ಸತ್ಯಪರಿಪಾಲನೆ ಧರ್ಮರಕ್ಷಣೆ ಮತ್ತು ಮಾನವ ಕುಲ ಉದ್ಧಾರಕ್ಕಾಗಿ ಅವತರಿಸಿದ ಶ್ರೇಷ್ಠ ಸಂತ ಯತಿಗಳು, ಮಹಾತಪಸ್ವಿಗಳು ಶ್ರೀಸತ್ಯಧರ್ಮತೀರ್ಥಶ್ರೀಪಾದಂಗಳವರು.
ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀಮದುತ್ತರಾದಿಮಠದ ಪರಂಪರೆಯಲ್ಲಿ ಪೀಠವನ್ನಲಂಕರಿಸಿದ್ದ ಶ್ರೇಷ್ಠ ಯತಿಗಳಾದ ಶ್ರೀಸತ್ಯಧರ್ಮತೀರ್ಥಗುರುಗಳ ಆರಾಧನಾ ಮಹೋತ್ಸವ ಇಂದು. ಶ್ರೀಗಳವರ ಮೂಲ ಬೃಂದಾವನವಿರುವ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಕ್ಷೇತ್ರದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿದೆ.
ಶ್ರೀಸತ್ಯಧರ್ಮತೀರ್ಥಗುರುಗಳು 1797ರಿಂದ 1830ರವರೆಗೆ ಹಂಸನಾಮಕ ಪೀಠದಲ್ಲಿ ವಿರಾಜಮಾನರಾಗಿದ್ದು ಸಂಸ್ಥಾನ ಪ್ರತಿಮಾ ಶ್ರೀಮೂಲಾಸೀತಾರಾಮ ದೇವರನ್ನು ಆರಾಧಿಸಿದವರು. ಶ್ರೀಸತ್ಯಧರ್ಮತೀರ್ಥರು ರಾಮಾಯಣ, ಮಹಾಭಾರತ, ಭಾಗವತ ಗ್ರಂಥಗಳಿಗೆ ಪ್ರೌಢ ವ್ಯಾಖ್ಯಾನ ಕೃತಿಗಳನ್ನು ರಚಿಸಿದ್ದಾರೆ. ಶ್ರೀಸತ್ಯಧರ್ಮತೀರ್ಥರ ಪೂರ್ವಾಶ್ರಮದ ಹೆಸರು ಅಣ್ಣಯ್ಯಾಚಾರ್ಯರು ಎಂದು. ಇವರ ಆಶ್ರಮ ಗುರುಗಳುಶ್ರೀಸತ್ಯವರ ತೀರ್ಥಶ್ರೀಪಾದಂಗಳವರು.
ಶ್ರೀಸತ್ಯಧರ್ಮತೀರ್ಥರು ಪೂರ್ವಾಶ್ರಮದಲ್ಲಿ ವೇದಪಾಠಗಳನ್ನು ಶ್ರೀಸತ್ಯಬೋಧ ತೀರ್ಥ ಗುರುಗಳಲ್ಲಿ ಕಲಿಯುತ್ತಾರೆ. ಇವರು ಪೂರ್ವಾಶ್ರಮದಲ್ಲಿ ಬಹಳ ಕಡುಬಡತನವನ್ನು ಅನುಭವಿಸಿದವರು. ಇವರು ಮಂತ್ರಾಲಯ ಕ್ಷೇತ್ರದಲ್ಲಿರುವ ಶ್ರೀರಾಘವೇಂದ್ರ ಗುರುಸಾರ್ವಭೌಮರ ಸೇವೆಯನ್ನು ಬಹಳ ಶ್ರದ್ಧಾಭಕ್ತಿಯಿಂದ ಮಾಡಿ ಅವರ ಅನುಗ್ರಹಕ್ಕೆ ಪಾತ್ರಾರಾಗುತ್ತಾರೆ. ಶ್ರೀರಾಯರು ಅವರ ಕನಸಿನಲ್ಲಿ ಬಂದು ಅವರ ಕಷ್ಟಕಾರ್ಪಣ್ಯಗಳೆಲ್ಲವೂ ದೂರವಾಗಿ ಮುಂದೆ ಅವರು ಉತ್ತರಾದಿ ಮಠದ ಪೀಠಾಧಿಪತಿಗಳಾಗಿ ಹೆಸರು ಮತ್ತು ಖ್ಯಾತಿ ಗಳಿಸುವುದಲ್ಲದೇ, ಉತ್ತರಾದಿಮಠದ ಹೆಸರೂ ಪ್ರಖ್ಯಾತಿ ಹೊಂದುವುದೆಂದು ಸೂಚಿಸಿ ಅದೃಶ್ಯರಾಗುತ್ತಾರೆ.
