ಕಲ್ಪ ಮೀಡಿಯಾ ಹೌಸ್
ಯಕ್ಷಗಾನ ಕ್ಷೇತ್ರದ ಧೀಮಂತ ಚಿಂತಕ, ಪ್ರಸಿದ್ಧ ಲೇಖಕ, ವಾಗ್ಮಿ, ಪ್ರಸಂಗಕರ್ತ (ಮಹಾಬಲೇಶ್ವರ) ಎಮ್.ಎ. ಹೆಗ್ಡೆಯವರು ಇಂದು ಬೆಳಿಗ್ಗೆ ನಿಧನರಾದ ವಿಷಯ ಕೇಳಿ ದಿಗ್ಭ್ರಾಂತರಾಗಿದ್ದೇವೆ. ಏ.13ರಿಂದ ಕೋವಿಡ್ನಿಂದ ಬಳಲುತ್ತಿದ್ದ ಅವರು ಇಂದು ತೀವ್ರ ಉಸಿರಾಟದ ತೊಂದರೆಯಿಂದ ನಿಧರಾಗಿದ್ದಾರೆ.
ಯಕ್ಷಗಾನ ಅಕಾಡೆಮಿಗೆ ಎರಡನೆಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ವಿಶಿಷ್ಠ ವಿದ್ವಾಂಸರು. ಅಕಾಡೆಮಿ ಅಧ್ಯಕ್ಷರಾಗಿ ಹಲವಾರು ಶೈಕ್ಷಣಿಕ ಕಾರ್ಯ, ಚಿಂತನೆ ಹಾಗೂ ಅನುಷ್ಠಾನಗಳಿಂದ ರಂಗಕ್ಕೊಂದು ಹೊಸ ಆಯಾಮ ನೀಡಿದ್ದರು. ಸ್ವತಃ ಕಲಾವಿದರಾಗಿ ಪ್ರಸಂಗಕರ್ತರಾಗಿ, ಪಾತ್ರಧಾರಿಗಳಾಗಿದ್ದ ಹೆಗ್ಡೆಯವರು ಕಳೆದ 50 ವರ್ಷಗಳಿಂದ ಯಕ್ಷಗಾನ ರಂಗಭೂಮಿ ಬಗ್ಗೆ ಹಲವು ರೀತಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ಸಂಸ್ಕೃತ ಪ್ರಾಧ್ಯಾಪಕರಾಗಿ ಸಿದ್ಧಾಪುರದ ಎಮ್ಜಿ ಕಾಲೇಜಿನ ಪ್ರಾಚಾರ್ಯರಾಗಿ ಸಾವಿರಾರು ಶಿಷ್ಯರನ್ನು ತಯಾರಿಸಿದ್ದವರು. ಕೆರೆಮನೆ ಶಂಭುಹೆಗ್ಡೆ ನಾಟ್ಯೋತ್ಸವದ ಅಧ್ಯಕ್ಷರಾಗಿ ಎಲ್ಲಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತವರು. ಯಕ್ಷಗಾನ ಅಕಾಡೆಮಿ ವತಿಯಿಂದ 5000 ಪ್ರಸಂಗಗಳ ದಾಖಲೀಕರಣ, ತರಬೇತಿ ಕಾರ್ಯಕ್ರಮ, ಮಾತಿನ ಮಂಟಪದ ಮೂಲಕ ಹಿರಿಯ ಕಲಾವಿದರ ಮಾತುಗಳು ಹಾಗೂ ಪರಿಚಯ ಮಾಡಿದ್ದು, ಮೂಡಲಪಾಯ ಯಕ್ಷಗಾನ ಪದ್ಧತಿಯ ಪುನಶ್ಚೇತನ ನೀಡಿದ್ದು, ಹೀಗೇ ಹಲವು ರೀತಿಯಲ್ಲಿ ಅಕಾಡೆಮಿಯ ಶೈಕ್ಷಣಿಕ ಔನತ್ಯ ಹಾಗೂ ಸಾಹಿತ್ಯಿಕ ಪ್ರಭುದ್ಧತೆಗಾಗಿ ಶ್ರಮಿಸಿದವರು.
