ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾದಿಂದ ಜನಗಳನ್ನು ರಕ್ಷಿಸಲು ಕಳೆದೆರಡು ತಿಂಗಳಿನಿಂದ ರಾತ್ರಿ ಹಗಲು ಎನ್ನದೆ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರು, ಅರಕ್ಷಕರು, ವೈದ್ಯರು, ಪೌರಕಾರ್ಮಿಕರು ಹಾಗೂ ಸೈನಿಕರನ್ನು ಗೌರವಿಸುವುದು ನಿಜಕ್ಕೂ ಶ್ಲಾಘನೀಯ ಎಂದು ಮಹಾನಗರ ಪಾಲಿಕೆ ಸದಸ್ಯ ಎಚ್.ಎಂ. ಯೋಗೀಶ್ ತಿಳಿಸಿದರು.
ಇಂದು ವಿನೋಬನಗರ 18ನೇ ವಾರ್ಡ್ನ ಸ್ನೇಹಜೀವಿ ಬಳಗದಿಂದ ಕೊರೋನಾ ವಾರಿಯರ್ಸ್ಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇಡೀ ವಿಶ್ವವೇ ಆಪತ್ತಿನಲ್ಲಿ ಸಿಲುಕುವಂತೆ ಮಾಡಿದ ಕಣ್ಣಿಗೆ ಕಾಣದ ಕೊರೋನಾ ವೈರಸ್, ಎಲ್ಲರಲ್ಲೂ ಆತಂಕ ಸೃಷ್ಠಿಸಿ ಮನುಷ್ಯರೆಲ್ಲ ಒಂದೆ, ಇಂದು ಈ ವೈರಸ್ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡುವಂತಹ ಸ್ಥಿತಿ ಎದುರಾಗಿದೆ. ಜಾತಿ ಬೇದ ಬಾವ ಇಲ್ಲದೆ, ರಾಜಿ ಇಲ್ಲದೆ, ಸಾಮರಸ್ಯ ಇಲ್ಲದೇ ಎಲ್ಲರೂ ತಮ್ಮ ಬದುಕಿಗೆ ಕುಟುಂಬದ ರಕ್ಷಣೆಗೆ ಒಂದಾಗಿ ಎದುರಿಸಬೇಕಾದಂತಹ ಪರಿಸ್ಥಿತಿ ಇದೆ ಎಂದರು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಸಾಕಷ್ಟು ಶ್ರಮ ವಹಿಸುತ್ತಿದೆ. ಅದರಲ್ಲೂ ಪೌರ ಕಾರ್ಮಿಕರು ದಿನನಿತ್ಯ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬದುಕಿನ ಆತಂಕದ ನಡುವೆಯೂ ಕೆಲಸದಲ್ಲಿ ತೊಡಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಜೊತೆಗೆ ಆಶಾ ಕಾರ್ಯಕರ್ತೆರು, ಆರಕ್ಷಕರು, ವೈದ್ಯರ ನಿರಂತರ ಸೇವೆ ಸಮಂಜಸವಾದದ್ದು, ರೋಗ ಅಂಟಿಕೊಳ್ಳುವ ಸಂಭವವಿದ್ದರೂ ರೋಗಿಗಳ ಸೇವೆಯಲ್ಲಿ ನಿರತರಾಗಿರುವ ನರ್ಸ್ಗಳು ಜನರ ಆಪದ್ಭಾಂಧವರು. ಜನರಲ್ಲಿ ಜಾಗೃತಿ ಮೂಡಿಸಿ, ಮನೆಯಲ್ಲಿಯೇ ಇರಿ ಎಂಬ ಸಂದೇಶದೊಂದಿಗೆ ರಾತ್ರಿ ಹಗಲು ಸೇವೆ ಸಲ್ಲಿಸುತ್ತಿರುವ ಆರಕ್ಷಕರಿಗೆ ಹ್ಯಾಟ್ಸಾಪ್ ಎಂದರು.
ಸೂಡ ಮಾಜಿ ಅಧ್ಯಕ್ಷ ದತ್ತಾತ್ರಿ ಅವರು ಮಾತನಾಡಿ, ಚೀನದ ವುಹಾನ್ನಿಂದ ಜನರಿಂದ ಜನರಿಗೆ ಅಂಟುತ್ತ ಇಂದು ನಮ್ಮ ಮನೆ ಬಾಗಿಲವರೆಗೆ ಈ ವೈರಸ್ ಬರುತ್ತದೆ ಎಂದರೆ ಜಾಗತಿಕ ಅಂತರದ ವೇಗ ಎಷ್ಟರಮಟ್ಟಿಗೆ ಇರಬೇಕು. ಈ ಕಾರಣದಿಂದ ನಾವು ಎಷ್ಟೇ ಜಾಗೃತರಾದರು ಅದು ಕಡಿಮೆ. ಆದಷ್ಟು ಒಳ್ಳೆಯ ಜೀವನ, ಒಳ್ಳೆಯ ನಡತೆ, ಆಹಾರ ಕ್ರಮ ಯೋಗ ಧ್ಯಾನ, ನಡಿಗೆಯನ್ನು ಪ್ರದಿ ದಿನ ಅಳವಡಿಸಿಕೊಂಡು ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ವಾರ್ಡ್ ಸದಸ್ಯ ರಾಹುಲ್ ಬಿದರೆ ಅವರು ಮಾತನಾಡಿ ನನ್ನ ವಾರ್ಡ್ನಲ್ಲಿ ಸ್ನೇಹಜೀವಿ ಬಳಗ ಇರುವುದು ನಿಜಕ್ಕೂ ಹೆಮ್ಮೆಯ ವಿಷಯ, ಬಳಗದ ಪ್ರತಿಯೊಬ್ಬರ ಪ್ರೀತಿ ವಿಶ್ವಾಸ ನನಗೆ ಸ್ಪೂರ್ತಿ ಎಂದ ಅವರು ಪಕ್ಷ ಬೇದ ಮರೆತು ಈ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕಾಗಿದೆ ಎಂದು ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯ ಪಾಲಾಕ್ಷಿ ಮಾತನಾಡಿ, ವಾರ್ಡ್ನಲ್ಲಿ ರಾಹುಲ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಎಲ್ಲರೂ ಒಂದೇ ಸ್ನೇಹ ಜೀವಿ ಬಳಗದಂತಹ ಸಾಮಾಜಿಕ ಕಳಕಳಿ ಇರುವ ಸಂಸ್ಥೆಗಳೊಂದಿಗೆ ಕೈಜೋಡಿಸಿ ನಡೆದರೆ ಜನರು ಸಹಕರಿಸುತ್ತಾರೆ ಎಂದರು.
ಡಾ. ಶ್ರೀಧರ್, ಬಳಗದ ಶರತ್ ಚಂದ್ರ, ಮಾಜಿ ಸೈನಿಕರಾದ ಸತೀಶ್, ಜಗದೀಶ್, ಆರಕ್ಷಕರಾದ, ಚಂದ್ರಪ್ಪ, ರಾಮಪ್ಪ, ಕಂಠಪ್ಪ, ಇನ್ನಿತರರಿದ್ದರು. ಬಳಗದ ಶಿವಮೂರ್ತಿ ನಿರೂಪಿಸಿದರು.
Get in Touch With Us info@kalpa.news Whatsapp: 9481252093
Discussion about this post