ವೇದಾಂತ ಸಾಮ್ರಾಜ್ಯದಲ್ಲಿ ಪೀಠವನ್ನಲಂಕರಿಸಿದ್ದ ಶ್ರೀಗಳು 33ವರ್ಷಗಳು ಬಹಳ ಅವಿಸ್ಮರಣೀಯವಾಗಿದ್ದ ಅವಧಿಯಾಗಿತ್ತು. ಇವರು ಪೀಠಾಧಿಪತಿಗಳಾಗಿದ್ದಾಗ ಮಠದ ಆಸ್ತಿಪಾಸ್ತಿ, ಐಶ್ವರ್ಯ ಹೆಚ್ಚಾಗುತ್ತದೆ. ದಿವಾನ್ ಪೂರ್ಣಯ್ಯನವರಿಂದ ಹೊಳೇನರಸೀಪುರದಲ್ಲಿ ಸ್ವಾಮಿಗಳಿಗಾಗಿ ಮಠ ಕಟ್ಟಿಸಲ್ಪಡುತ್ತದೆ. ಅಂದಿನ ಮೈಸೂರು ಮಹಾರಾಜರ ಅಪೇಕ್ಷೆಯಂತೆ ಶ್ರೀ ವರಾಹಸ್ವಾಮಿ ವಿಗ್ರಹವನ್ನು ಸ್ಥಾಪಿಸುತ್ತಾರೆ.
ಹೊಳೇನರಸೀಪುರದ ಮಠದಲ್ಲಿ ಮುಖ್ಯಪ್ರಾಣದೇವರ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಶ್ರೀಸತ್ಯಧರ್ಮತೀರ್ಥರು ಮಹಾನ್ ಅಪರೋಕ್ಷ ಜ್ಞಾನಿಗಳು. ಅದ್ವಿತೀಯ ಗ್ರಂಥಕಾರರೂ ಆಗಿದ್ದವರು. ಶ್ರೀಗಳವರು ಉತ್ತರಾದಿ ಮಠದಲ್ಲಿ ಕಳೆದುಹೋಗಿದ್ದ ದೇವರ ಪೆಟ್ಟಿಗೆಯನ್ನು ಪುನಃ ಸಂಸ್ಥಾನಕ್ಕೆ ತಂದು ಕೊಟ್ಟ ಮಹಾನುಭಾವರು. ತಾವು ಪೂಜಿಸುವ ಶ್ರೀರಾಮದೇವರಿಗೆ ನವರತ್ನ ಮಂಟಪವನ್ನು ಸಮರ್ಪಿಸಿದವರು. ಶ್ರೀಗಳು ಬರೆದ ಎಲ್ಲಾ ಗ್ರಂಥಗಳಲ್ಲಿ ಶ್ರೀವಾದಿರಾಜರನ್ನು ಅನುಸರಣೆ ಮಾಡಿರುವುದು ಬಹಳ ವಿಶೇಷ.
ಶ್ರೀಗಳು ತಮ್ಮ ಅನೇಕ ಗ್ರಂಥಗಳಲ್ಲಿ ಶ್ರೀವಾದಿರಾಜರ ಋಜುತ್ವವನ್ನು ಕೊಂಡಾಡಿದ್ದಾರೆ. ಶ್ರೀಸತ್ಯಧರ್ಮತೀರ್ಥರು ರುದ್ರಾಂಶರು ಎಂದು ಸ್ವಪ್ನ ವೃಂದಾವನಾಖ್ಯಾನದಲ್ಲಿ ತಿಳಿಸಿದೆ. ಶ್ರೀಗಳ ವ್ರಂದಾವನದ ಮುಂದೆ ಈಗಲೂ ಎರಡು ಲಿಂಗಗಳಿರುವುದನ್ನು ಹಾಗೂ ಗಂಗೆಯ ಸನ್ನಿಧಾನ ಇರುವುದನ್ನೂ ನೋಡಬಹುದು.
