ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ಪ್ರಶ್ನೆ: ನಾನು 32 ವರ್ಷ ವಯಸ್ಸಿನ ಮಹಿಳೆ. ನಾನು ಖಾಸಗಿ ಬ್ಯಾಂಕ್ ಉದ್ಯೋಗಿ. ನಮ್ಮ ತಂದೆ-ತಾಯಿಗೆ ನಾವು ಮೂವರು ಮಕ್ಕಳು. ಅಕ್ಕನ ವಯಸ್ಸು 39 ಹಾಗು ಅಣ್ಣನ ವಯಸ್ಸು 35. ಇಬ್ಬರಿಗೂ ವಿವಾಹವಾಗಿದೆ. ನನ್ನ ತಂದೆ ಹಾಗು ತಾಯಿ ಇಬ್ಬರೂ ನಿಧನರಾಗಿದ್ದಾರೆ. ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ಈ ಸಮಸ್ಯೆಯಿಂದಾಗಿ ನನಗೆ ವಿವಾಹವಾಗಿಲ್ಲ. ನನ್ನ ತಂದೆಯವರು ಅವರ ಸಂಪಾದನೆಯಿಂದ, ನಾವು ವಾಸವಿರುವ ನಗರದಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದಾರೆ ಹಾಗು 40×45 ಅಡಿ ಅಳತೆಯ ನಿವೇಶನವನ್ನೂ ಖರೀದಿಸಿದ್ದಾರೆ. ನಮ್ಮ ತಂದೆ ಈ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಿಲ್ ಬರೆದಿಲ್ಲ. ಹಾಲಿ ನನ್ನ ಅಣ್ಣ ಈ ಆಸ್ತಿಯ ಸ್ವಾಧೀನದಲ್ಲಿದ್ದಾರೆ.
ನನ್ನ ಮಾನಸಿಕ ಸಮಸ್ಯೆಯ ನಡುವೆಯೂ ನಾನು ದೈನಂದಿನ ಜೀವನವನ್ನು ಹಾಗು ನನ್ನ ವೃತ್ತಿಯನ್ನು ಸಹಜವಾಗಿ ನಿರ್ವಹಿಸುತ್ತಿದ್ದೇನೆ. ನನಗೆ ಮಾನಸಿಕ ಸಮಸ್ಯೆ ಇರುವುದರಿಂದ, ನನ್ನ ಅಕ್ಕ ಹಾಗು ಅಣ್ಣ ಆತ್ಮೀಯವಾಗಿ ನಡೆಸಿಕೊಳ್ಳುವುದಿಲ್ಲ ಎಂಬ ಭಾವನೆ ನನ್ನಲ್ಲಿದೆ. ಇದೇ ಕಾರಣದಿಂದ ನನಗೆ ಆಸ್ತಿಯಲ್ಲಿ ಹಕ್ಕು ನಿರಾಕರಿಸುತ್ತಾರೇನೋ ಎಂಬ ಭಯ ನನ್ನನ್ನು ಕಾಡುತ್ತಿದೆ. ನಾನು ನನ್ನ ತಂದೆಯವರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹಳೇ?
ಉತ್ತರ: ಸವಾಲುಗಳ ನಡುವೆ ನಿಮ್ಮ ವೈಯಕ್ತಿಕ ಜೀವನ ಹಾಗು ವೃತ್ತಿಯನ್ನು ಸಹಜವಾಗಿ ನಿರ್ವಹಿಸುತ್ತಿರುವುದಕ್ಕೆ ನಿಮಗೆ ಅಭಿನಂದನೆಗಳು. ನಿಮ್ಮ ಧೈರ್ಯ ಹಾಗು ಆತ್ಮವಿಶ್ವಾಸ ಇತರರಿಗೂ ಮಾದರಿ.
ಇನ್ನು ನೀವು ಉಲ್ಲೇಖಿಸಿರುವ ನಿಮ್ಮ ತಂದೆಯವರ ಎರಡೂ ಆಸ್ತಿಗಳಲ್ಲೂ ನಿಮಗೆ ಮೂರನೇ ಒಂದರಷ್ಟು ಪಾಲು ಇದೆ. ಹಿಂದೂ ಉತ್ತರಾಧಿಕಾರ ಕಾಯಿದೆಯ ಕಲಂ 28ರ ಪ್ರಕಾರ, ಯಾವುದೇ ದೈಹಿಕ ಅಥವಾ ಮಾನಸಿಕ ಕಾಯಿಲೆಯ ನೆಪವೊಡ್ಡಿ ಆಸ್ತಿ ಹಕ್ಕನ್ನು ನಿರಾಕರಿಸುವಂತಿಲ್ಲ. ತಕ್ಷಣವೇ ನಿಮಗೆ ಆಸ್ತಿಯಲ್ಲಿ ಪಾಲು ಬೇಕು ಎಂದರೆ, ನಿಮ್ಮ ಅಕ್ಕ ಹಾಗು ಅಣ್ಣನವರಲ್ಲಿ ಈ ಕುರಿತಂತೆ ಮಾತನಾಡಿ. ಅವರು ಪಾಲು ನೀಡಲು ಒಪ್ಪದಿದ್ದರೆ, ನೀವು ಆಸ್ತಿಯಲ್ಲಿ ನಿಮ್ಮ ನ್ಯಾಯಯುತ ಪಾಲಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಬಹುದು. ಈ ನಿಟ್ಟಿನಲ್ಲಿ ಉಚಿತ ಕಾನೂನು ಸಲಹೆ ಅಥವಾ ನೆರವನ್ನು ಪಡೆಯಲು ನೀವು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನೂ ಸಂಪರ್ಕಿಸಬಹುದು. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಉಚಿತ ಸಹಾಯವಾಣಿ 15100 ಗೆ ಕೂಡ ಕರೆ ಮಾಡಬಹುದು.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post