ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿವಿಧ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ರಾಷ್ಟ್ರೀಯ ಪ್ರಜ್ಞೆ ಏಕತಾ ಮನೋಭಾವ ಮೂಡಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು
ಗುರುವಾರ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ, ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವತಿಯಿಂದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಂತರ ಕಾಲೇಜುಗಳ ಮಹಿಳಾ ಥ್ರೋ ಬಾಲ್ ಮತ್ತು ಟೆನಿಕಾಯ್ಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.
ಗೆಲುವು ಸೋಲುಗಳು ಬದುಕಿನ ಸ್ವಾಭಾವಿಕವಾಗಿದ್ದು, ಎರಡನ್ನು ಸಮಚಿತ್ತದಿಂದ ನೋಡುವ ಮನೋಬಲ ನಿಮ್ಮದಾಗಲಿ ಎಂದು ಆಶಿಸಿದರು
Also read: ಶಾಂತಿ ಹಾಗೂ ವೈಭವಯುಕ್ತ ಉತ್ಸವಕ್ಕೆ ಎಲ್ಲರೂ ಸಹಕರಿಸಿ: ಶಾಸಕ ಸಂಗಮೇಶ್ವರ್
ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್.ಅರುಣ್ ಮಾತನಾಡಿ ಇಂದು ಶೈಕ್ಷಣಿಕ ಒತ್ತಡಗಳು ಹೆಚ್ಚಾಗುತ್ತಿದೆ. ಈ ನಡುವೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಯಂತಹ ಕಾರ್ಯಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುತ್ತಿರುವುದು ಉತ್ತಮ ವಿಚಾರ. ಓರ್ವ ವಕೀಲ ಶ್ರೇಷ್ಠನಾಗುವುದು ಕೇಸ್ ಗೆದ್ದಾಗ ಅಲ್ಲ, ನಿಜವಾದ ನೈತಿಕತೆ ಗೆದ್ದಾಗ ಮಾತ್ರ. ನ್ಯಾಯಾಂಗ ವ್ಯವಸ್ಥೆಯ ಮೂಲಕ ಸಾಮಾಜಿಕವಾಗಿ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯವನ್ನು ಭಾವಿ ವಕೀಲ ಸಮೂಹ ಮಾಡಬೇಕಿದೆ.

ಮಂಗಳೂರು ಎಸ್.ಡಿ.ಎಂ ಕಾನೂನು ಕಾಲೇಜಿಗೆ ಪ್ರಥಮ ಬಹುಮಾನ :
ಮಹಿಳಾ ಥ್ರೋ ಬಾಲ್ ಹಾಗೂ ಟೆನಿಕಾಯ್ಟ್ ಪಂದ್ಯಾವಳಿಯಲ್ಲಿ ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜು ಪ್ರಥಮ ಬಹುಮಾನ ಪಡೆದಿದೆ. ಥ್ರೋ ಬಾಲ್ ಸ್ಫರ್ಧೆಯಲ್ಲಿ ಬೆಂಗಳೂರು ರಾಮಯ್ಯ ಕಾಲೇಜು ದ್ವಿತೀಯ, ಶಿವಮೊಗ್ಗ ಸಿಬಿಆರ್ ಕಾನೂನು ಕಾಲೇಜು ತೃತೀಯ ಸ್ಥಾನ ಪಡೆದಿದೆ. ಟೆನಿಕಾಯ್ಟ್ ಸ್ಪರ್ಧೆಯಲ್ಲಿ ಬೆಂಗಳೂರು ಶೇಷಾದ್ರಿಪುರಂ ಕಾನೂನು ಕಾಲೇಜು ದ್ವಿತೀಯ ಸ್ಥಾನ, ತುಮಕೂರು ವಿದ್ಯೋದಯ ಕಾಲೇಜು ತೃತೀಯ ಸ್ಥಾನ ಪಡೆದಿದೆ.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಸಿ.ಬಿ.ಆರ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಎಸ್.ಕಾಂತರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