ಶ್ರೀಸೋದೆ ವಾದಿರಾಜ ಮಠಾಧೀಶರಾಗಿದ್ದ ಶ್ರೀವಿಶ್ವೋತ್ತಮತೀರ್ಥ ಗುರುಗಳು ಅಲ್ಲಿಗೆ ಭೇಟಿ ನೀಡಿ ದರ್ಶನ ಮಾಡಿದಾಗ ಯಾರಿಗೂ ಆಗದ ಅನುಗ್ರಹ ಶ್ರೀವಿಶ್ವೋತ್ತಮತೀರ್ಥರಿಗೆ ಆಗಿದೆ. ಶ್ರೀವಿಶ್ವೋತ್ತಮರು ಮಂಗಳಾರತಿಯನ್ನು ಮಾಡಿದ ತಕ್ಷಣ ಕಾಣದಾಗಿದ್ದ ಗಂಗಾ ಸನ್ನಿಧಾನದಿಂದ ಗಂಗೆಯು ಪ್ರತ್ಯಕ್ಷವಾಗಿ ಅನುಗ್ರಹವಾಗಿದೆ.
ಒಮ್ಮೆ ಶ್ರೀಸತ್ಯಧರ್ಮಗುರುಗಳವರಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 15000ಕ್ಕೂ ಹೆಚ್ಚು ಮಂದಿ ಭಕ್ತರು ಸೇರಿದ್ದರು. ಈ ಕಾರ್ಯಕ್ರಮದಲ್ಲಿ ದಿವಾನ್ ಪೂರ್ಣಯ್ಯನವರೂ ಇರುತ್ತಾರೆ. ಕಾರ್ಯಕ್ರಮ ನಡೆಯುತ್ತಿರುವಾಗ ಜೋರಾಗಿ ಧಾರಾಕಾರ ಮಳೆ ಸುರಿಯಲಾರಂಭಿಸಿ ಕಾರ್ಯಕ್ರಮಕ್ಕೆ ಅಡ್ಡಿಯುಂಟಾಗುವ ಸಂದರ್ಭದಲ್ಲಿ ಶ್ರೀಗುರುಗಳು ವರುಣದೇವರನ್ನು ಪ್ರಾರ್ಥಿಸಿ ಮಳೆಯನ್ನು ನಿಲ್ಲಿಸಿದ ಮಹಾ ನುಭಾವರು.
ಸಾಕ್ಷಾತ್ ಸದಾಶಿವನೇ ಶ್ರೀಸ್ವಾಮಿಗಳವರಿಗೆ ದರ್ಶನಕೊಟ್ಟ ಒಂದು ಸಂಗತಿ ಹೀಗಿದೆ. ಒಂದು ದಿನ ಶ್ರೀಗುರುಗಳು ಈಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಮುಗಿಸಿ ನಂತರ ಅವರು ಭಿಕ್ಷೆಗೆ ತೆರಳುವವರಿದ್ದರು. ಆ ಸಮಯಕ್ಕೆ ಸರಿಯಾಗಿ ವಿಭೂತಿ ಧರಿಸಿದ್ದ ಓರ್ವ ವೃದ್ಧ ಬ್ರಾಹ್ಮಣನು ಇವರ ಬಳಿ ಬಂದು ತನಗೆ ಭೋಜನವನ್ನು ಬ್ರಾಹ್ಮಣ ಸಂತರ್ಪಣೆಗೆ ಮೊದಲು ಮತ್ತು ಗುರುಗಳ ಭಿಕ್ಷಕ್ಕೆ ಮೊದಲೇ ಮಾಡುವಂತೆ ಬೇಡಿಕೊಳ್ಳುತ್ತಾನೆ.
ಶ್ರೀಸ್ವಾಮಿಗಳು ಆಬ್ರಾಹ್ಮಣನ ಮಾತಿಗೆ ಒಪ್ಪಿ ಅವರಿಗೆ ಭೋಜನ ಮಾಡಿಸುವುದಲ್ಲದೇ ಶ್ರೀಮಠದಿಂದ ಮರ್ಯಾದೆ ಮಾಡಿ ಕಳಿಸಿಕೊಡುತ್ತಾರೆ. ಸ್ವಾಮಿಗಳವರು ನೀಡಿದ ಆತಿಥ್ಯಕ್ಕೆ ವೃದ್ಧ ಬ್ರಾಹ್ಮಣನು ಸಂತೋಷ ಪಟ್ಟು ಅದೃಶ್ಯನಾಗುತ್ತಾನೆ. ಸ್ವಾಮಿಗಳವರು ಮಾಡಿದ ಈ ಕೆಲಸಕ್ಕೆ ಅಲ್ಲಿ ಸೇರಿದ್ದ ಶಿಷ್ಯರುಗಳು ಒಬ್ಬರಿಗೊಬ್ಬರು ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.
