ಉಡುಪಿ, ಸೆ.22: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಇರುವ ತಡೆಯಾಜ್ಞೆಗಳನ್ನು ತೆರವುಗೊಳಿಸಿ, ಸ್ಥಳೀಯರಿಗೆ ಸಾಂಪ್ರಾದಾಯಿಕವಾಗಿ ಮರಳು ತೆಗೆಯುವುದಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ, ಗುರುವಾರ ಜಿಲ್ಲೆಯ ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಸುಮಾರು 22 ವಿವಿಧ ಸಂಘಟನೆಗಳ ನೇತೃತ್ವದಲ್ಲಿ 3,000ಕ್ಕೂ ಅಧಿಕ ಕಟ್ಟಡ, ನಿರ್ಮಾಣ ಮತ್ತು ಮರಳು ಗಣಿ ಕಾರ್ಮಿಕರು ಭಾಗವಹಿಸಿದ್ದ ಈ ಪ್ರತಿಭಟನೆಗೆ ಮೊದಲು ಉಡುಪಿಯ ಜೋಡುಕಟ್ಟೆಯಿಂದ ಕಲ್ಸಂಕದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಲಾಯಿತು.
ಸುರಿಯುತ್ತಿದ್ದ ಮಳೆಯಲ್ಲಿಯೇ ನಡೆದ ಈ ಹೋರಾಟದಲ್ಲಿ ಇಷ್ಟು ಸಂಖ್ಯೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಕಾರ್ಮಿಕರು ಭಾಗವಹಿಸಿದ್ದು, ಮರಳು ಗಣಿಗಾರಿಕೆ ಸ್ಥಗಿತದಿಂದ ಆಗಿರುವ ತೊಂದರೆಯನ್ನು ತೋರಿಸುತ್ತಿತ್ತು.
ಹೋರಾಟ ಸಮಿತಿಯ ಸಂಚಾಲಕ ಕುತ್ಯಾರು ಪ್ರಸಾದ್, ಎತ್ತಿಹೊಳೆ ಯೋಜನೆಯ ವಿರುದ್ಧ ಮತ್ತು ಯು.ಪಿ.ಸಿ.ಎಲ್. ವಿರುದ್ಧ ಹಸಿರು ನ್ಯಾಯಾಪೀಠದ ತಡೆಯಾಜ್ಞೆ ತೆರೆವುಗೊಳಿಸಲು ಸರ್ಕಾರ ಅತ್ಯುತ್ಸಾಹದಿಂದ ತಕ್ಷಣ ವಕೀಲರನ್ನು ನೇಮಿಸಿತ್ತು. ಆದರೆ ಕರಾವಳಿಯಲ್ಲಿ ಮರಳು ಗಣಿಗಾರಿಕೆಯ ವಿರುದ್ಧ ಹಸಿರು ನ್ಯಾಯಪೀಠದ ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರ ಯಾಕೆ ವಕೀಲನ್ನು ನೇಮಿಸಿಲ್ಲ ಎಂದು ಪ್ರಶ್ನಿಸಿದರು.
ಉಡುಪಿ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿರುವ ಮರಳು ಗಣಿಗಾರಿಕೆಯಿಂದ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ಆಡಳಿತ ಪಕ್ಷ ವಿಫಲಗೊಂಡಿದೆ, ಇದರ ವಿರುದ್ಧ ಹೋರಾಟ ನಡೆಸುವಲ್ಲಿಯೂ ವಿರೋಧ ಪಕ್ಷಗಳು ಸೋತಿವೆ ಎಂದು ಆರೋಪಿಸಿದರು.
ನಂತರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಮತ್ತು ಹೋರಾಟಗಾರರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿ ಸಕರಾತ್ಮಕ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಎಂ.ಜಿ.ನಾಗೇಂದ್ರ, ಜೇರಿ ವಿನ್ಸೆಂಟ್ ಡಯಾಸ್, ನಾಗೇಶ್ ಹೆಗ್ಡೆ, ಬಿ.ಬಿ.ಪೂಜಾರಿ, ಮನೋಹರ ಶೆಟ್ಟಿ, ವಿಜಯಕುಮಾರ್ ಹೆಗ್ಡೆ, ಜನನಿ ದಿವಾಕರ ಶೆಟ್ಟಿ, ಅರುಣ್ ಭಂಡಾರಿ, ಕೃಷ್ಣ ಹೆಬ್ಬಾರ್, ರವಿ ಶೆಟ್ಟಿ, ಗೀತಾಂಜಲಿ ಸುವರ್ಣ, ಶ್ಯಾಮಲಾ ಕುಂದರ್ ಮುಂತಾವರು ಭಾಗವಹಿಸಿದ್ದರು.
ಸರ್ಕಾರದ ಹಠ ಸರಿಯಲ್ಲ – ಶಿರೂರು ಶ್ರೀಗಳು
ಮರಳು ಗಣಿಗಾರಿಕೆಯನ್ನು ನಿಲ್ಲಿಸಿರುವುದರಿಂದ ಅದನ್ನು ನಂಬಿಕೊಂಡಿದ್ದ ನಿರ್ಮಾಣ ಉದ್ಯಮವೇ ಸ್ಥಗಿತಗೊಂಡಿದೆ, ಈ ಉದ್ಯಮವನ್ನು ಅವಲಂಭಿಸಿದ್ದ ಸಾವಿರಾರು ಕಾರ್ಮಿಕರು ಉದ್ಯೋಗ ಇಲ್ಲದೇ ಹೊಟ್ಟೆಪಾಡಿಗೂ ಕಷ್ಟಪಡುವಂತಾಗಿದೆ. ಮರಳು ಸಿಗದೇ ಬಡವರ ಮನೆಗಳು ಅರ್ಧಕ್ಕೆ ನಿಂತಿವೆ, ಕೋಟ್ಯಾಂತರ ರು. ನಷ್ಟವಾಗುತ್ತಿದೆ. ಇದಕ್ಕೆ ಕಾರಣವಾಗಿರುವ ಸರ್ಕಾರದ ಹಠಮಾರಿ ಧೋರಣೆ ಸರಿಯಲ್ಲ.
— ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಎಂದರು.
ಹೋರಾಟಗಾರರ ಬೇಡಿಕೆಗಳು
ಮರಳು ಗಣಿಗಾರಿಕೆ ನಡೆಸಲು ಟೆಂಡರ್ ಕರೆಯುವ ಪದ್ಧತಿಯನ್ನು ಕೈಬಿಡಬೇಕು, ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ನೀಡಬೇಕು
ಸಿ.ಆರ್.ಝಡ್. ವ್ಯಾಪ್ತಿಯಲ್ಲಿ ಮರಳು ತೆಗೆಯುವುದಕ್ಕೆ ಹಸಿರು ಪೀಠ ನೀಡಿರುವ ತಡೆಯಾಜ್ಞೆ ತೆರವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಉಡುಪಿ ಜಿಲ್ಲೆಯಲ್ಲಿ ತೆಗೆಯುವ ಮರಳನ್ನು ಹೊರ ಜಿಲ್ಲೆ – ರಾಜ್ಯಗಳಿಗೆ ಸಾಗಾಟಕ್ಕೆ ಅವಕಾಶ ನೀಡಬಾರದು.
ಕರಾವಳಿಗೆ ಪ್ರತ್ಯೇಕ ಮರಳು ನೀತಿಯನ್ನು ಯಾವಾಗ ತಯಾರಿಸಲಾಗುತ್ತದೆ ಎಂಬುದನ್ನು ವಾರದೊಳಗೆ ನಿಖರವಾಗಿ ತಿಳಿಸಬೇಕು.
ಕರಾವಳಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿಯನ್ನು ರಚಿಸುವಾಗ ಜಿಲ್ಲಾ ಸರ್ವ ಸಂಘಟನೆಗಳ ಹೋರಾಟ ಸಮಿತಿಗೆ ಪ್ರಾತಿನಿದ್ಯತೆ ನೀಡಬೇಕು.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮರಳಿಗೆ ಏಕರೂಪದ ಬೆಲೆಯನ್ನು ನಿಗದಿಗೊಳಿಸಬೇಕು.
Discussion about this post