ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಮ್ಮ ಮನದೊಳಗಿನ ಮಹಿಷಾಸುರ ಎಂಬ ಕೆಟ್ಟ ಗುಣಗಳನ್ನು ನಾವೆಲ್ಲರೂ ಸಂಹಾರ ಮಾಡುವ ಮೂಲಕ ಎಲ್ಲರೂ ಶ್ರೇಷ್ಠರಾಗೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಹೇಳಿದರು.
ನಾಡಹಬ್ಬ ದಸರಾಗೆ ಅಧಿಕೃತ ಚಾಲನೆ ನೀಡಿದ ನಂತರ ಇಡಿಯ ರಾಜ್ಯಕ್ಕೆ ದಸರಾ ಶುಭಾಶಯಗಳನ್ನು ಕೋರಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಮಹಿಷಾಸುರನನ್ನು ಕಾಣಲು ಸಾಧ್ಯವಿಲ್ಲ. ಆದರೆ, ನಮ್ಮೊಳಗೇ ಇರುವ ಮಹಿಷಾಸುರ ಎಂಬ ನಕಾರಾತ್ಮಕ ಭಾವನೆಗಳನ್ನು ಕೊಲ್ಲುವ ಮೂಲಕ ಎಲ್ಲರೂ ಸದ್ವಿಚಾರದ ಶ್ರೇಷ್ಠತೆಯನ್ನು ರೂಢಿಸಿಕೊಳ್ಳೋಣ. ಪ್ರತಿ ದಸರಾದಂದು ಸದ್ವಿಚಾರಗಳನ್ನು ರೂಢಿಸಿಕೊಳ್ಳುವ ಕ್ಷಣಗಳಾಗಿವೆ ಎಂದು ಕರೆ ನೀಡಿದರು.

ಕಳೆದ ಎರಡು ವರ್ಷಗಳ ನಂತರ ಗತ ವೈಭವವನ್ನು ಮರುಕಳಿಸುವ ರೀತಿ ಎಲ್ಲರೂ ಒಟ್ಟಾಗಿ ದಸರಾ ಆಚರಿಸೋಣ. ನಾಡಿನ ಎಲ್ಲ ವರ್ಗದ ಜನರು ನಾಡಹಬ್ಬವನ್ನು ಆಚರಿಸುತ್ತೇವೆ. ತಾಯಿ ಚಾಮುಂಡೇಶ್ವರಿಯ ಆರ್ಶೀವಾದ ಪಡೆದು, ನಾಡಿನ ಸುಭಿಕ್ಷೆಗಾಗಿ ತಾಯಿಯಲ್ಲಿ ಪ್ರಾರ್ಥಿಸೋಣ ಎಂದರು.

Also read: ನಾಡಹಬ್ಬ ದಸರಾಗೆ ಅದ್ಧೂರಿ ಚಾಲನೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ
ತಾಯಿ ಚಾಮುಂಡಿಯ ವಾಹನ ಹಂಸವಾಗಿದೆ. ಹಂಸ ಅತ್ಯಂತ ಪವಿತ್ರತೆಗೆ ಹೆಸರಾಗಿದೆ. ಪಕ್ಷಿಗಳಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಬೃಹತ್ ಗಾತ್ರದ್ದು ಹಂಸವಾಗಿದೆ. ಹಿಮಾಲಯದ ಅತಿ ಎತ್ತರದಲ್ಲಿ ಹಾರುವ ಪಕ್ಷಿ ಯಾವುದಾದರೂ ಇದ್ದರೆ ಅದು ಹಂಸ ಅದರಲ್ಲೂ ಪರಮ ಹಂಸ ಮಾತ್ರ. ಇಂತಹ ಪಕ್ಷಿ ನಮಗೆಲ್ಲರಿಗೂ ಮಾದರಿಯಾಗಲಿ. ಇಂತಹ ಶುಭ ದಿನದಂದು ರಾಜ್ಯವನ್ನು ಎಲ್ಲ ರಂಗದಲ್ಲಿಯೂ ಅಭಿವೃದ್ಧಿಯ ತುತ್ತ ತುದಿಗೆ ಕೊಂಡೊಯ್ಯಲು ಎಲ್ಲರೂ ಸಂಕಲ್ಪ ಮಾಡಿ, ಕೈಜೋಡಿಸೋಣ ಎಂದು ಕರೆ ನೀಡಿದರು.
ತಮ್ಮ ಭಾಷಣದುದ್ದಕ್ಕೂ ಅತ್ಯಂತ ಭೌದ್ಧಿಕ ಪ್ರಬುದ್ಧತೆಯನ್ನು ಮೆರೆದ ಮುಖ್ಯಮಂತ್ರಿಗಳ ಮಾತುಗಳಿಗೆ ನೆರೆದಿದ್ದವರು ತಲೆದೂಗಿದ್ದು ವಿಶೇಷವಾಗಿತ್ತು.











Discussion about this post