ಸ್ವಾಮಿಗಳವರಿಗೆ ಇವರುಗಳ ದೂಷಣೆಯನ್ನು ಕೇಳಿಯೂ ಕೇಳಿಸಿಕೊಳ್ಳ ದವರಂತೆ ನಿರ್ಲಿಪ್ತತೆಯಿಂದಿರುತ್ತಾರೆ. ಸ್ವಾಮಿಗಳಿಗೆ ಶಿಷ್ಯರುಗಳನ್ನು ಯಾವರೀತಿ ಸಮಾಧಾನಪಡಿಸಬಹುದೆಂಬುದು ತಿಳಿದಿತ್ತು. ಸಾಯಂಕಾಲ ಈಶ್ವರ ದೇವಸ್ಥಾನದ ಬಾಗಿಲು ತೆಗೆದಾಗ, ಅಲ್ಲಿ ಆ ವೃದ್ಧ ಬ್ರಾಹ್ಮಣನಿಗೆ ಸ್ವಾಮಿಗಳು ಮಠದ ಮರ್ಯಾದೆಯಾಗಿ ಗೌರವಿಸಿ ಕೊಟ್ಟಿದ್ದ ಸಾಮಾನುಗಳು ಶಿವಲಿಂಗದ ಬಳಿಯೇ ಇದ್ದವು. ಇದನ್ನು ಕಣ್ಣಾರೆ ಕಂಡ ಶಿಷ್ಯರುಗಳು ಸಾಕ್ಷಾತ್ ರುದ್ರದೇವರೇ ವ್ರುದ್ಧ ಬ್ರಾಹ್ಮಣನಾಗಿ ಬಂದು ತಮಗೆಲ್ಲಾ ದರ್ಶನ ಕೊಟ್ಟಿರುವುದನ್ನು ತಿಳಿದು ತಾವು ಮಾಡಿದ ದೂಷಣೆಗೆ ಶ್ರೀಗುರುಗಳಲ್ಲಿ ಕ್ಷಮೆಯಾಚಿಸುತ್ತಾರೆ.
ಇನ್ನೊಂದು ಸಂದರ್ಭದಲ್ಲಿ ಶ್ರೀ ಸ್ವಾಮಿಗಳವರು ಶಿಷ್ಯರಿಗೆ ರಾಮನಾಥ ಪುರದಲ್ಲಿ ವೇದಪಾಠಗಳನ್ನು ಮಾಡುತ್ತಿದ್ದಾಗ ನೀರಿನ ಪ್ರವಾಹ ಪಾಠ ಮಾಡುತ್ತಿದ್ದ ಜಾಗದವರೆಗೂ ನುಗ್ಗಿ ಬರುತ್ತದೆ. ಶ್ರೀಗುರುಗಳು ತಮ್ಮ ತಪಶ್ಶಕ್ತಿಯಿಂದ ಗಂಗೆಯನ್ನು ಪ್ರಾರ್ಥನೆ ಮಾಡಿ ನೀರಿನ ಪ್ರವಾಹ ಇಳಿದುಹೋಗುವಂತೆ ಮಾಡುತ್ತಾರೆ.
ದಿವಾನ್ ಪೂರ್ಣಯ್ಯನವರು ಶ್ರೀಗುರುಗಳಲ್ಲಿ ನಿಕಟವಾದ ಸಂಬಂಧ ಹೊಂದಿರುತ್ತಾರೆ. ಮಠದ ಅಭ್ಯುದಯವನ್ನು ನೋಡಿ ಅಂದಿನ ಮಹಾರಾಜರು ಮತ್ತು ದಿವಾನ್ ಪೂರ್ಣಯ್ಯ ನವರು ಬಹಳಷ್ಟು ಬೆಳ್ಳಿ ಬಂಗಾರ ಮತ್ತು ವಜ್ರ, ವೈಢೂರ್ಯಗಳನ್ನು ನಿತ್ಯ ಸೇವೆಗಾಗಿ ಮಠಕ್ಕೆ ಕಾಣಿಕೆಯಾಗಿ ಸಮರ್ಪಿಸುತ್ತಾರೆ. ಶ್ರೀಸತ್ಯಧರ್ಮತೀರ್ಥರು ತಮ್ಮ ಜೀವಿತಾವಧಿಯಲ್ಲಿ ಒಟ್ಟು 16 ಬಾರಿ ಸುಧಾಮಂಗಳ ಮಹೋತ್ಸವವನ್ನು ಆಚರಿಸಿದ ಯತಿವರೇಣ್ಯರು.
