ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಗೆ 2021ರ ವ್ಯವಹಾರದ ಶ್ರೇಷ್ಠತೆಗಾಗಿ ನೀಡುವ ಪ್ರತಿಷ್ಠಿತ ಸಿಐಐ-ಎಕ್ಸಿಮ್ ಬ್ಯಾಂಕ್ ಬ್ಯುಸಿನೆಸ್ ಎಕ್ಸಲೆನ್ಸ್ (ವ್ಯವಹಾರ ಶ್ರೇಷ್ಠತೆ) ಅತ್ಯುನ್ನತ ಪ್ರಶಸ್ತಿ ಲಭಿಸಿದ್ದು, ಬೆಂಗಳೂರಿನ ಹೋಟಲ್ ತಾಜ್ ನಲ್ಲಿ ನಡೆದ ವೈಭವಯುತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಮತ್ತು ಕಂಪನಿಯ ಹಿರಿಯ ಕಾರ್ಯ ನಿರ್ವಾಹಕರುಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.
ಒಟ್ಟು ಗುಣಮಟ್ಟದ ನಿರ್ವಹಣೆಯ ಪರಿಕಲ್ಪನೆಯೊಂದಿಗೆ ಉದ್ಯಮದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಗುಣಮಟ್ಟ ಆಂದೋಲನದ ಪ್ರವರ್ತಕರಾದ ದಿ. ರವಿ ಕಿರ್ಲೋಸ್ಕರ್ ಅವರ ನೆನಪಿಗಾಗಿ ರವಿ ಕಿರ್ಲೋಸ್ಕರ್ ಗುಣಮಟ್ಟದ ಪ್ರಶಸ್ತಿ ಸ್ಪರ್ಧೆಯನ್ನು 1984ರಲ್ಲಿ ಕಿರ್ಲೋಸ್ಕರ್ ಸಮೂಹ ಸಂಸ್ಥೆಗಳಲ್ಲಿ ಪ್ರಾರಂಭಿಸಲಾಗಿದ್ದು, ಇದರೊಂದಿಗೆ ವ್ಯವಹಾರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಕಿರ್ಲೋಸ್ಕರ್ ಸಮೂಹ ಸಂಸ್ಥೆಯ ಪ್ರಯಾಣ ಪ್ರಾರಂಭವಾಯಿತು. ಇದು ಸಮೂಹ ಸಂಸ್ಥೆಗಳಲ್ಲಿನ ಉತ್ಪನ್ನಗಳ ಗುಣಮಟ್ಟ, ಪದ್ಧತಿಗಳು, ಪ್ರಕ್ರಿಯೆಗಳು ಮತ್ತು ವ್ಯವಾಹಾರದ ಕಾರ್ಯದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡಿತು ಮತ್ತು ಸಮೂಹ ಸಂಸ್ಥೆಗಳಲ್ಲಿ ಗಮನಾರ್ಹ ಮಟ್ಟವನ್ನು ಸಾಧಿಸಲು ಮತ್ತು ಉದ್ಯಮ ಶ್ರೇಷ್ಠತೆಯ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಲು ಅನುಕೂಲವಾಯಿತು.
ಕಿರ್ಲೋಸ್ಕರ್ ಸಮೂಹವು ಸಿಐಐ ಎಕ್ಸಿಮ್ ಬ್ಯಾಂಕ್ / ಇಎಫ್ಕ್ಯೂಎಮ್ ಮಾದರಿಯನ್ನು 2000ದಲ್ಲಿ ಪ್ರರಿಚಯಿಸಲ್ಪಟ್ಟಿತು. ಕಿರ್ಲೋಸ್ಕರ್ ಫೆರಸ್ ಸಂಸ್ಥೆಯು 2009-10ನೇ ಸಾಲಿನಿಂದ ಈ ಸಿಐಐ ಎಕ್ಸಿಮ್ ಮೌಲ್ಯಮಾಪನ (ಅಸೆಸ್ಮೆಂಟ್) ದಲ್ಲಿ ಭಾಗವಹಿಸಲು ಪ್ರಾರಂಭಿಸಿತು. ಕಿರ್ಲೋಸ್ಕರ್ ಫೆರಸ್ ಸಂಸ್ಥೆಯು ವ್ಯವಹಾರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಸವಾಲಿನ ಗುರಿಯೊಂದಿಗೆ ವರ್ಷದಿಂದ ವರ್ಷಕ್ಕೆ ಸ್ಥಿರವಾದ ಪ್ರಗತಿಪರವಾದ ಪ್ರದರ್ಶನವನ್ನು ಮಾಡುತ್ತಾ ಬಂದಿದ್ದು, ಈ ವರ್ಷ ಈ ಅತ್ಯುನ್ನತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುತ್ತದೆ.
ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ, ಆರ್.ವಿ.ಗುಮಾಸ್ತೆಯವರು ಮಾತನಾಡುತ್ತಾ, ಕಳದ 10 ವರ್ಷಗಳಿಂದ ಸಿಐಐನ ಮೌಲ್ಯಮಾಪನ (ಅಸೆಸ್ಮೆಂಟ್) ನಲ್ಲಿ ಭಾಗವಹಿಸುವುದರ ಮೂಲಕ ಉದ್ಯಮದಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಸಂಸ್ಥೆಯ ಪ್ರಯಾಣ, ಮೌಲ್ಯಮಾಪನದ ನಂತರ ಪ್ರತಿಕ್ರಯೆಗಳಿಂದ ನಿರಂತರ ಕಲಿಕೆಯ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಸುಧಾರಿಸುವ ಉದ್ದೇಶವನ್ನು ವಿವರಿಸಿದರು.
