ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಎನ್ಎಸ್ಎಸ್ ಸ್ವಯಂ ಸೇವಕರು ಶಿಸ್ತಿನ ಸಿಪಾಯಿಗಳು, ಪ್ರತಿಯೊಬ್ಬ ಸ್ವಯಂ ಸೇವಕರು ಸ್ವಯಂ ಪ್ರೇರಿತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯ ಆವರಣದಲ್ಲಿ ಸ್ನಾತಕೋತ್ತರ ಎನ್ಎಸ್ಎಸ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ನಾವು ರಾಸೇಯೋ ಸ್ವಯಂ ಸೇವಕರು ಎಂದು ಪ್ರತಿಯೊಬ್ಬರೂ ಹೆಮ್ಮೆಯಿಂದ ಹೇಳಿಕೊಳ್ಳಬೇಕು ಹಾಗೇಯೇ ನಾವು ಶಾರೀರಿಕ, ಮಾನಸಿಕ ಹಾಗೂ ಸಾಂಸ್ಕೃತಿಕವಾಗಿ ಸದೃಢರಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಬೇಕು. ಮುಖ್ಯವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಎನ್ಎಸ್ಎಸ್ ಘಟಕ ಅಸ್ತಿತ್ವ ಬಹಳ ಮುಖ್ಯವಾಗಿದೆ. ಅದು ಯಾವಾಗಲೂ ಸಕ್ರಿಯವಾಗಿ ಕಾರ್ಯನಿರ್ವಸುವಂತೆ ತಾವೆಲ್ಲರೂ ಪ್ರಮುಖ ಪಾತ್ರವಹಿಸಖೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ನಮ್ಮ ಸ್ವಯಂ ಸೇವಕರು ತಮ್ಮ ನಡವಳಿಕೆಗಳಲ್ಲಿ ಹೇಗಿರಬೇಕೆಂದರೆ ನೋಡುವವರಿಗೆ ಇವರು ಎನ್ಎಸ್ಎಸ್ ಸ್ವಯಂ ಸೇವಕರಿರಬೇಕು ಎಂದೆನಿಸಬೇಕು. ಅಲ್ಲದೇ ನಾವಿರುವ ಸ್ಥಳ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಸೇವೆಗೆ ಸದಾ ಸಿದ್ದರಾಗಿ ತಮ್ಮ ಇರುವಿಕೆಯನ್ನು ಸಮಾಜಕ್ಕೆ ತೋರಿಸಿ ಕೊಡಬೇಕು ಮತ್ತು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ರಾಸೇಯೋ ಅಧಿಕಾರಿ ಡಾ. ಸೋಮಶೇಖರ್ ಮಾಳಮ್ಮ ಅವರು ಮಾತನಾಡಿ, ಸ್ನಾತಕೋತ್ತರ ಘಟಕವನ್ನು ಸಕ್ರಿಯಗೊಳಿಸುವಲ್ಲಿ ನನ್ನ ಸಂಪೂರ್ಣ ಸಹಕಾರ ವಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ರಾಜಾ ನಾಯಕ್ ಉಪಸ್ಥಿತರಿದ್ದರು. ಸ್ವಯಂ ಸೇವಕರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