ಶ್ರೀಸತ್ಯಧರ್ಮತೀರ್ಥರು ಭಾಗವತ, ತತ್ವ ಸಾಂಖ್ಯಾಯನ, ತತ್ವನಿರ್ಣಯ ಮುಂತಾದ ಗ್ರಂಥಗಳಿಗೆ ಟಿಪ್ಪಣಿಯನ್ನು ಬರೆದ ಮಹಾನುಭಾವರು. ಗ್ರಂಥದಲ್ಲಿ ಉಲ್ಲೇಖವಿರುವಂತೆ ಮೈಸೂರು ಮಹಾರಾಜರು ಮೈಸೂರಿನಲ್ಲಿ ಮಠ ಕಟ್ಟಿಸಿಕೊಡುವುದಾಗಿ ಶ್ರೀಸತ್ಯಧರ್ಮತೀರ್ಥರಿಗೆ ತಮ್ಮ ಅಪೇಕ್ಷೆಯನ್ನು ತಿಳಿಸುತ್ತಾರೆ.
ಒಂದು ದಿನ ಶ್ರೀಸತ್ಯಧರ್ಮತೀರ್ಥರು ರುದ್ರದೇವರ ಸನ್ನಿಧಿಯಲ್ಲಿ ಪೂಜೆ ಮಾಡುತ್ತಿದ್ದಾಗ ಅವರಿಗೆ ಹೊಳೆಹೊನ್ನೂರಿನಲ್ಲಿ ಮಠ ಕಟ್ಟುವಂತೆ ಪ್ರೇರಣೆಯಾಗುತ್ತದೆ. ಶ್ರೀಗುರುಗಳು ಪ್ರೇರಣೆಯಾದಂತೆ ಮೈಸೂರಿನ ಅರಸರಿಗೆ ಆದೇಶಿಸುತ್ತಾರೆ. ಶ್ರೀಸತ್ಯಧರ್ಮತೀರ್ಥಗುರುಗಳು ಹೊಳೆಹೊನ್ನೂರಿನಲ್ಲಿ ಮಹಾರಾಜರು ದಾನವಾಗಿ ಕೊಟ್ಟ ಜಾಗದಲ್ಲಿ ನಿರ್ಮಾಣವಾದ ಮಠದಲ್ಲಿ ಬಹಳ ದಿನ ವಾಸ್ತವ್ಯ ಮಾಡಿದ್ದರು.
ಇವರು ತಮ್ಮ ಶಿಷ್ಯರಾದ ಶ್ರೀಸತ್ಯಸಂಕಲ್ಪ ತೀರ್ಥರನ್ನು ಪೀಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿ 1830ರ ಶ್ರಾವಣಮಾಸದ ಬಹುಳ ತ್ರಯೋದಶಿ ತಿಥಿಯಂದು ಹೊಳೆಹೊನ್ನೂರಿನಲ್ಲಿ ಬೃಂದಾವನಸ್ಥರಾಗುತ್ತಾರೆ. ಶ್ರೀಸತ್ಯಧರ್ಮತೀರ್ಥರಿಗೆ ಬ್ರಂದಾವನಸ್ಥರಾಗುವ ಮೊದಲು ಕಾಶಿಗೆ ಹೋಗಿ ಬರಬೇಕೆಂಬ ಇಚ್ಛೆ ಈಡೇರಿರುವುದಿಲ್ಲ. ಅವರು ಬೃಂದಾವನಸ್ಥರಾದ ಮೇಲೆ ಗಂಗಾದೇವಿಯಿಂದ ಪ್ರೋಕ್ಷಣೆಯಾಗುತ್ತದೆ. ಶ್ರೀಸತ್ಯಧರ್ಮತೀರ್ಥರ ಸನ್ನಿಧಿಯಲ್ಲಿ ಶ್ರೀಜಯತೀರ್ಥರು, ಶ್ರೀವಾದಿರಾಜರು, ಶ್ರೀರಾಘವೇಂದ್ರತೀರ್ಥರು, ಶ್ರೀಸತ್ಯಬೋಧ ತೀರ್ಥರ ಸಾನ್ನಿಧ್ಯವಿರುತ್ತದೆ. ಮಹಾತಪಸ್ವಿಗಳೂ, ಅಪರೋಕ್ಷ ಜ್ಞಾನಿಗಳೂ, ಮನುಕುಲದ ಉದ್ಧಾರಕರೂ ಆದ ಶ್ರೀಸತ್ಯಧರ್ಮತೀರ್ಥಶ್ರೀಪಾದಂಗಳವರ ಆರಾಧನಾ ಪರ್ವಕಾಲದಲ್ಲಿ ಅವರನ್ನು ಸ್ಮರಿಸೋಣ, ಭಕ್ತಿಯ ನಮನಗಳನ್ನು ಅರ್ಪಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
ಲೇಖನ: ಎನ್. ಜಯಭೀಮ್ ಜೋಯ್ಸ್
Discussion about this post