ಶ್ರೀನಗರ;ಅ-10:ಭಾರತೀಯ ಸೇನೆ ಉಗ್ರರ ವಿರುದ್ಧ ನಡೆಸಿದ ಸರ್ಜಿಕಲ್ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿರುವ ಭಯೋತ್ಪಾದಕರು, ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಬಳಿ ಪಾಕ್ ಯೋಧರ ಸಮವಸ್ತ್ರ ಧರಿಸಿ ಅಡ್ಡಾಡುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಯಲ್ಲಿ ಲಷ್ಕರ್ ಇ ತೊಯ್ಬಾ(ಎಲ್ಇಟಿ) ಉಗ್ರ ಸಂಘಟನೆಗೆ ಹೆಚ್ಚು ಹಾನಿ ಉಂಟಾಗಿದ್ದು, ಎಲ್ಇಟಿ ಉಗ್ರ ಸಂಘಟನೆಗೆ ಸೇರಿದ 20ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ ಎಂದು ಸೇನೆ ತಿಳಿಸಿತ್ತು. ಈ ನಿಟ್ಟಿನಲ್ಲಿ ಭಾರತದಲ್ಲಿ ಹೆಚ್ಚು ಹಾನಿ ಸಂಭವಿಸುವ ರೀತಿಯಲ್ಲಿ ದಾಳಿ ನಡೆಸಲು ಎಲ್ ಇ ಟಿ ಉಗ್ರ ಸಂಘಟನೆ ಸಂಚು ರೂಪಿಸಿದ್ದು, ಸಂಸತ್ ಭವನ, ದೆಹಲಿ ಸಚಿವಾಲಯಗಳು, ಅಕ್ಷರಧಾಮ ದೇವಾಲಯ ಉಗ್ರರ ಹಿಟ್ ಲಿಸ್ಟ್ ನಲ್ಲಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.
ಈ ನಡುವೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಸಹ ಸಂಸತ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದು ಪಾಕಿಸ್ತಾನದ ಮೂರು ಉಗ್ರ ಸಂಘಟನೆಗಳ ಉಗ್ರರು ಭಾರತದೊಳಗೆ ನುಸುಳಲು ಸಿದ್ಧರಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.














