ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಮಗೆ ವಿದ್ಯೆ ಕಲಿಸಿದ ಗುರುಗಳು ಮುಂದೊಂದು ದಿನ ನಮ್ಮನ್ನು ಕಂಡು ಹೆಮ್ಮೆ ಪಡುವಂತಹ ಪ್ರಜೆಗಳಾಗಿ ಹೊರಹೊಮ್ಮಿ ಎಂದು ಖ್ಯಾತ ಚಲನಚಿತ್ರ ನಟ ಪ್ರಥಮ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಇಂದು ನಗರದ ಜೆಎನ್ಎನ್ಸಿಇ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಉತ್ಥಾನ – 2021’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಹಿರಿಯರ ಮಾತಿನಂತೆ ನಮ್ಮ ಸಾಧನೆಯೇ ನಮ್ಮ ಗುರುಗಳಿಗೆ ನಾವು ನೀಡುವ ಗೌರವ ಎಂದು ಹೇಳಿದರು.


ನೂತನ ಚಲನಚಿತ್ರ ನಟ ಭಯಂಕರ ಸಿನಿಮಾ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಉಪೇಂದ್ರ ಅವರು ಸಿನಿಮಾ ಹಾಡಿಗೆ ಧ್ವನಿ ನೀಡಿದ್ದಾರೆ. ಇದಾದ ನಂತರ ಡ್ರೋಣ್ ಪ್ರಥಮ್ ಸಿನಿಮಾ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದ್ದೇವೆ. ತೊಂಬತ್ತರ ದಶಕದಲ್ಲಿ ಬಂದ ಸ್ಕ್ಯಾಮ್ ಚಿತ್ರಗಳಿಂದ ಪ್ರೇರಣೆಗೊಂಡು ಈ ಸಿನಿಮಾ ನಿರ್ಮಾಣವಾಗುತ್ತಿದೆ. ಒಬ್ಬ ವ್ಯಕ್ತಿ ತನ್ನ ಮಾತಿನಿಂದ ಹೇಗೆ ಸಮಾಜವನ್ನು ದಾರಿ ತಪ್ಪಿಸುತ್ತಾರೆ ಎಂಬ ವಿಷಯದ ಹಾಸ್ಯ ಭರಿತ ಸಿನಿಮಾ ಇದಾಗಿದೆ ಎಂದರು.


ಬಿಗ್ ಬಾಸ್ನಲ್ಲಿ ಗೆದ್ದ ಹಣವನ್ನು ಯೋಧರ ಕುಟುಂಬಗಳಿಗೆ ಅರ್ಪಿಸುವ ನಿಶ್ಚಯ ಮಾಡಲಾಗಿತ್ತು. ಅದರಂತೆ ನಮ್ಮ ತಂಡದ ಸದಸ್ಯರ ಸಹಕಾರದಿಂದ ಯೋಧರ ಕುಟುಂಬಗಳಿಗೆ ಸಹಾಯ ಮಾಡಿದ ತೃಪ್ತಿ ನನಗಿದೆ. 75 ವರ್ಷಗಳನ್ನು ಪೂರೈಸಿರುವ ಕನ್ನಡ ಚಿತ್ರರಂಗ ನಮ್ಮೆಲ್ಲರ ಹೆಮ್ಮೆ. ಕನ್ನಡ ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ, ಕಲಾವಿದರನ್ನು ಚಿತ್ರರಂಗವನ್ನು ಬೆಳೆಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್. ವಿಶ್ವನಾಥ, ಉಪಾಧ್ಯಕ್ಷರಾದ ಟಿ.ಆರ್. ಅಶ್ವತನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಸ್.ಎನ್. ನಾಗರಾಜ, ಖಜಾಂಚಿ ಸಿ.ಆರ್.ನಾಗರಾಜ, ಕುಲಸಚಿವ ಪ್ರೋ. ಹೂವಯ್ಯಗೌಡ, ಜೆ.ಎನ್.ಎನ್.ಸಿ.ಇ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ.ಪಿ, ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಡಾ.ಸಿ. ಶ್ರೀಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಕಾಲೇಜುಗಳ ಸುಮಾರು 140 ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗಾಗಿ ಮತ್ತೆ ಹಾಡಿತು ಕೋಗಿಲೆ, ಅವನೇ ಶ್ರೀಮನ್ನಾರಾಯಣ, ಕಿಂದರಜೋಗಿ, ಕಲಾವಿದ, ಡ್ಯಾನ್ಸ್ ರಾಜಾ ಡ್ಯಾನ್ಸ್, ಸಾಂಗ್ಲಿಯಾನ, ಉಳಿದವರು ಕಂಡಂತೆ, ಮಾಯಾಬಜಾರ್ ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















