ಕಲ್ಪ ಮೀಡಿಯಾ ಹೌಸ್ | ಆಂಧ್ರಪ್ರದೇಶ |
ಪೋಷಕರೇ ಸುಪಾರಿ ಕೊಟ್ಟು ತಮ್ಮ ಮಗನನ್ನು ಹತ್ಯೆ ಮಾಡಿಸಿದ ಘಟನೆ ಆಂಧ್ರಪ್ರದೇಶದ ಕಮ್ಮಂನಲ್ಲಿ ನಡೆದಿದೆ.
ಸಾಯಿರಾಮ್ (26) ಮೃತಪಟ್ಟ ಯುವಕನಾಗಿದ್ದು, ಈತನ ತಂದೆ ಸರ್ಕಾರಿ ಶಾಲೆಯ ನಿವೃತ್ತ ಪ್ರಾಂಶುಪಾಲ ಕ್ಷತ್ರಿಯ ರಾಮ್ ಸಿಂಗ್ ಮತ್ತು ತಾಯಿ ರಾಣಿಬಾಯಿ ಎಂಬುವವರು ತಮಗಿದ್ದ ಒಬ್ಬನೇ ಪುತ್ರನನ್ನು 8 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹಂತಕರಿಂದ ಕೊಲೆ ಮಾಡಿಸಿದ್ದಾರೆ.
ಅ.18ರಂದು ಸೂರ್ಯಪೇಟ್ ನಲ್ಲಿ ಸಾಯಿರಾಮ್ ಮೃತದೇಹ ಕಂಡುಬಂದಿತ್ತು. ಪೋಷಕರು ಪುತ್ರ ಕಾಣೆಯಾಗಿದ್ದಾನೆ ಎಂದು ನಾಟಕ ಮಾಡಿದ್ದರು. ಅಲ್ಲದೇ ಪುತ್ರನ ಹತ್ಯೆ ನಡೆಸಿದ ಗ್ಯಾಂಗ್ ಶವ ಸಾಗಿಸಲು ತಮ್ಮ ಕಾರನ್ನೇ ನೀಡಿದ್ದರು. ಅ. 25ರಂದು ಶವಾಗಾರದಲ್ಲಿದ್ದ ಪುತ್ರನ ಮೃತದೇಹ ನೋಡಲು ದಂಪತಿ ಆ ಕಾರಲ್ಲೇ ಹೋಗಿದ್ದರು. ಪೊಲೀಸರು ತನಿಖೆ ವೇಳೆ ಸಿಸಿಟಿವಿ ದೃಶ್ಯದಲ್ಲಿ ಕಾರು ಸಂಚಾರ ಗಮನಿಸಿ ದಂಪತಿಗಳನ್ನು ವಿಚಾರಣೆ ನಡೆಸಿದಾಗ ಹತ್ಯೆಯ ರಹಸ್ಯ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ:
ಸಾಯಿರಾಮ್ ಕುಡಿತಕ್ಕೆ ದಾಸನಾಗಿದ್ದು, ಶಿಕ್ಷಣವನ್ನು ಪೂರ್ಣಗೊಳಿಸದೇ ನಿರುದ್ಯೋಗಿಯಾಗಿದ್ದ, ಕುಡಿದು ಬಂದು ರಾತ್ರಿಯಿಡಿ ಪೋಷಕರನ್ನು ಥಳಿಸುತ್ತಿದ್ದ. ವ್ಯಸನಮುಕ್ತಿ ಕೇಂದ್ರಕ್ಕೆ ಸೇರಿಸಿದರೂ ಏನು ಪ್ರಯೋಜನವಾಗಿರಲಿಲ್ಲ. ಅಲ್ಲದೇ ಸಂಬಂಧಿಕರ ಎದುರು ಪೋಷಕರನ್ನು ಅವಮಾನ ಮಾಡುತ್ತಿದ್ದನು. ಇದನ್ನು ಸಹಿಸಲಾಗದೇ ಪುತ್ರನ ಹತ್ಯೆಗೆ ಸಂಚು ರೂಪಿಸಿರುವುದಾಗಿ ದಂಪತಿ ಬಾಯ್ಬಿಟ್ಟಿದ್ದಾರೆ. ಸಾಯಿರಾಮ್ ಸೋದರಮಾವ ಸತ್ಯನಾರಾಯಣ ನೇತೃತ್ವದಲ್ಲಿ ಮಿರ್ಯಾಲಗುಡ ಮಂಡಲದಿಂದ ಬಾಡಿಗೆ ಹಂತಕರು ಬಂದು ಹಗ್ಗದಿಂದ ಕುತ್ತಿಗೆ ಬಿಗಿದು ಸಾಯಿರಾಮ್ ಕೊಲೆ ಮಾಡಿ ಕಾರ್’ನಲ್ಲಿ ಮೃತದೇಹ ಸಾಗಿಸಿದ್ದರು ಎಂದು ವರದಿಯಾಗಿದೆ.
Also read: ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ ಸಂಪನ್ನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post