ಕಲ್ಪ ಮೀಡಿಯಾ ಹೌಸ್ | ಆಗ್ರಾ |
ಆಗ್ರಾದಲ್ಲಿ ನಡೆದ ಪ್ಯಾರಾಚೂಟ್ ತರಬೇತಿ #Parachut Training ವೇಳೆ ಕರ್ನಾಟಕ ಮೂಲದ ವಾಯುಪಡೆಯ ವಾರಂಟ್ ಅಧಿಕಾರಿ ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ.
ವಾರಂಟ್ ಅಧಿಕಾರಿ ಮಂಜುನಾಥ್, ವಿಂಗ್ ಕಮಾಂಡರ್ ರೋಹಿತ್ ದಹಿಯಾ ಸೇರಿದಂತೆ 12 ತರಬೇತಿದಾರರು ಶುಕ್ರವಾರ ಬೆಳಿಗ್ಗೆ 8:30ಕ್ಕೆ ತರಬೇತಿಯ ಭಾಗವಾಗಿ ವಾಯುಪಡೆಯ ವಿಮಾನದಿಂದ ಕೆಳಗೆ ಜಿಗಿದಿದ್ದರು. ಈ ಪೈಕಿ 11 ಮಂದಿ ಸುರಕ್ಷಿತವಾಗಿ ಇಳಿದಿದ್ದರು. ಮಂಜುನಾಥ್ ಮಾತ್ರ ಕೆಳಗಿಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಮೀಪದ ಪ್ರದೇಶಗಳಲ್ಲಿ ತಪಾಸಣೆ ನಡೆಸಿದಾಗ ಗೋಧಿ ಹೊಲದಲ್ಲಿ ಮಂಜುನಾಥ್ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ವೇಳೆ ಪ್ಯಾರಾಚೂಟ್ ಬಿಚ್ಚಿಕೊಳ್ಳದೇ ಅವರು 1500 ಅಡಿ ಎತ್ತರದಿಂದ ಕೆಳಗೆ ಬಿದ್ದಿರುವುದು ಕಂಡುಬಂದಿದೆ.
Also read: ಇನ್ವೆಸ್ಟ್ ಕರ್ನಾಟಕದಲ್ಲಿ 19 ದೇಶಗಳು ಭಾಗಿ: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ
ಸಾಮಾನ್ಯವಾಗಿ ವಿಮಾನದಿಂದ ಹಾರಿದ 5 ಸೆಕೆಂಡ್ನಲ್ಲಿ ಪ್ಯಾರಾಚೂಟ್ ತಂತಾನೆ ಬಿಚ್ಚಿಕೊಳ್ಳಬೇಕು. ಅದು ಆಗದೇ ಹೋದಲ್ಲಿ, ತುರ್ತು ಸಂದರ್ಭಕ್ಕೆಂದು ಮೀಸಲಿಟ್ಟ ಇನ್ನೊಂದು ಪ್ಯಾರಾಚೂಟ್ ಅನ್ನು ಸ್ವತಃ ತೆರೆಯಬೇಕಾಗುತ್ತದೆ. ಆದರೆ ಅದು ಕೂಡಾ ತೆರೆಯದೇ ಇದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕರ್ನಾಟಕ ಮೂಲದವರಾದ ಮಂಜುನಾಥ್ ಆಗ್ರಾ ಏರ್ಫೋರ್ಸ್ ಬೇಸ್ನಲ್ಲಿ ಕರ್ತವ್ಯದಲ್ಲಿದ್ದರು. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದು ಮಲ್ಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಮೋದ್ ಶರ್ಮಾ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post