ಬೆಂಗಳೂರು, ಅ.13: ಗ್ರಾಹಕರಿಗೆ ಮತ್ತೊಂದು ಬಿಸಿ ತಟ್ಟಲಿದೆ. ಈಗಾಗಲೇ ಒಂದೆಡೆ ಲಾರಿ ಚಾಲಕರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಪೆಟ್ರೋಲಿಯಂ ಡೀಲರ್ ಗಳಿಗೆ ನೀಡಬೇಕಾದ ಸವಲತ್ತುಗಳನ್ನು ಸರಿಯಾಗಿ ನೀಡಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಪೆಟ್ರೋಲ್ ವಿತರಕರು ಅ.19 ಮತ್ತು 26 ರಂದು ಮುಷ್ಕರ ನಡೆಸಲಿದ್ದಾರೆ.
ಬಂಕ್ ಮಾಲೀಕರು ಎರಡು ದಿನ ಮುಷ್ಕರ ನಡೆಸುತ್ತಿರುವುದರಿಂದ ವಾಹನ ಸವಾರರಿಗೆ ಇದರ ಬಿಸಿ ತಟ್ಟಲಿದೆ. ಸರ್ಕಾರ ಒಪ್ಪಿಕೊಂಡಂತೆ ಅಪೂರ್ವಚಂದ್ರ ಸಮಿತಿ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡಬೇಕು. ಪೆಟ್ರೋಲಿಯಂ ಡೀಲರ್ಗಳಿಗೆ ನೀಡಬೇಕಾದ ಕಮಿಷನ್, ಜನರೇಟರ್ ವೆಚ್ಚ, ಕಾರ್ಮಿಕರ ಖರ್ಚಿನ ಒಂದು ಪಾಲು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಅ. 19 ಮತ್ತು 26ರಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಿದ್ದೇವೆ. ಗ್ರಾಹಕರಿಗೆ ಅನಾನುಕೂಲವಾಗದಂತೆ ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳುವುದಾಗಿ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ತಿಳಿಸಿದ್ದಾರೆ.














