ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಧಾರ್ಮಿಕ, ಆಧ್ಯಾತ್ಮ ಹಾಗೂ ಪಾರಮಾರ್ಥಿಕ ಕಾರ್ಯಗಳನ್ನು ಸದಾಕಾಲ ಪೋಷಿಸಿಕೊಂಡು ಬರುತ್ತಿರುವ ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪನವರ ಕುಟುಂಬ MLA Eshwarappa ಈಗ ಅಂಹುದ್ದೇ ಒಂದು ಮಹತ್ವದ ಅನ್ನದಾನ ಕಾರ್ಯಕ್ಕೆ ಮುಂದಾಗಿದೆ.
ಶಾಸಕ ಈಶ್ವರಪ್ಪ ಅವರ ಪುತ್ರ, ರಾಷ್ಟ್ರೀಯ ಅನ್ನದಾನ ಸಮಿತಿ ಸದಸ್ಯ ಕೆ.ಈ. ಕಾಂತೇಶ್ K E Kantesh ಹಾಗೂ ಎನ್.ಡಿ. ಸತೀಶ್ ನೇತೃತ್ವದಲ್ಲಿ ನ.16ರಿಂದ ಒಂದು ಮುಷ್ಟಿ ಅಕ್ಕಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಶಬರಿಮಲೈ ಸನ್ನಿಧಾನಕ್ಕೆ ಬರುವ ಎಲ್ಲಾ ಸ್ವಾಮಿಗಳಿಗೆ ಪ್ರಸಾದ ವಿತರಿಸುವ ಸಲುವಾಗಿ ಈ ಕಾರ್ಯಕ್ಕೆ ಸಂಕಲ್ಪ ಮಾಡಲಾಗಿದೆ. ನ.16ರ ಸಂಜೆ 6 ಗಂಟೆಗೆ ಶುಭಮಂಗಳ ಸಮುದಾಯ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಇದೇವೇಳೆ ಸಾಮೂಹಿಕ ಪಡಿ ಪೂಜೆ ಸಹ ನಡೆಯಲಿದೆ.
ಈ ಅಭಿಯಾನಕ್ಕೆ ಸಹಕರಿಸಲು ಬಯಸುವ ಭಕ್ತಾದಿಗಳು ಅಕ್ಕಿ ಸೇರಿದಂತೆ ಪ್ರಸಾದಕ್ಕೆ ಬೇಕಾಗುವ ಯಾವುದೇ ಸಾಮಗ್ರಿಗಳನ್ನು ಸಮರ್ಪಣೆ ಮಾಡಬಹುದಾಗಿರುತ್ತದೆ.
ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾ ಘಟಕದ ಸಹಕಾರದಲ್ಲಿ ಈ ಅಭಿಯಾನ ನಡೆಯಲಿದೆ.
ಅಭಿಯಾನಕ್ಕೆ ಮಠಾಧೀಶರ ವ್ಯಾಪಕ ಬೆಂಬಲ
ಕೆ.ಈ. ಕಾಂತೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಈ ವಿಶೇಷ ಅಭಿಯಾನಕ್ಕೆ ಬಹಳಷ್ಟು ಮಠಾಧೀಶರು, ಧರ್ಮ ಗುರುಗಳು ವ್ಯಾಪಕ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಾಗಿನೆಲೆ ಕನಕಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕೆ.ಎಸ್. ಈಶ್ವರಪ್ಪನವರ ಕುಟುಂಬ ಮೊದಲಿನಿಂದಲೂ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿದೆ. ಇದನ್ನೇ ಅವರ ಪುತ್ರ ಕೆ.ಈ. ಕಾಂತೇಶ್ ಸಹ ಮುಂದುವರೆಸಿಕೊಂಡು ಬಂದಿದ್ದು, ಅಯ್ಯಪ್ಪ ಭಕ್ತರ ಪ್ರಸಾದಕ್ಕಾಗಿ ಇಂತಹ ಒಂದು ಬೃಹತ್ ಅಭಿಯಾನಕ್ಕೆ ಮುಂದಾಗಿರುವುದು ಮಹತ್ ಕಾರ್ಯವಾಗಿದೆ ಎಂದಿದ್ದಾರೆ.
ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಮಾತನಾಡಿ, ಅನ್ನದಾನವು ಒಂದು ಯಜ್ಞದಷ್ಟೇ ಶ್ರೇಷ್ಟವಾದದ್ದು, ನಮ್ಮ ಆಶ್ರಮದಲ್ಲೂ ಸಹ ನಿರಂತರವಾಗಿ ಅನ್ನದಾನ ಮಾಡುತ್ತಿದ್ದೇವೆ. ಕಾಂತೇಶ್ ಹಾಗೂ ಸತೀಶ್ ಅವರುಗಳ ನೇತೃತ್ವದಲ್ಲಿ ಅಯ್ಯಪ್ಪ ಭಕ್ತರಿಗೆ ಹಾಗೂ ಸ್ವಾಮಿಗಳಿಗೆ ಪ್ರಸಾದ ವ್ಯವಸ್ಥೆಗಾಗಿ ಇಂತಹ ಮಹಾನ್ ಅನ್ನ ಯಜ್ಞಕ್ಕೆ ಮುಂದಾಗುತ್ತಿರುವುದು ಸಂತೋಷದ ವಿಚಾರ. ಈ ಅಭಿಯಾನಕ್ಕೆ ನಮ್ಮ ಆಶ್ರಮವೂ ಸಹ ಸಹಕಾರ ನೀಡುತ್ತದೆ ಎಂದಿದ್ದಾರೆ.
ಮಹರ್ಷಿ ಆನಂದ್ ಗುರೂಜಿ ಮಾತನಾಡಿ, ಕೆ.ಈ. ಕಾಂತೇಶ್ ಹಾಗೂ ಸತೀಶ್ ಅವರ ಈ ಅಭಿಯಾನಕ್ಕೆ ಮುಂದಾಗಿರುವುದು ಸಂತೋಷದ ವಿಚಾರ. ಇದಕ್ಕೆ ಸಾರ್ವಜನಿಕರು ಅಪಾರವಾಗಿ ಬೆಂಬಲ ನೀಡಬೇಕು. ಪ್ರತಿಯೊಬ್ಬರೂ ನೀಡುವ ಒಂದು ಮುಷ್ಟಿ ಅಕ್ಕಿ ಸ್ವಾಮಿಗಳ ಪ್ರಸಾದವಾಗುತ್ತದೆ ಎನ್ನುವುದನ್ನು ಸಾರ್ವಜನಿಕರು ಪರಿಗಣಿಸಿ ಸಹಕಾರ ನೀಡಬೇಕು ಎಂದರು.
ಇದಲ್ಲದೆ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಮಠಾಧೀಶರು ಅಭಿಯಾನಕ್ಕೆ ಬೆಂಬಲ ನೀಡಿ, ಈ ಕಾರ್ಯ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