ಮೌಲ್ಯಮಾಪನ ಮಾಡಿದ ಸಿಐಐನ ಪ್ರತಿ ತಂಡವು ಸಂಸ್ಥೆಯಲ್ಲಿ ಪದ್ಧತಿಗಳನ್ನು ಕೇಂದ್ರೀಕರಿಸಿ ಬಲಪಡಿಸಲು ಸಲಹೆ ನೀಡಿದ್ದನ್ನು ವಿವರಿಸಿದರು. ಈ ಪ್ರಶಸ್ತಿಯನ್ನು ಸಾಧಿಸಲು ದಾರಿ ಮಾಡಿಕೊಟ್ಟ ಹಾಗೂ ಸುಧಾರಣೆಗಳಿಗೆ ಅಮೂಲ್ಯ ಅವಕಾಶಗಳನ್ನು ನೀಡಿದ ಮೌಲ್ಯಮಾಪನ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸಂಸ್ಥೆಯ ಎಲ್ಲಾ ಉದ್ಯೋಗಿಗಳು, ಗೌರವಾನ್ವಿತ ಗ್ರಾಹಕರು, ಪೂರೈಕೆದಾರರು, ಸುತ್ತ-ಮುತ್ತಲಿನ ಸಮುದಾಯ ಮತ್ತು ಎಲ್ಲಾ ಭಾಗೀದಾರರಿಗೂ ಸಹ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕಿರ್ಲೋಸ್ಕರ್ ಸಂಸ್ಥೆಯ ಛೇರಮನ್ ಅತುಲ್ ಸಿ ಕಿರ್ಲೋಸ್ಕರ್ ಅವರು ಡಿಜಿಟಲ್ ಸಂಪರ್ಕದ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಸಿಎಐಐ ಎಕ್ಸಿಮ್ / ಇಎಫ್ಕ್ಯೂಎಮ್ ಬಿಸಿನೆಸ್ ಮಾಡೆಲ್ ನ ಅನುಷ್ಠಾನದ ಮೂಲಕ ಭಾರತೀಯ ಕೈಗಾರಿಕೆಗಳನ್ನು ಪರಿವರ್ತಿಸಿ ಶ್ರೇಷ್ಠ ಕೈಗಾರಿಕೆಗಳಾಗಿ ಹೊರಹೊಮ್ಮುವಂತಹ ಇಂತಹ ಆಂದೋಲನವನ್ನು ಪ್ರಾರಂಭಿಸಿದಕ್ಕಾಗಿ ಸಿಐಐ-ಐಕ್ಯೂ ತಂಡವನ್ನು ಶ್ಲಾಘಿಸಿದರು.
ಈ ಮಾದರಿಯು ಉದ್ಯಮದ ಪ್ರತಿಯೊಂದು ಅಂಶವನ್ನು ಸ್ಪರ್ಧಾತ್ಮಕವಾಗಿಸಲು ಪ್ರೆರೇಪಿಸುತ್ತದೆ. ಉತ್ತಮವಾಗಿ ವಿನ್ಯಾಸಗೊಳಿಸಲಾದ ತರಬೇತಿ ಕಾರ್ಯಕ್ರಮಗಳು, ಉತ್ತಮ ಮಾರ್ಗದರ್ಶನ, ಉದ್ಯಮ ಮತ್ತು ವ್ಯವಹಾರ ಶ್ರೇಷ್ಠತೆಯ ಮೌಲ್ಯಮಾಪನಗಳಿಗೆ ಸಂಬಂಧಿಸಿದಂತೆ ಕಾರ್ಯಸಾಧ್ಯವಾದ ಪ್ರತಿಕ್ರಿಯೆಗಳ ಮೂಲಕ ನಮ್ಮ ಸುಧಾರಣೆಯ ವೇಗ ಮತ್ತು ಗುಣಮಟ್ಟವನ್ನು ತ್ವರಿತಗೊಳಿಸಲು ಸಿಐಐ-ಐಕ್ಯೂ ಸಂಸ್ಥೆಯ ಕೊಡುಗೆ ನಿಜವಾಗಿಯೂ ಶ್ಲಾಘನೀಯವಾಗಿದೆ ಎಂದರು.
ವ್ಯವಹಾರದಲ್ಲಿನ ಶ್ರೇಷ್ಠತೆಗಾಗಿ ಈ ಪ್ರತಿಷ್ಠಿತ ಮತ್ತು ಆಪೇಕ್ಷಿತ ಸಿಐಐ-ಎಕ್ಸಿಮ್ ಬ್ಯಾಂಕ್ ಪ್ರಶಸ್ತಿಯು ಲಭಿಸಿರುವುದಕ್ಕಾಗಿ, ಅತುಲ್ ಕಿರ್ಲೋಸ್ಕರ್ ರವರು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ನ ತಂಡವನ್ನು ಅಭಿನಂದಿಸಿದರು ಮತ್ತು ಈ ಪ್ರಯಾಣದಲ್ಲಿ ಇವರಿಗೆ ಬೆಂಬಲ ನೀಡಿದ ಎಲ್ಲಾ ಭಾಗೀದಾರರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ವರದಿ: ಮುರಳೀಧರ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post