ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೋವಿಡ್19ರ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ದೇಶಕ್ಕೆ 20 ಲಕ್ಷ ಕೋಟಿ ರೂ. ಘೋಷಣೆ ಮಾಡಿರುವ ಕೇಂದ್ರ ಸರ್ಕಾರ ಇದರಲ್ಲಿ ಆನ್ ಲೈನ್ ಶಿಕ್ಷಣ ಹಾಗೂ ವೈದ್ಯಕೀಯ ಉಪಕರಣ ಖರೀದಿಗೆ ಒತ್ತು ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಡಿಟಿಎಚ್’ನಿಂದ ಪಾಠಗಳನ್ನು ನೇರ ಪ್ರಸಾರ ಮಾಡಲು ಸುಲಭವಾಗಲಿದೆ. ಡಿಟಿಎಚ್’ನಂಥ ಕೆಲ ಖಾಸಗಿ ಸಂಸ್ಥೆಗಳ ಜತೆ ಕೇಂದ್ರ ಒಪ್ಪಂದ ಮಾಡಿಕೊಂಡಿದೆ. ಕಂಪನಿಗಳ ಆಡಳಿತ ಮಂಡಳಿ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಬಹುದು ಎಂದರು.
ಒನ್ ಕ್ಲಾಸ್, ಒನ್ ಚಾನೆಲ್, ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅಗತ್ಯ ಉಪಕರಣಗಳ ಖರೀದಿಗಾಗಿ ರಾಜ್ಯಗಳಿಗೆ 15 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ವೈದ್ಯಕೀಯ ಸೇವೆ ನೀಡುವವರ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ಆರ್ಥಿಕತೆಯನ್ನು ಮೇಲಕ್ಕೆತ್ತಬೇಕಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ ಲ್ಯಾಬ್ ತೆರೆಯಲಾಗುವುದು ಎಂದರು.
ಪ್ರಧಾನಮಂತ್ರಿ ಇ-ವಿದ್ಯಾ ಯೋಜನೆ ಜಾರಿಗೊಳಿಸಲಾಗುವುದು ಎಂದಿರುವ ಸಚಿವರು, ಸ್ವಯಂ ಪ್ರಭಾ ಡಿಟಿಎಚ್ ಚಾನೆಲ್’ಗಳ ಅನಾವರಣ ಮಾಡಲಾಗುವುದು. ಮನ್ರೇಗಾ ಯೋಜನೆಗೆ (ಗ್ರಾಮೀಣ ಉದ್ಯೋಗ ಯೋಜನೆ)ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂಪಾಯಿ ನೀಡಲಾಗುತ್ತಿದ್ದು, 300ಕ್ಕೂ ಅಧಿಕ ಪಿಪಿಇ ತಯಾರಕರಿಂದ ಈವರೆಗೆ 51 ಲಕ್ಷ ಪಿಪಿಇ ಕಿಟ್ಸ್ ಸರಬರಾಜು ಮಾಡಲಾಗಿದೆ ಎಂದರು.
ಈ ಬಿಕ್ಕಟ್ಟನ್ನು ನಾವು ಅವಕಾಶವನ್ನಾಗಿ ಬಳಸಿಕೊಳ್ಳಬೇಕಾಗಿದೆ. ಆರೋಗ್ಯ ಕ್ಷೇತ್ರಕ್ಕಾಗಿ ರಾಜ್ಯಗಳಿಗೆ 4100 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.
Get in Touch With Us info@kalpa.news Whatsapp: 9481252093















