ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ವೃತ್ತಿಪರ ಮತ್ತು ವೃತ್ತಿಪರವಲ್ಲದ ಕೋರ್ಸುಗಳ ಮೂರನೆ ಸೆಮಿಸ್ಟರ್ ಪರೀಕ್ಷೆಯ ಶುಲ್ಕವನ್ನು ಕೋರೋನ ಸಂದರ್ಭದಲ್ಲಿ ಎರಡನೆ ಸೆಮಿಸ್ಟರ್ ಪರೀಕ್ಷೆಗೆ ಪಡೆದ ಶುಲ್ಕವನ್ನೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಮನವಿಯನ್ನು ತಿರಸ್ಕರಿಸುವ ಮೂಲಕ ಕುವೆಂಪು ವಿವಿಯ ಕುಲಪತಿಗಳು ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಮುಂದುವರೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿವಿಯ ವಿದ್ಯಾರ್ಥಿನಿಲಯಗಳಲ್ಲಿ ದುಬಾರಿ ಪ್ರವೇಶ ಶುಲ್ಕವನ್ನು ವಸೂಲಿ ಮಾಡುವ ಮೂಲಕ ತನ್ನ ಹಠಮಾರಿ ಧೋರಣೆ ತೋರಿದ ವಿಶ್ವವಿದ್ಯಾಲಯದ ಅಡಳಿತ ಇದೀಗ ಪರೀಕ್ಷಾ ಶುಲ್ಕದ ವಿಚಾರದಲ್ಲೂ ವಿದ್ಯಾರ್ಥಿಗಳ ಪಾಲಿಗೆ ಅಮಾನವೀಯವಾಗಿ ವರ್ತಿಸುತ್ತಿದ್ದು ವಿದ್ಯಾರ್ಥಿಗಳ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
2020ನೇ ಸಾಲಿನ ಸೆಮಿಸ್ಟರ್ ಪರೀಕ್ಷೆಗೆ 2000 ರೂ. ಪರೀಕ್ಷಾ ಶುಲ್ಕ ಪಡೆಯಲಾಗಿದ್ದು ಕೊರೋನಾ ಕಾರಣ ಪರೀಕ್ಷೆಯನ್ನು ನಡೆಸಿರುವುದಿಲ್ಲ. ಇದೀಗ ಮೂರನೆ ಸೆಮಿಸ್ಟರ್ ಗೆ ಮತ್ತೆ 2000 ರೂ. ಪರೀಕ್ಷಾ ಶುಲ್ಕ ವನ್ನು ಕಟ್ಟುವಂತೆ ವಿವಿ ಆದೇಶ ಹೊರಡಿಸಿದೆ. ಅದರೆ ಕಳೆದ ಸೆಮಿಸ್ಟರ್ ನ ಪರೀಕ್ಷೆ ನಡೆಯದೆ ಇರುವುದರಿಂದ ಅದರ ಪರೀಕ್ಷಾ ಶುಲ್ಕವನ್ನೆ ಮೂರನೆ ಸೆಮಿಸ್ಟರ್ ಪರೀಕ್ಷೆ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಂಡು ಕೇವಲ ಅಂಕಪಟ್ಟಿ ಶುಲ್ಕ 200ರೂ.ಗಳನ್ನು ಮಾತ್ರ ಪಡೆಯಬೇಕೆಂದು ವಿದ್ಯಾರ್ಥಿಗಳು ಧರಣಿ ನಡೆಸಿ ಮನವಿ ಮಾಡಿಕೊಂಡಿದ್ದಾರೆ.
ಗ್ರಾಮೀಣಾ ಭಾಗದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು ಅವರ ಕುಟುಂಬಗಳು ಕೊರೋನಾ ಸಂಕಷ್ಟದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿವೆ. ಶೇ. 50ರಷ್ಟು ಪರೀಕ್ಷಾ ಶುಲ್ಕವನ್ನು ಕಟ್ಟಲು ಪೋಷಕರಿಗೆ ಸಾಧ್ಯವಿಲ್ಲದಂತಾಗಿದೆ. ಇಂತಹ ಪರಿಸ್ಥಿತಿಯನ್ನುಮನಗಂಡು ವಿವಿಯು ಪರೀಕ್ಷಾ ಶುಲ್ಕ ಹೊಂದಾಣಿಕೆಯ ನಿರ್ಧಾರ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರೂ ವಿವಿಯ ಕುಲಪತಿ ಡಾ. ಬಿ ವಿ ವೀರಭದ್ರಪ್ಪ ಅವರು ವಿಶ್ವವಿದ್ಯಾಲಯವೇ ಆರ್ಥಿಕವಾಗಿ ದಿವಾಳಿಯಾಗಿದೆ. ವಿದ್ಯಾರ್ಥಿಗಳೇ ಇನ್ನೂ ಹೆಚ್ಚಿನ ಶುಲ್ಕ ಕಟ್ಟಬೇಕು ಎಂಬ ಅತ್ಯಂತ ಬೇಜವಾಬ್ದಾರಿಯ ಮಾತಗಳನ್ನು ಆಡಿರುವುದು ವಿವಿಯ ಆಡಳಿತದ ದಿಕ್ಕನ್ನು ತೋರಿಸುತ್ತದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯದ ಅಭಿವೃದ್ದಿಗೆ ಮುಖ್ಯಮಂತ್ರಿಗಳು ಹೆಚ್ಚಿನ ಆಧ್ಯತೆ ಮೇರೆಗೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗ ಕುಲಪತಿಗಳೆ ವಿವಿ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಹೇಳುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಈ ವರ್ಷದ ಹಾಸ್ಟೆಲ್ ಶುಲ್ಕವನ್ನು 9000 ರೂ. ಗೂ ಹೆಚ್ಚಿನ ದಾಗಿ ವಸೂಲಿ ಮಾಡಿದ್ದು, ಶುಲ್ಕ ಕಡಿಮೆ ಮಾಡುವಂತೆ ವಿದ್ಯಾರ್ಥಿಗಳ ಮನವಿಯನ್ನು ಧಿಕ್ಕರಿಸಿದೆ. ವಿಶ್ವವಿದ್ಯಾಲಯ ಆಡಳಿತ ಸಂಪೂರ್ಣವಾಗಿ ವಿದ್ಯಾರ್ಥಿ ವಿರೋಧಿ ನಿಲುವಿನಿಂದ ಕೂಡಿದ್ದು, ಜಿಲ್ಲೆಯ ಸಂಸದರು , ಸಚಿವರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಹಿತ ಕಾಯಬೇಕಾಗಿದೆ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post