ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ದೇಶದಲ್ಲಿ ಕಷ್ಟದಲ್ಲಿ ಇರುವ ಏಕೈಕ ವರ್ಗವಿದ್ದರೆ ಅದು ರೈತಾಪಿ ವರ್ಗ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಹೇಳಿದರು.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ದೊಡ್ಡಗೊಪ್ಪೆನಹಳ್ಳಿ, ಚಿಕ್ಕಗೊಪ್ಪೆನಹಳ್ಳಿ, ಹೊನ್ನೆಹಟ್ಟಿ ಹೊಸೂರು, ಮಲ್ಲಿಗೆನಹಳ್ಳಿ ಹಾಗೂ ಕಾರೇಹಳ್ಳಿ ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರದ ರಂಗೇನಹಳ್ಳಿ ಹಾಗೂ ಹಲಸೂರು ಗ್ರಾಮದ ಅಚ್ಚುಕಟ್ಟು ರಸ್ತೆಯ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಗೆ ಮನೆ ಮಗಳಾಗಿ ಕಾಲಿಟ್ಟ ಕೆಲವೇ ವರ್ಷಗಳು ನಾನು ಸೊಸೆಯಾಗಿದ್ದು ಬಿಟ್ಟರೆ, ನಂತರದ ದಿನಗಳನ್ನು ಸಮಾಜಕ್ಕಾಗಿ, ರೈತರಿಗಾಗಿ ಕೆಲಸ ಮಾಡಿದ್ದೇನೆ, ಅವರ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ, ಭದ್ರಾ ಕಾಡಾ ಅಧ್ಯಕ್ಷರಾದ ನಂತರ ಅಚ್ಚುಕಟ್ಟು ಭಾಗದಲ್ಲಿ ಪ್ರವಾಸ ಕೈಗೊಂಡು ರೈತರ ಸಮಸ್ಯೆಗಳನ್ನು ಅಲಿಸಿದಾಗ, ಸ್ಥಳಗಳ ಪರಿಶೀಲನೆ ನಡೆಸಿದಾಗ ಬಹಳಷ್ಟು ರಸ್ತೆಗಳು ಹಾಳಾಗಿರುವುದು ಗಮನಕ್ಕೆ ಬಂತು. ಈ ಸಮಯದಲ್ಲಿ ರೈತರಿಗೆ ಭರವಸೆ ನೀಡಿ ನಾನು ಭೇಟಿ ನೀಡಿದ ಪ್ರತಿಯೊಂದು ಗ್ರಾಮಕ್ಕೆ ಅನುದಾನ ಬಂದ ನಂತರ ಒಂದೊಂದು ಕೆಲಸ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದೇನು ಎಂದರು.
ಅನ್ನದಾತರಿಗೆ ಪ್ರಮುಖವಾಗಿ ತಾವು ಬೆಳೆಯುವ ಬೆಳೆಗಳಿಗೆ ಅಗತ್ಯ ವಸ್ತುಗಳನ್ನು ಸಾಗಿಸಲು ಹಾಗೂ ಕಟಾವು ಮಾಡಿದ ಬೆಳೆಗಳನ್ನು ಕೊಂಡೊಯ್ಯಲು ಟ್ರ್ಯಾಕ್ಟರ್, ಎತ್ತಿನ ಗಾಡಿ ಇನ್ನಿತರ ವಾಹನಗಳ ಮೂಲಕ ಪ್ರತಿದಿನ ರಸ್ತೆಗಳನ್ನು ಬಳಸುತ್ತಾರೆ ಜೊತೆಗೆ ಕೆಲವು ರೈತರ ಬಳಿ ವಾಹನ ವ್ಯವಸ್ಥೆ ಇಲ್ಲದೆ ಇರುವುದರಿಂದ ಭತ್ತದ ಕಣಜ, ಕಬ್ಬಿನ ಜಲ್ಲೆ, ಹುಲ್ಲಿನ ಹೊರೆ ಹೊತ್ತುಕೊಂಡು ಹುಬ್ಬು ತಗ್ಗು ಇರುವ ಅಚ್ಚುಕಟ್ಟು ರಸ್ತೆಯನ್ನು ಅವಲಂಬಿಸಿರುತ್ತಾರೆ. ಈ ರಸ್ತೆಗಳು ಅಚ್ಚುಕಟ್ಟಾಗಿ ಇದ್ದರೆ ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಇಲ್ಲದಿದ್ದರೆ ರೈತರಿಗೆ ಕಾಲು, ಮಂಡಿ, ಸೊಂಟ ನೋವಿನ ಸಮಸ್ಯೆ ಎದುರಾಗುತ್ತದೆ ಎಂದು ಈ ಸಮಯದಲ್ಲಿ ಹೇಳಿದರು.
ಈ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿ ತಕ್ಷಣವೇ ಸರ್ಕಾರಕ್ಕೆ ಅನುದಾನ ಕೋರಿ ಪತ್ರ ಬರೆದಾಗ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಂಸದರು ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ ಪರಿಣಾಮ ಆದ್ಯತೆ ಮೇರೆಗೆ ಅಭಿವೃದ್ದಿ ಕೆಲಸಗಳು ಕೈಗೊಳ್ಳಲು ಅನುಕೂಲವಾಯಿತು ಎಂದರು.
ರೈತರು ಮಾತನಾಡುತ್ತಾ, ಕಳೆದ 20ವರ್ಷಗಳಿಂದ ಕೊನೆಯ ಭಾಗಕ್ಕೆ ತಲುಪದಿದ್ದ ನೀರು ನೀವು ಅಧ್ಯಕ್ಷರಾದ ನಂತರ ತಲುಪಿಸಿರುವುದು ಅನ್ನದಾತರ ಬಾಳಲ್ಲಿ ಹರ್ಷ ಮೂಡಿಸಿದೆ. ಕಾಡಾ ಅಧ್ಯಕ್ಷರಾಗಿ ಹಲವಾರು ದಾಖಲೆಗಳನ್ನು ನಿರ್ಮಾಣ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿ ನಿಲ್ಲುವಂತೆ ಮಾಡಿದ್ದೀರಾ, ನರೇಗಾ ಬಳಸಿಕೊಂಡು ನಾಲೆಗಳು ಸ್ವಚ್ಛ ಮಾಡಿರುವುದು ಒಂದು ವಿಶೇಷ ದಾಖಲೆ, ಮುಂದಿನ ದಿನಗಳಲ್ಲಿ ಮಾದರಿ ಕಾಡಾ ಪ್ರಾಧಿಕಾರ ಮಾಡುವ ನಿಮ್ಮ ಕನಸಿಗೆ ಭಗವಂತ ಆಶೀರ್ವಾದ ನೀಡಲಿ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ವಿನಾಯಕ್ ಅವರು, ಗಂಗಣ್ಣ, ಶ್ರೀನಿವಾಸ್, ಅಮುದಾ, ಅಭಿಯಂತರರಾದ ಪುನೀತ್ ಮತ್ತು ಕಿರಣ್, ಅಚ್ಚುಕಟ್ಟು ಭಾಗದ ರೈತರು, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು, ಗ್ರಾಮದ ರೈತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post