ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾಗರದ ಪತ್ರಕರ್ತ ಬಿ.ಡಿ. ರವಿಕುಮರ್ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಸಂಘ ಸೊರಬ ತಾಲೂಕು ಶಾಖೆಯ ವತಿಯಿಂದ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಜೈನ್ ನೇತೃತ್ವದಲ್ಲಿ ತಹಶೀಲ್ದಾರ್ ಮೋಹನ್ ಭಸ್ಮೆ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಕಾರ್ಯನಿರತ ಸಂಘದ ಸಾಗರ ತಾಲ್ಲೂಕು ಶಾಖೆಯ ಸದಸ್ಯ, ಆನಂದಪುರಂ ಹೋಬಳಿಯ ಪತ್ರಿಕೆ ವರದಿಗಾರ ಬಿ.ಡಿ.ರವಿಕುಮಾರ್ ಅವರು ಗ್ರಾಮಸ್ಥರ ಮನವಿ ಮೇರೆಗೆ ಕೆ.ಹೊಸಕೊಪ್ಪ ಗ್ರಾಮಕ್ಕೆ ರಸ್ತೆ ಮತ್ತು ಕಿರು ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಗಮನ ಸೆಳೆಯಲು ವರದಿ ಮಾಡಲು ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕಲ್ಲುಕ್ವಾರೆ ನಡೆಸುತ್ತಿರುವ ಬಸವರಾಜ್ ಎಂಬ ವ್ಯಕ್ತಿಯು ಏಕಾಏಕಿ ನಮ್ಮ ಕಲ್ಲುಕ್ವಾರೆಗೆ ತೊಂದರೆ ಕೊಡುತ್ತೀಯಾ, ನೀನು ಸುದ್ದಿ ಮಾಡಿದರೆ ನಮ್ಮ ಕಲ್ಲುಕ್ವಾರೆಯನ್ನು ಅಧಿಕಾರಿಗಳು ಮುಚ್ಚುತ್ತಾರೆ ಎಂದು ಹಲ್ಲೆ ನಡೆಸಿರುತ್ತಾರೆ. ಜೊತೆಗೆ ಇನ್ನೊಮ್ಮೆ ನಮ್ಮ ಕಲ್ಲು ಕ್ವಾರೆ ವರದಿ ಮಾಡಲು ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದು ಖಂಡನೀಯ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವು ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿದೆ. ಪತ್ರಕರ್ತರು ನಿರ್ಭೀತಿಯಿಂದ ವರದಿಗಾರಿಕೆ ಮಾಡಲು ಅಡ್ಡಿಪಡಿಸುವ ಕೆಲಸ ಸಮಾಜ ಘಾತುಕ ಶಕ್ತಿಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಬಿ.ಡಿ.ರವಿಕುಮಾರ್ ಮೇಲೆ ಹಲ್ಲೆ ನಡೆಸುವ ಮೂಲಕ ಪತ್ರಿಕಾ ಧರ್ಮವನ್ನು ಹತ್ತಿಕ್ಕುವ ಪ್ರಯತ್ನದ ಮುಂದುವರೆದ ಭಾಗವಾಗಿದೆ. ಆದ್ದರಿಂದ ಬಿ.ಡಿ.ರವಿಕುಮಾರ್ ಅವರ ಮೇಲೆ ಹಲ್ಲೆ ಮಾಡಿರುವ ಬಸವರಾಜ್ ಅವರ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಜೈನ್, ಉಪಾಧ್ಯಕ್ಷ ಮಹಮದ್ ಆರೀಫ್, ಪ್ರಧಾನ ಕಾರ್ಯದರ್ಶಿ ಸಂದೀಪ ಯು.ಎಲ್, ಜಿಲ್ಲಾ ಪ್ರತಿನಿಧಿಗಳಾದ ಜಿ.ಎಂ.ತೋಟಪ್ಪ, ಚಂದ್ರಪ್ಪ ತವನಂದಿ, ರಾಘವೇಂದ್ರ ಬಾಪಟ್, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ.ಡಿ. ಉಮೇಶ್, ಸದಸ್ಯರಾದ ಪ್ರಭುಮೇಸ್ತಿ, ನಟರಾಜ ಉಪ್ಪಿನ, ಕರವೇ ಅಧ್ಯಕ್ಷ ಬಲೀಂದ್ರಪ್ಪ ಸಿ.ಕೆ, ಜನಸಂಗ್ರಾಮ ಪರಿಷತ್ನ ಶಂಕರ್ ಶೇಟ್ ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















