ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳಂತಹ ಮಾನವ ನಿರ್ಮಿತ ದುರಂತಗಳನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ Kuvempu University ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಸತ್ಯಪ್ರಕಾಶ್ ಎಂ. ಆರ್. ಅಭಿಪ್ರಾಯಪಟ್ಟರು.
ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ವಿಶ್ವವಿದ್ಯಾಲಯದ ವನ್ಯಜೀವಿ ನಿರ್ವಹಣಾ ವಿಭಾಗದ ವತಿಯಿಂದ ಆಯೋಜಿಸಲಾಗಿರುವ ಮೂರು ದಿವಸಗಳ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2021ರ ಅಂತ್ಯದ ವೇಳೆಗೆ ಭಾರತದ ಅರಣ್ಯ ವ್ಯಾಪ್ತಿ 2,261 ಚದುರ ಕಿ.ಮೀ ಇದ್ದು, ಒಟ್ಟಾರೆ ಭೂಭಾಗದ ಶೇ. 24.62ರಷ್ಟಿದೆ ಎಂದು ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಬಿಡುಗಡೆ ಮಾಡಿರುವ ಭಾರತೀಯ ಅರಣ್ಯ ಸಮೀಕ್ಷೆಯ ವರದಿ ತಿಳಿಸಿರುವುದು ಚೇತೋಹಾರಿ ವಿಚಾರ. ಆದರೆ, ಸರ್ಕಾರಗಳು ನದಿ ಜೋಡಣೆ, ಬಹು ಉದ್ದೇಶಿತ ಬೃಹತ್ ಅಣೆಕಟ್ಟುಗಳ ನಿರ್ಮಾಣ, ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗಗಳ ನಿರ್ಮಾಣ, ಹೀಗೆ ಬೃಹತ್ ಯೋಜನೆಗಳ ಬಗೆಗೇ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ ಪರಿಸರ ಸಂರಕ್ಷಣೆಗೆ ವ್ಯತಿರಿಕ್ತವಾಗಿ ಪರಿಣಮಿಸುವ ಸಾಧ್ಯತೆ ಇದೆ.
ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ, ಬಡಾವಣೆಗಳ ನಿರ್ಮಾಣ, ಬೃಹತ್ ಅಣೆಕಟ್ಟುಗಳು, ಹೀಗೆ ವಿವಿಧ ಮೂಲಸೌಕರ್ಯಗಳ ಯೋಜನೆಗಳಿಗೆ ಕೃಷಿ ಮತ್ತು ಅರಣ್ಯ ಭೂಮಿಯೇ ಹೆಚ್ಚು ಬಳಕೆಯಾಗುತ್ತಿರುವುದು. ಇಂಥಹಾ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಿಂದ ಒಂದೆಡೆ ಅರಣ್ಯವನ್ನು ಅವಲಂಬಿಸಿರುವ ಸಮುದಾಯಗಳು, ಮತ್ತು ಗ್ರಾಮಸ್ಥರು ನಿರಾಶ್ರಿತರಾದರೆ, ಇನ್ನೊಂದೆಡೆ ಆ ಭಾಗದ ಜೀವ ಸಂಕುಲ ಮತ್ತು ಅರಣ್ಯ ಪ್ರದೇಶವೇ ನಾಶವಾಗುತ್ತದೆ. ಹೀಗಾಗಿ ಅಭಿವೃದ್ಧಿ ಯೋಜನೆಗಳನ್ನು ಸುಸ್ಥಿರ ಪರಿಕಲ್ಪನೆಯಡಿ ಮರುವ್ಯಾಖ್ಯಾನಿಸುವ ಅನಿವಾರ್ಯತೆಯಿದೆ. ಹೀಗಾದಾಗ ಮಾತ್ರ ಜೀವವೈವಿಧ್ಯತೆ, ಮತ್ತು ವನ್ಯಜೀವಿಗಳ ಸಂರಕ್ಷಣೆ ಸಾಧ್ಯ ಎಂದರು.
ವಿಭಾಗದ ಅಧ್ಯಕ್ಷ ಪ್ರೊ. ವಿಜಯಕುಮಾರ ಮಾತನಾಡಿ, ವನ್ಯಜೀವಿಗಳ ಸಂರಕ್ಷಣೆ ಒಟ್ಟಾರೆ ಅರಣ್ಯ ಪ್ರದೇಶದ ಉಳಿವಿಗೆ ನೇರವಾಗಿ ಸಂಬಂಧಪಟ್ಟಿದೆ. ಪರಿಸರದ ಆಡಿಟಿಂಗ್, ಪರಿಣಾಮಗಳ ಅಧ್ಯಯನಗಳನ್ನು ಕೈಗೊಳ್ಳದೆ ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸೂಕ್ತವಲ್ಲ. ಈ ರೀತಿಯ ವಿದ್ಯಮಾನಗಳನ್ನು ಪ್ರಶ್ನಿಸುವ ಧೋರಣೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Also read: ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ ನಿಮಿತ್ತ ಕಾಂಗ್ರೆಸ್ ಮುಖಂಡರ ಪ್ರತಿಭಟನೆ
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಡಾ. ಹರೀಶ್ ಪ್ರಕಾಶ್ ಪರಿಸರ ಅಧ್ಯಯನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಾ. ಪ್ರಮೋದ್, ಡಾ. ಹರೀಶ್, ಡಾ. ರಾಘವೇಂದ್ರ ಗೌಡ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post