ಕಲ್ಪ ಮೀಡಿಯಾ ಹೌಸ್
ಸೊರಬ: ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ರಾಜ್ಯದಲ್ಲಿ ಕೊರೋನಾ ಕರ್ಫ್ಯೂ ಆದೇಶ ಹೊರಡಿಸಿದ್ದರೂ, ಪಟ್ಟಣದಲ್ಲಿ ಸಕಾರಣವಿಲ್ಲದೇ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ೬ರಿಂದ 10ರವರೆಗೆ ಅವಕಾಶ ನೀಡಿ ಸಮಯ ನಿಗದಿಗೊಳಿಸಿದ್ದರೂ, ಆ ಬಳಿಕ ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಟ ನಡೆಸುತ್ತಿದ್ದ ವಾಹನ ಸವಾರರನ್ನು ವಿಚಾರಿಸಿ, ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಾಹನಗಳನ್ನು ವಶಕ್ಕೆ ಪಡೆದು, ಕೆಲವರನ್ನು ಕಾಲ್ನಡಿಗೆಯಲ್ಲಿಯೇ ಕಳುಹಿಸಿದ ದೃಶ್ಯವೂ ಕಂಡು ಬಂದಿತು.
ಪಟ್ಟಣದ ದಂಡಾವತಿ ಬ್ಲಾಕ್ ಮತ್ತು ಪೊಲೀಸ್ ಠಾಣೆ ಮುಂಭಾಗದಲ್ಲಿ ಮಾಸ್ಕ್ ಧರಿಸದೇ, ಹೆಲ್ಮಟ್ ಧರಿಸದೇ ಸಂಚರಿಸುತ್ತಿದ್ದವರು ವಿಚಾರಿಸಿ ದಂಡ ವಿಧಿಸಲಾಯಿತು. ಪ್ರತಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿರುವ ಪೊಲೀಸರು ಯಾವುದೇ ಸೂಕ್ತ ಕಾರಣಗಳು ಇಲ್ಲದೇ ಸಂಚರಿಸುತ್ತಿದ್ದ ಬೈಕ್, ಕಾರು ಸಹಿತ ಇತರ ವಾಹನಗಳನ್ನು ವಶಕ್ಕೆ ಪಡೆದರು.
ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೊರೋನಾ ಕರ್ಫ್ಯೂ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಜನರು ಮನೆಯಿಂದ ಹೊರ ಬರಬಾರದು. ಬೆಳಗ್ಗೆ 10 ಗಂಟೆಯೊಳಗೆ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗೆ ಸೇರಬೇಕು. 10 ಗಂಟೆಯ ಬಳಿಕ ರಸ್ತೆಯಲ್ಲಿ ಸಂಚರಿಸುವುದು ಕಂಡರೆ ದಂಡ ವಿಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ಸಂದೇಶ ನೀಡಿದರು.
ಪಿಎಸ್ಐ ಟಿ.ಬಿ. ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 35 ಬೈಕ್ ಮತ್ತು ಎರಡು ಕಾರುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಲಾಯಿತು. ಎಎಸ್ಐಗಳಾದ ಶಬ್ಬೀರ್ ಖಾನ್, ಚಿನ್ನಪ್ಪ, ಹೆಡ್ ಕಾನ್ಸ್ಟೇಬಲ್ಗಳಾದ ಎಂ.ಬಿ. ನಾಗರಾಜ್, ನೀಲೇಂದ್ರ ನಾಯ್ಕ್, ಕಾನ್ಸ್ಟೇಬಲ್ಗಳಾದ ಮೋಹನ, ಮೆಹಬೂಬ್, ಗಿರೀಶ್ ಮೈಲಾರಪ್ಪ, ಶಿವಾಜಿರಾವ್, ಸಂದೀಪ, ಶಿವಶಂಕರ ಬಾರ್ಕಿ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post