ಬೆಂಗಳೂರು: ಅನಾರೋಗ್ಯದಿಂದ ನಿನ್ನೆ ನಿಧನರಾದ ಹಿರಿಯ ನಟ, ರಾಜಕಾರಣಿ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಂದು ದಿನ ಪೂರ್ತಿ ಇಡಲಾಗುತ್ತದೆ.
ಇಂದು ನಸುಕಿನಿಂದಲೇ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಹಾಗೂ ಗಣ್ಯರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇಡಲಾಗಿದ್ದು, ತಮ್ಮ ನೆಚ್ಚಿನ ನಾಯಕನ ಕೊನೆಯ ದರ್ಶನ ಪಡೆಯಲು ಅಭಿಮಾನಿಗಳು ಕಿಲೋ ಮೀಟರ್ಗಟ್ಟಲೆ ಸಾಲುಗಟ್ಟಿ ನಿಂತಿದ್ದಾರೆ.
ಇನ್ನು, ಚಿತ್ರರಂಗದ ಗಣ್ಯಾತಿಗಣ್ಯರು ಸ್ಥಳದಲ್ಲೇ ಬೀಡುಬಿಟ್ಟಿದ್ದು, ತಮ್ಮ ಹಿರಿಯಣ್ಣನಿಗೆ ಅಶ್ರುತರ್ಪಣ ಸಲ್ಲಿಸುತ್ತಿದ್ದಾರೆ. ಹಿರಿಯ ನಟ ದೊಡ್ಡಣ್ಣ, ನಟ ಜೈಜಗದೀಶ್, ಲಕ್ಷ್ಮೀ ವಜ್ರಮುನಿ, ಶಾಸಕ ಬಸವರಾಜ್ ಬೊವ್ಮಾಯಿ, ನಿರ್ದೇಶಕ ಎಸ್. ನಾರಾಯಣ್, ನಟಿ ಸುಧಾರಾಣಿ, ಸಚಿವ ಕೆ.ಜೆ.ಜಾರ್ಜ್, ನಿರ್ದೇಶಕ ಟಿ. ಸೀತಾರಾಮ್, ನಟ ರಾಘವೇಂದ್ರ ರಾಜಕುಮಾರ್, ಅಶೋಕ್ ಖೇಣಿ, ನಟ ಶಿವಕುಮಾರ್, ಪ್ರಕಾಶ್ ರೈ, ನಟಿ ರಶ್ಮಿ, ನಿರ್ದೇಶಕ ಸಾಯಿಪ್ರಕಾಶ್ ಹಾಗೂ ನಿರ್ದೇಶಕ ಪ್ರೇಮ್, ನಿರ್ದೇಶಕ ಸಾಯಿಪ್ರಕಾಶ್, ನಟ ದುನಿಯಾ ವಿಜಯ್ , ನಟಿ ಶ್ರುತಿ, ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್, ಹಿರಿಯ ನಟಿ ಜೂಲಿ ಲಕ್ಷ್ಮೀ, ನಟ, ನಿರ್ದೇಶಕ ಪ್ರೇಮ್ , ನಟಿ ಭಾರತಿ ವಿಷ್ಣುವರ್ಧನ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್, ತಮಿಳು ನಟ ಶರತ್ ಕುಮಾರ್, ಪತ್ನಿ ರಾಧಿಕ ಶರತ್ ಕುಮಾರ್, ನಟ ರಜನಿಕಾಂತ್ ಸೇರಿದಂತೆ ಈವರೆಗೂ ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.
ಇನ್ನು, ಕಂಠೀರವ ಸ್ಟುಡಿಯೋದಲ್ಲಿ ರಾಜಕುಮಾರ್ ಸ್ಮಾರಕದ ಸನಿಹವೇ ಅಂಬರೀಶ್ ಅಂತ್ಯಸಂಸ್ಕಾರವನ್ನು ನಾಳೆ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಎಲ್ಲ ತಯಾರಿಗಳೂ ನಡೆದಿವೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ನಟ ಯಶ್ ಎಲ್ಲ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಿದ್ದಾರೆ.
Discussion about this post