ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಕೇವಲ ನಾಡು, ನುಡಿ, ಭಾಷೆಯಾಗಿರದೆ ಜೀವೋತ್ಸಾಹದ ರಸಬಿಂಬವಾಗಿದೆ ಈ ಬಿಂಬ ಪ್ರತೀ ಮನೆಯಲ್ಲಿ ಕನ್ನಡತನ ಮೆರೆಯುವ ಮೂಲಕ ಮತ್ತಷ್ಟು ಸಮೃದ್ಧಗೊಳಿಸಬೇಕೆಂದು ಲೇಖಕಿ ಶ್ರೀರಂಜಿನಿ ದತ್ತಾತ್ರಿ ಕರೆ ನೀಡಿದರು.
ರೋಟರಿ ಪೂರ್ವ ಶಾಲೆಯಲ್ಲಿ ಮನ್ವಂತರ ಮಹಿಳಾ ಮಂಡಳ ಹಾಗೂ ಇನ್ನರ್ ವ್ಹೀಲ್ ಕಲ್ಬ್ ಶಿವಮೊಗ್ಗ ಪೂರ್ವ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಶಾಲೆ, ಕಾಲೇಜು, ಸಭೆ ಸಮಾರಂಭದಲ್ಲಿ ಕನ್ನಡ ಭುವನೇಶ್ವರಿಯ ಫೋಟೋ ಇಟ್ಟು ಪೂಜಿಸುವುದು ಮಾತ್ರವಲ್ಲ, ಕನ್ನಡ ಪತ್ರಿಕೆ, ಪುಸ್ತಕಗಳನ್ನು ಕೊಂಡು ಓದುವ ಸಂಕಲ್ಪ ಮಾಡೋಣ. ಪ್ರತೀ ಮನೆಯಲ್ಲೂ ಪುಟ್ಟ ಪುಸ್ತಕ ಭಂಡಾರ ತೆರೆದು, ಕನ್ನಡ ಪುಸ್ತಕ ಜೋಡಿಸಿಟ್ಟು, ಮಕ್ಕಳು ಓದುವಂತೆ ಪ್ರೇರೇಪಿಸೋಣ ಎಂದರು
2500 ವರ್ಷ ಇತಿಹಾಸವಿರುವ, 45 ದಶಲಕ್ಷ ಜನರು ಕನ್ನಡ ಮಾತನಾಡುವ, ವಿಶ್ವ ಲಿಪಿಗಳ ರಾಣಿ ಎಂದೆನಿಸಿರುವ ಅಕ್ಷರಗಳ ಬೀಡು, ಶೇ. 99.99 ರಷ್ಟು ವೈಜ್ಞಾನಿಕ, ತರ್ಕಬದ್ಧ ಭಾಷೆ ಎನಿಸಿದೆ. ಕನ್ನಡ ನಾಡಿನ ಪ್ರಾಚೀನ ಶಾಸನ, ಇತಿಹಾಸ, ಕೋಟೆ ಕೊತ್ತಲಗಳು, ನಾಡನಾಳಿದ ಅರಸು ಮನತನಗಳು, ಭಾಷಾ ಬೆಳವಣಿಗೆ, ಪರಂಪರೆ, ಲಿಪಿ, ವಿಕಾಸ, ವಿಶ್ಲೇಷಣೆ, ನೆಲ, ಜಲ, ಪ್ರಾಣಿ, ಪಕ್ಷಿ, ಶಿಲ್ಪಕಲೆ, ನಾಟ್ಯ ಕಲೆ, ವಾಸ್ತು ಶಿಲ್ಪ, ಭೌಗೋಳಿಕ ಸಂಪತ್ತು, ಶಿಕ್ಷಣ, ಏಕೀಕರಣಕ್ಕೆ ಹೋರಾಡಿದ ಮಹನೀಯರು ಇದೆಲ್ಲದರ ಕುರಿತು ಮನನ ಮಾಡಿಕೊಳ್ಳಲು ಕನ್ನಡ ರಾಜ್ಯೋತ್ಸವದ ಈ ಮಾಸ ಸೂಕ್ತ ಸಮಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಮನೆಯಲ್ಲಿ ಗ್ರಂಥಾಲಯವಿದೆಯೇ? ಇದ್ದರೆ ಅದರಲ್ಲಿ ಎಷ್ಟು ಕನ್ನಡ ಪುಸ್ತಕಗಳಿವೆ? ನಾವು ನಮ್ಮ ಮಕ್ಕಳು ಎಷ್ಟು ಕನ್ನಡ ಪುಸ್ತಕಗಳನ್ನು ಅಧ್ಯಯನ ಮಾಡುತ್ತೇವೆ. ಆ ಮೂಲಕ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳುತ್ತೇವೆ ಎಂಬುದೂ ಅತೀ ಅಗತ್ಯ. ಹೀಗೆ ವರ್ಣಿಸಲಾರದಷ್ಟು ವಿಶಿಷ್ಟತೆಯಿರುವ ನಮ್ಮ ನಾಡಿನ ಹಿರಿಮೆ ಸಾರೋಣ ಎಂದರು.
ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವದ ಅಧ್ಯಕ್ಷೆ ಮಧುರಾ ಮಹೇಶ್ ಮಾತನಾಡಿ, ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂದ ರಾಷ್ಟ್ರಕವಿಗಳ ನುಡಿಯಂತೆ ನಿನ್ನೆಯ ನೆನಪುಗಳೊಂದಿಗೆ ನಾಳೆಯ ಕನಸುಗಳನ್ನು ಕೂಡಿಸಿ ನಾವು ನಡೆಯೋಣ. ಮನೆ – ಮನಗಳಲ್ಲೂ ಕನ್ನಡದ ದೀಪ ಬೆಳಗೋಣ. ಕುಟುಂಬ ಮತ್ತು ಸಮಾಜದಲ್ಲಿ ಕನ್ನಡದ ಹಿರಿಮೆ ಕಾಪಿಡೋಣವೆಂದರು.
ಹಲವು ವಿಶೇಷತೆಗಳಿಂದ ಕೂಡಿದ್ದ ಈ ಕಾರ್ಯಕ್ರಮದಲ್ಲಿ ಕನ್ನಡದ ಸುಭಾಷಿತಗಳನ್ನು ಜ್ಯೋತಿ ಪ್ರಭು, ಸ್ವಪ್ನ ಸುರೇಶ್ ನುಡಿದರು. ನಾಡಿನ ಕವಿಗಳು, ಸಾಹಿತಿಗಳ ಪರಿಚಯದಲ್ಲಿ; ದ.ರಾ. ಬೇಂದ್ರೆ – ವಿನೋದಾ ದಳವೆ, ಕುವೆಂಪು – ಬಿಂದು ವಿಜಯಕುಮಾರ್, ಸಂಚಿಹೊನ್ನಮ್ಮ – ಜ್ಯೋತಿ ವಾಸುದೇವ್, ಜಿ.ಎಸ್. ಶಿವರುದ್ರಪ್ಪ – ವಿಜಯಶ್ರೀ, ಅತ್ತಿಮಬ್ಬೆ – ಸುಲೋಚನಾ ಮೂರ್ತಿ, ಶಿವರಾಮ ಕಾರಂತ – ಲಕ್ಷ್ಮಿ ರುದ್ರೇಶ್, ಕಮಲ ಹಂಪನಾ – ಡಾ: ಸುಧಾ, ಅಕ್ಕಮಹಾದೇವಿ – ನೇತ್ರಾವತಿ ಮಂಜುನಾಥ್ ಮಾತನಾಡಿ, ಐತಿಹಾಸಿಕ ಸ್ಥಳಗಳು: ಹಂಪೆ ವೀಣಾ ಹರ್ಷ, ಚಿತ್ರದುರ್ಗ ಕೋಟೆ : ವಿಜಯ ಶಿವು, ಗದಗದ ಲಕ್ಕುಂಡಿ – ಸೀತಾರತ್ನ ರಾಮಚಂದ್ರ, ಕಿತ್ತೂರು ಕೋಟೆ : ಲತಾ ಗುರುರಾಜ್ ಮಾತನಾಡಿದರು.
ಸಾವಿತ್ರಿ ಶಿವಸ್ವಾಮಿ ನಿರೂಪಿಸಿದರು. ದೇವತಾ ಪ್ರಾರ್ಥನೆ ರಾಜೇಶ್ವರಿ ಪ್ರತಾಪ್, ಇನ್ನರ್ ವ್ಹೀಲ್ ಪ್ರಾರ್ಥನೆ ಲಾವಣ್ಯ ಶಶಿಧರ್, ಕಾರ್ಯಕ್ರಮದ ನಿರೂಪಣೆ ಸಾವಿತ್ರಿ ಶಿವಸ್ವಾಮಿ ನೆರವೇರಿಸಿ, ಮಧುರಾ ಮಹೇಶ್ ಸ್ವಾಗತಿಸಿ, ಶ್ರೀರಂಜಿನಿ ದತ್ತಾತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಂದನಾರ್ಪಣೆ ಶ್ವೇತ ಆಶಿತ್ ನೆರವೇರಿಸಿದರು.
ಇನ್ನರ್ ವ್ಹೀಲ್ ನ ಪ್ರಮುಖರಾದ ಆಶಾ ಶ್ರೀಕಾಂತ್, ಸುಮಕ್ಕ, ನಮಿತಾ, ಮನ್ವಂತರದ ಸಂಧ್ಯಾ ವಿನಯಾ, ಮೀರಾಕಾಮತ್, ಪುಷ್ಪ ಶಿವಣ್ಣ, ಶ್ವೇತ, ಬೃಂದಾ, ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post