ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಭಾರತದ ಸ್ವಾತಂತ್ರ ಚಳವಳಿಯ ಚರಿತ್ರೆಯಲ್ಲಿ ಕರ್ನಾಟಕದ ಅರಸರು, ರಾಣಿಯರ ಸ್ವಾತಂತ್ರ ಹೋರಾಟಗಳ ಪಾಲು ಬಹುಮಹತ್ವದ್ದಾಗಿದೆ. ಇವುಗಳ ಕುರಿತು ಯಥೇಚ್ಛ ಮಾಹಿತಿಯು ಶಿವಮೊಗ್ಗದ ಬಂಧೀಖಾನೆಯಲ್ಲಿದ್ದು, ಯುವ ಇತಿಹಾಸ ಸಂಶೋಧಕರು ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಬೇಕು ಎಂದು ಗುಜರಾತ್ ಕೇಂದ್ರಿಯ ವಿವಿ ಮತ್ತು ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಎಸ್. ಎ. ಬಾರಿ Prof. S. Bari ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ Kuvempu University ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಸ್ವಾತಂತ್ರ ಸಂಗ್ರಾಮ ಮತ್ತು ಕರ್ನಾಟಕದ ರಾಷ್ಟ್ರೀಯ ಚಳವಳಿ ವಿಷಯ ಕುರಿತ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸ್ವಾತಂತ್ರ ಹೋರಾಟವು ಕೇವಲ ಬ್ರಿಟಿಷರ ವಿರುದ್ಧದ ಹೋರಾಟವಲ್ಲ. ಈ ನೆಲದ ಅನೇಕ ದೇಶೀಯ ಸಂಸ್ಥಾನಗಳು ಬ್ರಿಟಿಷರು, ಪೋರ್ಚುಗೀಸರು, ಡಚ್ಚರ ದಬ್ಬಾಳಿಕೆ, ಆಕ್ರಮಣಗಳ ವಿರುದ್ಧ ಹೋರಾಡಿದ್ದಾರೆ. ಕರ್ನಾಟಕದ ಕೆಳದಿ ಚೆನ್ನಮ್ಮ, ಕೆಳದಿಯ ಶಿವಪ್ಪ ನಾಯಕ, ಉಳ್ಳಾಲದ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ವೀರ ಸಂಗೊಳ್ಳಿ ರಾಯಣ್ಣ, ಹೈದರ್ ಅಲಿ, ಟಿಪ್ಪು ಸುಲ್ತಾನ್ ಸೇರಿದಂತೆ ಅನೇಕ ಪರಾಕ್ರಮಿಗಳು ಸ್ವಾತಂತ್ರ ಸಂಗ್ರಾಮದ ಕಿಚ್ಚು ಹಚ್ಚಿದ್ದಾರೆ. ಇದಲ್ಲದೇ ಈಸೂರಿನ ಸ್ವಾತಂತ್ರ ಹೋರಾಟ, ಸುರಪುರದ ವೆಂಕಟಪ್ಪ ನಾಯಕನ ಪರಾಕ್ರಮ ಸೇರಿದಂತೆ ಸ್ಥಳೀಯ ಮಟ್ಟದಲ್ಲಿ ಅನೇಕ ಮಹಿಳೆಯರು ಸಹ ದೇಶೀಯ ಸ್ವಾತಂತ್ರ ಚಳವಳಿಗಳಲ್ಲಿ ತಮ್ಮ ಪ್ರತಿರೋಧವನ್ನು ದಾಖಲಿಸಿದ್ದಾರೆ ಎಂದರು.
Also read: ಹುಬ್ಬಳ್ಳಿ ಗಲಭೆ ಮಾಸ್ಟರ್ ಮೈಂಡ್ ವಸೀಂ ಹೆಡೆಮುರಿ ಕಟ್ಟಿದ ಪೊಲೀಸರು
ಈ ಕುರಿತಂತೆ ಮಹತ್ತರವಾದ ಐತಿಹಾಸಿಕ ಮಾಹಿತಿಗ್ರಂಥಗಳು ಶಿವಮೊಗ್ಗದ ಕೇಂದ್ರಬಂಧೀಖಾನೆಯಲ್ಲಿ ಇವೆ. ಇವುಗಳ ಕುರಿತು ಸಂಶೋಧಕರು ಗಮನ ನೀಡಿದಲ್ಲಿ ಈಗಾಗಲೇ ಖ್ಯಾತಿ ಪಡೆದಿರುವವರಲ್ಲದೇ ಹೊಸದಾಗಿ ಅನೇಕ ಮಹಿಳಾಮಣಿಗಳು, ಸ್ವಾತಂತ್ರಯೋಧರ ಕಥೆಗಳು, ಪರಾಕ್ರಮಗಳು ತಿಳಿಯಲ್ಪಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ. ಕುಲಸಚಿವೆ ಅನುರಾಧ ಜಿ., ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮತ್ತು ಸಿ.ಸಿ.ಬಿ.ಯ ಸಹಾಯಕ ಕಮೀಷನರ್ ಎಚ್.ಎಸ್. ಪರಮೇಶ್ವರ್, ವಿಭಾಗದ ಅಧ್ಯಕ್ಷೆ ಪ್ರೊ. ಸರ್ವಮಂಗಳಾ ಮಾತನಾಡಿದರು. ಕಾನೂನು ವಿವಿಯ ಕುಲಸಚಿವ ಡಾ. ಮೊಹಮ್ಮದ್ ಜುಬೇರ್, ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಶೇಜೇಶ್ವರ್, ಡಾ. ರೇಚೆಲ್ ಕುರಿಯನ್ ಉಪಸ್ಥಿತರಿದ್ದರು.
ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಪ್ರೊ. ಎಂ. ಜಮುನಾ, ಪ್ರೊ. ಅಶ್ವತ್ಥನಾರಾಯಣ, ಪ್ರೊ. ಡಿ. ಎಸ್. ಸೋಮಶೇಖರ್, ಪ್ರೊ. ಡಿ. ಎಸ್. ಪೂರ್ಣಾನಂದ, ಪ್ರೊ. ಜೆ. ಎಸ್. ಸದಾನಂದ, ಪ್ರೊ. ರಾಜಾರಾಂ ಹೆಗಡೆ, ಪ್ರೊ. ವೇಣುಗೋಪಾಲ್, ಡಾ. ಸದಾನಂದ ನೆಲಕುದ್ರಿ ಅವರುಗಳು ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರ, ಯುವಕರ-ಮಹಿಳೆಯರ ಭಾಗವಹಿಸುವಿಕೆ, ಮಾಧ್ಯಮಗಳ ಪಾತ್ರದ ಕುರಿತು ವಿಶೇಷ ಉಪನ್ಯಸಗಳನ್ನು ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post