ಕಲ್ಪ ಮೀಡಿಯಾ ಹೌಸ್ | ಸೊರಬ |
ಸಹಕಾರಿ ಕ್ಷೇತ್ರ, ಗ್ರಾಮ ಪಂಚಾಯತಿ ಹಾಗೂ ಶಾಲೆಗಳನ್ನು ಹೊಂದಿದ ಯಾವುದೇ ಗ್ರಾಮ ಅಭಿವೃದ್ಧಿಯಿಂದ ಹಿಂದುಳಿಯಲು ಸಾಧ್ಯವೇ ಇಲ್ಲ. ಪಡೆದ ಸಾಲವನ್ನು ಸಮರ್ಪಕ ಬಳಕೆ ಮತ್ತು ಮರುಪಾವತಿ ಬಗ್ಗೆ ರೈತರು ಕಾಳಜಿ ವಹಿಸಿದಾಗ ಬ್ಯಾಂಕ್ ಹಾಗೂ ಅವರ ವೈಯಕ್ತಿಕ ಜೀವನಕ್ಕೆ ಆಗುವ ನಷ್ಟವನ್ನು ತಪ್ಪಿಸುತ್ತದೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ನ ಅಧ್ಯಕ್ಷ ಚನ್ನವೀರಪ್ಪ ಹೇಳಿದರು.
ತಾಲ್ಲೂಕಿನ ಹರೀಶಿ ಗ್ರಾಮದ ವಿದ್ಯಾನಗರಲ್ಲಿ ಜಿಲ್ಲಾ ಸಹಕಾರ ಕೇಂದ್ರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರೈತ ಸದಸ್ಯರಿಗೆ ಬೆಳೆ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಆಡಳಿತದಲ್ಲಿದ್ದಾಗ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿಕೆ ಘೋಷಣೆಯಿಂದಾಗಿ ಸಾಕಷ್ಟು ರೈತರು ಇದರ ಪ್ರಯೋಜನ ಪಡೆಯುವಂತಾಗಿದೆ. ಈ ಹಿಂದೆ ಈ ರೈತರು ಆರ್ಥಿಕ ಸಹಾಯಕ್ಕಾಗಿ ಪರರ ಮನೆ ಅಥವಾ ಖಾಸಗಿ ಬ್ಯಾಂಕುಗಳ ಬಾಗಿಲು ಕಾಯುವ ಅನಿವಾರ್ಯತೆ ಇತ್ತು. ಅಲ್ಲದೇ ಸಾಲ ನೀಡಿಕೆಯೂ ಕೂಡಾ ವಿಳಂಬವಾಗುತ್ತಿತ್ತು. ಅವೆಲ್ಲವನ್ನೂ ತಪ್ಪಿಸಿದ ಕೀರ್ತಿ ಬಿ.ಎಸ್.ವೈ ಯವರದ್ದು ಎಂದರು.
ಬ್ಯಾಂಕ್ನ ಜಿಲ್ಲಾ ನಿರ್ದೇಶಕ ಶ್ರೀಪಾದ ಹೆಗಡೆ ಮಾತನಾಡಿ, ಸಹಕಾರಿ ಸಂಘಗಳು ವರ್ಗ, ಜಾತಿ, ಪಕ್ಷ ಮೀರಿ ಬೆಳೆದು ರೈತರುಗಳಿಗೆ ಹಾಗೂ ಮದ್ಯಮ ವರ್ಗದವರಿಗೆ ಆರ್ಥಿಕವಾಗಿ ನೆರವನ್ನು ನೀಡುತ್ತಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳದೇ ಬಹಳಷ್ಟು ಫಲಾನುಭವಿಗಳು ಸಾಲ ತೆಗೆದುಕೊಳ್ಳುವಾಗ ಡಿಸಿಸಿ ಬ್ಯಾಂಕಿನತ್ತ ಹಾಗೂ ಠೇವಣಿ ಇಡುವಾಗ ಖಾಸಗಿ ಬ್ಯಾಂಕ್ಗಳ ಮೊರೆ ಹೋಗುತ್ತಿರುವುದು ದುರದೃಷ್ಟಕರ ಎಂದರು.
ಹರೀಶಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಲದ ಚೆಕ್, ಠೇವಣಿ ಚೆಕ್, ಹಾಗೂ ಷೇರ್ ಬಾಂಡ್ಗಳನ್ನು ವಿತರಣೆ ಹಾಗೂ 78 ಲಕ್ಷ ರೂ. ಗಳ ಸಾಲದ ಚೆಕ್ ವಿತರಿಸಲಾಯಿತು.
ಮಾಜಿ ತಾ.ಪಂ ಸದಸ್ಯ ಸುನೀಲ್ ಕುಮಾರ, ಗ್ರಾ.ಪಂ ಅಧ್ಯಕ್ಷ ರಾಕೇಶ, ತೋಟೋತ್ಪನ್ನ ಸಹಕಾರಿ ಸಂಘದ ಸದಸ್ಯ ಶಶಿಕಾಂತ, ಎಪಿಎಮ್ಸಿ ಸದಸ್ಯ ಜಯಶೀಲಗೌಡ, ಯೂನಿಯನ್ ಉಪಾಧ್ಯಕ್ಷ ಮರದರ ಮಂಜಪ್ಪ, ಆನವಟ್ಟಿ ಪಿಎಸಿಎಸ್ ನ ರಾಜೇಂದ್ರ ನಾಯ್ಕ, ಮಣ್ಣೆತ್ತಿ ಪರಮೇಶ್ವರ, ಮಾರೆಪ್ಪ, ಈಸೂಫ್ ಸಾಬ್, ಸತೀಶ ಹೆಗಡೆ, ಕ್ಷೇತ್ರಾಧಿಕಾರಿಗಳಾದ ಸಂತೋಷ ಹಂಚಿ, ಮೃತ್ಯುಂಜಯ, ವೀರಪ್ಪಗೌಡ ಮತ್ತಿತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post