Read - 2 minutes
ಕಲ್ಪ ಮೀಡಿಯಾ ಹೌಸ್ | ಸೊರಬ |
ದೇಶಾದ್ಯಂತ ರಾಷ್ಟ್ರೀಯ ಪಕ್ಷಗಳ ಆಡಳಿತ ವೈಖರಿಗೆ ಜನತೆ ಬೇಸತ್ತು ಜನ ಸಾಮಾನ್ಯರ ಪಕ್ಷವಾದ ಆಮ್ ಆದ್ಮಿ ಪಕ್ಷದಡೆ ಒಲವು ತೋರುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಪಂಜಾಬ್ ರಾಜ್ಯದ ಚುನಾವಣೆಯೇ ಸಾಕ್ಷಿಯಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಮೃತ್ ರಾಜ್ ಹೇಳಿದರು.
ಮಂಗಳವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಆಮ್ ಆದ್ಮಿ ಪಕ್ಷದ ಸೊರಬ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಮಂಜುನಾಥ ಉಪ್ಪಳ್ಳಿ ಅವರ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಹೃದಯವಾಗಿರುವ ದೆಹಲಿಯಲ್ಲಿ ಪಕ್ಷವು ಆಡಳಿತದಲ್ಲಿದ್ದು, ಉತ್ತಮವಾಗಿ ಆಡಳಿತ ನೀಡುತ್ತಿದೆ. ಶಿಕ್ಷಣ, ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಾ, ಭ್ರಷ್ಟಾಚಾರ ಮುಕ್ತವಾಗಿ ಪ್ರಾಮಾಣಿಕವಾಗಿ ಜನ ಸ್ನೇಹಿಯಾದ ಆಡಳಿತವನ್ನು ಅಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡುತ್ತಿದ್ದಾರೆ. ರೈತ ಹೋರಾಟಗಳಿಗೆ ಬೆಂಬಲ ನೀಡುವ ಜೊತೆಗೆ ರೈತರ ಪರವಾದ ಆಡಳಿತ ನೀಡಿದ್ದರ ಫಲವಾಗಿ ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬಂದಿದೆ. ಈ ಅಲೆ ದೇಶದಾದ್ಯಂತ ವ್ಯಾಪಿಸಿದ್ದು, ರಾಜ್ಯ ಮಾತ್ರವಲ್ಲದೇ, ನೆರೆಯ ಕೇರಳ, ಆಂದ್ರ ಪ್ರದೇಶ, ತಮಿಳುನಾಡು ರಾಜ್ಯದಲ್ಲಿಯೂ ಉತ್ತಮ ಜನ ಬೆಂಬಲ ದೊರೆಯುತ್ತಿದೆ. ಜೊತೆಗೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘವು ಬಾಹ್ಯವಾಗಿ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿಯೂ ಆಮ್ ಆದ್ಮಿ ಪಕ್ಷದ ಬಗ್ಗೆ ಅನೇಕ ಪ್ರಗತಿಪರರು, ಸುಶಿಕ್ಷಿತರು, ಪ್ರಜ್ಞಾವಂತರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರದಲ್ಲಿ ಪಕ್ಷದ ಸಂಘಟನಾ ಕೆಲಸ ಚುರುಕಿನಿಂದ ಸಾಗಿದೆ. ಕ್ಷೇತ್ರದಲ್ಲಿಯೂ ಪಕ್ಷದ ಸಂಘಟನೆ ಬಿರುಸಿನಿಂದ ಕೂಡಿದ್ದು, ಮುಂದಿನ ಒಂದು ವರ್ಷದೊಳಗೆ ಪಕ್ಷವನ್ನು ಹಣ, ಹೆಂಡ, ಜಾತಿ ಮುಕ್ತವಾಗಿ ಬಲಗೊಳಿಸಲಾಗುವುದು ಎಂದ ಅವರು, ಪಕ್ಷದ ಅಭ್ಯರ್ಥಿಯ ಆಯ್ಕೆಯೂ ಸಹ ಜನ ಸಾಮಾನ್ಯರ ಅಭಿಪ್ರಾಯದಂತೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾಕಾಂಕ್ಷಿಗಳಿಗೆ ಪಕ್ಷದ ಕೆಲಸಗಳನ್ನು ನೀಡಿ, ಪಕ್ಷದ ಚುನಾವಣಾ ವೀಕ್ಷಕರು ಅವರ ಕಾರ್ಯಪ್ರವೃತಿಯನ್ನು ಅವಲೋಕಿಸಿ ನಿರ್ಣಯಗೊಳ್ಳುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ದಾನಪ್ಪ ನಾಯ್ಕ, ಗೌರವಾಧ್ಯಕ್ಷ ಜಿ. ಬಂಗಾರಪ್ಪ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್. ಮಂಜುನಾಥ ಗೌಡ, ಪಕ್ಷದ ಮುಖಂಡರಾದ ಚಂದ್ರಕಾಂತ್ ರೇವಣಕರ್, ನವಿಲೇಶ್, ಮಂಜುನಾಥ ಉಪ್ಪಳ್ಳಿ, ಎಂ.ಕೆ. ಮೋಹನ್, ಜಾಫರ್ ಅಹಮ್ಮದ್, ಪ್ರಕಾಶ್ ಕೋನಾಪುರ, ಗಣೇಶ ಹೊಸನಗರ ಸೇರಿದಂತೆ ಮತ್ತಿತರರಿದ್ದರು.
ವರದಿ: ಮಧುರಾಮ್, ಸೊರಬ
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post