ಬೆಂಗಳೂರು: ಅ:28: ಬೃಹತ್ ತಿರಂಗ ಭಾರತ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದು, ಬರುವ ಜನವರಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಯಾತ್ರೆಯ ಸ್ಕ್ವಾಡ್ರನ್ ಲೀಡರ್ ಹೆಚ್.ಎಸ್.ಭಾಸ್ಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾತ್ರೆ ಮಾಡಿದ್ದೇವೆ. 29 ರಾಜ್ಯಗಳು ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 26 ದಿನ, 79 ವಾಹನಗಳು, 144 ಧ್ವಜ ಪಾಲಕರು ಸಂಚರಿಸಿ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿ ಬಂದಿದ್ದೇವೆ ಎಂದರು.
ಪ್ರಧಾನಿ ನರೇಂದ್ರಮೋದಿಯವರು ಕರೆ ಕೊಟ್ಟಿದ್ದನ್ನು ಮುಂದಿಟ್ಟುಕೊಂಡು ನಾವು ತಿರಂಗ ಯಾತ್ರೆ ಮಾಡಿದ್ದೇವೆ. ಆಯಾಯ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಪ್ರಮುಖ ಅಧಿಕಾರಿಗಳನ್ನು ಭೇಟಿ ಮಾಡಿ ಯಾತ್ರೆಯನ್ನು ಯಶಸ್ವಿಗೊಳಿಸಲು ಮನವಿ ಮಾಡಿದೆವು.
ಕಳೆದ ಆಗಸ್ಟ್ನಲ್ಲಿ ಪ್ರಾರಂಭಿಸಿ ಇದೀಗ ಯಶಸ್ವಿಯಾಗಿದ್ದೇವೆ. ಎಲ್ಲರಲ್ಲೂ ರಾಷ್ಟ್ರಾಭಿಮಾನ ಮೂಡಿಸಿ ತಿರಂಗದ ಮಹತ್ವವನ್ನು ತಿಳಿಸಿಕೊಟ್ಟಿದ್ದೇವೆ ಎಂದರು.
ದೇಶದ ಎಲ್ಲ ಜನರೂ ಮನೆಯಲ್ಲಿ ದೇಶದ ಧ್ವಜವನ್ನು ಹೊಂದಿರಬೇಕು. ಮಂತ್ರಿಗಳ ಕಚೇರಿ, ಅಧಿಕಾರಿಗಳ ಕಚೇರಿಯಲ್ಲಿ ಧ್ವಜಕ್ಕೆ ಸೂಕ್ತವಾದ ಸ್ಥಳ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ತಿರಂಗದ ಸ್ವರ್ಣ ಚತುಷ್ಪಥ ಯಾತ್ರೆ, ಹಿಮಾಲಯ ಯಾತ್ರೆ, ಈಶಾನ್ಯ ರಾಜ್ಯಗಳ ಯಾತ್ರೆ, ಸಮುದ್ರ ದಂಡೆ ಯಾತ್ರೆ ಮಾಡಿದ್ದೇವೆ. ಈಗ ನಾವು ಸ್ವಾತಂತ್ರ್ಯದ 70ರ ಹೊಸ್ತಿಲಲ್ಲಿದ್ದು, ಜನವರಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಆರ್ಥಿಕ ನೆರವಿನ ಅಗತ್ಯವಿದೆ. ಹಾಗಾಗಿ ಎನ್ಜಿಒಗಳು, ಸರ್ಕಾರ, ಸಂಘ-ಸಂಸ್ಥೆಗಳು ಸ್ವ ಇಚ್ಛೆಯಿಂದ ಧನ ಸಹಾಯ ಮಾಡಬಹುದಾಗಿದೆ ಎಂದು ಕೋರಿದರು.
ವಿವರಗಳಿಗೆ 9901278838 ಸಂಪರ್ಕಸಬೇಕೆಂದು ಭಾಸ್ಕರ್ ಕೋರಿದ್ದಾರೆ.















