ಕಲ್ಪ ಮೀಡಿಯಾ ಹೌಸ್
ಸಾಗರ: ಸುಪ್ರೀಂ ಕೋರ್ಟ್ ಆದೇಶದಂತೆ ಸಕ್ರಮವಲ್ಲದ ಧಾರ್ಮಿಕ ಸ್ಥಳಗಳನ್ನು ತಕ್ಷಣವೇ ತೆರವು ಮಾಡಲಾಗುವುದು ಎನ್ನುವ ವಿಷಯ ನಿಜವಲ್ಲ ಎಂದು ಬಿಜೆಪಿ ನಗರಾಧ್ಯಕ್ಷ ಗಣೇಶ ಪ್ರಸಾದ್ ಸ್ಪಷ್ಟನೆ ನೀಡಿದರು.
ಪಟ್ಟಣದ ಅಜಿತ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಗರಸಭಾ ಅಧ್ಯಕ್ಷರು, ನಗರಾಡಳಿತದ ಕಡೆಯಿಂದ ಸಮಸ್ಯೆ ಪರಿಹಾರಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ಧಾರ್ಮಿಕ ಸ್ಥಳಗಳ ಬಗ್ಗೆ ತಮ್ಮಲ್ಲಿ ಇರುವ ದಾಖಲೆಗಳನ್ನು ನೀಡಲು ಸಂಬಂಧ ಪಟ್ಟವರಲ್ಲಿ ವಿನಂತಿಸಿದರು. ಹಾಗೂ ಅದರಲ್ಲಿ ನ್ಯೂನ್ಯತೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿ ಕೊಡುವುದಾಗಿ ಮತ್ತು ಧಾರ್ಮಿಕ ಸ್ಥಳಗಳನ್ನು ಉಳಿಸಿಕೊಂಡು ಹೋಗಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು.
ಸಭೆಯಲ್ಲಿದ್ದ ಧಾರ್ಮಿಕ ಸ್ಥಳಗಳ ಪ್ರಮುಖರೆಲ್ಲರೂ ಬಿಜೆಪಿ ಪಕ್ಷವು ನಗರಾಡಳಿತದ ಪರವಾಗಿ ನೀಡಿದ ಭರವಸೆಗಳಿಗಾಗಿ ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿ, ಅನೇಕ ಅನುಮಾನಗಳ ಬಗ್ಗೆ ಸ್ಪಷ್ಟನೆ ಪಡೆದುಕೊಂಡರು. ಧಾರ್ಮಿಕ ಜನತೆಯ ಪರವಾಗಿ ಅಗತ್ಯವಿರುವ ಎಲ್ಲಾ ಸಹಕಾರ ನೀಡಲು ಪಕ್ಷ ಬದ್ಧವಾಗಿರುವುದಾಗಿ ಗಣೇಶ್ ಪ್ರಸಾದ್ ತಿಳಿಸಿದರು.
ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅವರ ಸಲಹೆ ಮೇರೆಗೆ ಆಯೋಜಿಸಲಾಗಿದ್ದ ಈ ಸಭೆಯಲ್ಲಿ ೬೫ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರಗಳು ಹಾಗೂ ದೇವಸ್ಥಾನಗಳ ಪ್ರಮುಖರು, ವಿವಿಧ ಸಮುದಾಯಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸಾಗರ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ತುಕಾರಾಮ, ನಗರಸಭಾ ಸದಸ್ಯ ಶ್ರೀನಿವಾಸ, ದೀಪಕ್ ಮರೂರ್ ಹಾಗೂ ರತ್ನಾಕರ ಶೇಟ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post