ತು ಬಸವಣ್ಣನವರ ಕಾಲದಲ್ಲಿಯೇ ಸಂಸದೀಯ ವ್ಯವಸ್ಥೆ ಇತ್ತು. ಈ ಕಾರಣಕ್ಕಾಗಿಯೇ ಬಸವಣ್ಣನವರು ಅನುಭವ ಮಂಟಪ ಸ್ಥಾಪನೆ ಮಾಡಿದರು. ಮೌಲ್ಯಗಳ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ಗಂಭೀರವಾದ ಚಿಂತನೆ ನಡೆಯಬೇಕು. ಸರ್ವಾಧಿಕಾರಿ ಮನಸ್ಥಿತಿ ನಮ್ಮಿಂದ ದೂರ ಆಗಬೇಕು. ನಾನೂ ಸೇರಿದಂತೆ ಇದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಮೌಲ್ಯಗಳು ಕುಸಿಯುತ್ತಿರುವುದಂತೂ ನಿಜ. ಅದನ್ನು ತಡೆಯಲೇಬೇಕು. ಕೇವಲ ರಾಜಕೀಯವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಪ್ರಜಾಪ್ರಭುತ್ವ ಇರಬೇಕು. ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವವನ್ನು ಪ್ರಜಾಪ್ರಭುತ್ವ ಒಳಗೊಂಡಿರಬೇಕು. ಈ ಯಾವುದೂ ಇಲ್ಲದಿದ್ದರೆ ದೇಶ ಉಳಿಯುವುದು ಕಷ್ಟ. ಯಾವುದೇ ಬದಲಾವಣೆಗೆ ನಮ್ಮ ಸಂಪೂರ್ಣ ಸಹಮತ ಇದೆ. ಓದಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆ, ವಿಧಾನ ಪರಿಷತ್ತು ಮತ್ತು ಸಂಸತ್ತಿಗೆ ಆಯ್ಕೆಯಾಗಿ ಬರಬೇಕು ಎಂಬುದೇನೋ ಸರಿ. ಆದರೆ ಜಾತಿ ಭಾವನೆ ವಿದ್ಯಾವಂತರಲ್ಲಿಯೇ ಹೆಚ್ಚು. ಇದು ಅತ್ಯಂತ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post