ಶಬ್ಧ ಮತ್ತು ಜಗತ್ತು (The word and the world), ಛಂದಸ್ಸುಗಳು, ಭಗವದ್ಗೀತಾ ಪ್ರಬಂಧ ಮುಂತಾದ ಹಲವಾರು ವಿಶಿಷ್ಟ ಕೃತಿಗಳ ಮೂಲಕ ಸಾಹಿತ್ಯ ಲೋಕದ ಪಂಡಿತರೆನಿಸಿದ್ದ ಹೆಗ್ಡೆ ಸರಳ ಹಾಗೂ ಸ್ನೇಹಜೀವಿ. ಹೀಗೆ ಹಲವು ರೀತಿಯ ಪ್ರೌಢ ಚಿಂತಕರಾಗಿದ್ದ ಹೆಗ್ಡೆಯವರ ನಿಧನಕ್ಕೆ ಕೆರೆಮನೆ ಶಂಭು ಹೆಗ್ಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಿತಿ, ಶಿವಮೊಗ್ಗ ಶಂಭು ಮಿತ್ರ ವೇದಿಕೆ, ಅಭ್ಯುದಯ ಸಂಸ್ಥೆ, ಶ್ರೀವಿಜಯಕಲಾನಿಕೇತನ ಸಂಸ್ಥೆಯ ಪರವಾಗಿ ಡಾ. ಶ್ರೀಧರ್ ಹಾಗೂ ವಿಜಯಾ ಶ್ರೀಧರ್, ಫ್ರೊ.ಹೆಗ್ಡೆ ಅವರ ಅಭಿಮಾನಿ ಮಿತ್ರರಾದ
ಕಲ್ಪ ನ್ಯೂಸ್ ಹಿರಿಯ ಸಲಹಾ ಸಂಪಾದಕ ಡಾ.ಎನ್ ಸುಧೀಂದ್ರ ಮತ್ತು ಕೆ.ಜಿ.ಮಂಜುನಾಥ ಶರ್ಮ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಹೆಗ್ಡೆ ಅವರ ನಿಧನದಿಂದ ಅನಾಥಪ್ರಜ್ಞೆ ಕಾಡುತ್ತಿದೆ: ಲ.ನಾ. ಕಾಶಿ
ಹೆಗ್ಡೆಯವರ ನಿಧನ ನನ್ನ ಬದುಕಿನಲ್ಲೊಂದು ನಿರ್ಯಾತ ಸೃಷ್ಟಿಸಿದೆ, ವೈಯಕ್ತಿ ಮಾರ್ಗದರ್ಶಕರಾಗಿ, ಸಾಂಸ್ಕೃತಿಕ ಚಿಂತನೆಗೆ ನೆಲೆ ನೀಡಿ, ಸಾಮಾಜಿಕ ಸಂಬಂಧಗಳನ್ನು ರೂಪಿಸಿಕೊಳ್ಳುವಲ್ಲಿ ನಿರಂತರ ನೆರವು ನೀಡುತ್ತಿದ್ದ ಪಂಡಿತರು. ಆಳವಾದ ಆಲೋಚನೆ, ಶಾಂತಮನದ ಕ್ರಿಯಾಶೀಲತೆ, ಪ್ರತ್ಯುತ್ಪನ್ನಮತಿಗಳಾಗಿ ನನಗೆ ಮಾರ್ಗದರ್ಶಕರಾಗಿದ್ದ ಹೆಗ್ಡೆಯವರಿಗೆ ನಾನೆಷ್ಟು ಋಣಿಯೋ ಅವರನ್ನು ಕಳೆದುಕೊಂಡು ಅನಾಥ ಪ್ರಜ್ಞೆ ಕಾಡುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post