ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಾಯಕತ್ವದ ಹಾಗೂ ಅವರ ಅಭಿಮಾನಿಗಳ ಭಾರೀ ನಿರೀಕ್ಷೆಯ ರಾಬರ್ಟ್ ಚಿತ್ರ ತೆರೆಗೆ ಬಂದಿದೆ. ಬಿಡುಗಡೆಯಾದ ಸ್ಥಳಗಳಲ್ಲಿ ಎಲ್ಲ ಕಡೆ ಭರ್ಜರಿ ಆರಂಭ ಪಡೆದುಕೊಂಡಿದೆ. ವಿಶೇಷವೆಂದರೆ, ಈ ಚಿತ್ರದ ನಾಯಕಿಯಾಗಿ ಭದ್ರಾವತಿಯ ಬೆಡಗಿ ಆಶಾ ಭಟ್ ಅಭಿನಯಿಸಿದ್ದಾರೆ.

ಆಶಾಭಟ್ ಮಿಸ್ ಸುಪ್ರಾ ಇಂಟರ್ನ್ಯಾಷನಲ್ ಸ್ಪರ್ಧೆಯ ವಿಜೇತರು. ಈ ಪ್ರಶಸ್ತಿ ಪುರಸ್ಕೃತರಾದ ಆಶಾ ಭಟ್ರವರನ್ನು 2013ರಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರು ಸನ್ಮಾನಿಸಿ, ಮೊಟ್ಟ ಮೊದಲ ಬಾರಿಗೆ ಸಂವಾದವನ್ನು ಏರ್ಪಡಿಸಿತ್ತು. ಮಥುರಾ ಹೋಟೆಲ್ನ ಸಭಾಂಗಣದಲ್ಲಿ ನಡೆದ ಈ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸಂಘದ ಅಂದಿನ ಅಧ್ಯಕ್ಷ ಎನ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ ಪಾಲ್ಗೊಂಡಿದ್ದರು.

ಕಿಕ್ಕಿರಿದು ಸೇರಿದ್ದ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದ ಮಂದಿಯ ಎದುರು, ಆಶಾ ಭಟ್ ಮುಕ್ತವಾಗಿ ಮಾತನಾಡಿದ್ದರು. ಭವಿಷ್ಯದ ಕನಸುಗಳನ್ನು ತೆರೆದಿಟ್ಟಿದ್ದರು. ಅವಕಾಶ ಸಿಕ್ಕಲ್ಲಿ ಕನ್ನಡದಲ್ಲಿ ಅಭಿನಯಿಸುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು. ಈಗ ಭರ್ಜರಿಯಾಗಿಯೇ ಅವಕಾಶ ಲಭಿಸಿದೆ. ಅವರ ಚಿತ್ರರಂಗದ ಹಾದಿ ಸುಗಮವಾಗಲಿ, ಯಶಸ್ವಿಯಾಗಲಿ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ, ರಾಜ್ಯ ಸಮಿತಿಯ ಸದಸ್ಯರಾದ ಎನ್. ರವಿಕುಮಾರ್, ಪ್ರಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ ನೇರಿಗೆ ಸೇರಿದಂತೆ ಸಮಸ್ತ ಪತ್ರಿಕಾ ಹಾಗೂ ಮಾಧ್ಯಮ ಸಮೂಹ ಹಾರೈಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















