ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ (ಉತ್ತರ ಪ್ರದೇಶ) |
ಕರ್ನಾಟಕದ ರಾಮನಗರ ಜಿಲ್ಲೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ..ಸಿ ಎನ್ ಅಶ್ವತ್ಥನಾರಾಯಣ Minister Ashwath Narayana ಅವರ ನೇತೃತ್ವದಲ್ಲಿ ಇಲ್ಲಿಗೆ ಆಗಮಿಸಿರುವ 150 ಯಾತ್ರಾರ್ಥಿಗಳ ತಂಡವು ಇಲ್ಲಿ ಮೈದಾಳುತ್ತಿರುವ ಭವ್ಯ ಶ್ರೀರಾಮ ಮಂದಿರಕ್ಕೆ Ayodhya Ramamandira 1.50 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆ, ಸೀತಾಮಾತೆಗೆ ಸ್ಥಳೀಯ ರೇಷ್ಮೆ ಸೀರೆ, ರಾಮ-ಲಕ್ಷ್ಮಣರಿಗೆ ಶಲ್ಯಗಳನ್ನು ಗುರುವಾರ ಸಮರ್ಪಿಸಿತು.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಚಿವರ ನೇತೃತ್ವದಲ್ಲಿ ಭಕ್ತರ ತಂಡವು ರಾಮ ಮಂದಿರ ಆವರಣಕ್ಕೆ ಆಗಮಿಸಿತು. ನಂತರ, ಇಲ್ಲಿರುವ ಕನ್ನಡಿಗ ಅರ್ಚಕರಾದ ಗೋಪಾಲ್ ಭಟ್ ಮತ್ತು ಅವರ ತಂಡವು ರಾಮನಗರದ ತಂಡವು ಭಕ್ತಿ-ಗೌರವಗಳೊಂದಿಗೆ ತಂದಿದ್ದ ಕಾಣಿಕೆಗಳಿಗೆ ವಿಧಿಬದ್ಧವಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಯೋಧ್ಯೆಯ ಪವಿತ್ರ ಮೃತ್ತಿಕೆಯನ್ನು ಕೂಡ ಶಾಸ್ತ್ರೋಕ್ತವಾಗಿ ಪೂಜಿಸಿ, ಸಚಿವರು ಮತ್ತು ಅವರ ಸಹಯಾತ್ರಾರ್ಥಿಗಳಿಗೆ ವಿತರಿಸಲಾಯಿತು. ಈ ಮೃತ್ತಿಕೆಯನ್ನು ರಾಮದೇವರ ಬೆಟ್ಟಕ್ಕೆ ಸಮರ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ರಾಮದೇವರ ಬೆಟ್ಟದ ತಾಣವಾದ ರಾಮನಗರವು ಪರಮಾತ್ಮನಾದ ಶ್ರೀರಾಮನ ಹೆಸರನ್ನೇ ಹೊತ್ತಿದೆ. ಜತೆಗೆ ಈ ಬೆಟ್ಟದಲ್ಲಿ ದೇಶದಲ್ಲೇ ಅಪರೂಪವಾಗಿರುವ ರಣಹದ್ದಿನ ಸಂತತಿ ಉಳಿದುಕೊಂಡಿದೆ. ರಾಮಾಯಣದಲ್ಲೂ ಈ ಸಂತತಿಗೆ ಸೇರಿದ ಜಟಾಯು, ಸಂಪಾತಿಗಳ ಪಾತ್ರವಿದೆ. ಹೀಗೆ ರಾಮನಗರ, ರಾಮ ಮತ್ತು ರಾಮಾಯಣಗಳ ನಡುವೆ ಮಧುರ ಬಾಂಧವ್ಯವಿದೆ’ ಎಂದು ಸ್ಮರಿಸಿದರು.

‘ರಾಮನಿಂದ ನಮ್ಮಲ್ಲಿ ರಾಮರಾಜ್ಯದ ಪರಿಕಲ್ಪನೆ ಬಂದಿದೆ. ತ್ರೇತಾಯುಗದಿಂದಲೂ ರಾಮನು ಭಾರತೀಯರನ್ನು ಒಗ್ಗೂಡಿಸುವ ಶಕ್ತಿಯಾಗಿ ಉಳಿದುಕೊಂಡು ಬಂದಿದ್ದಾನೆ. ಇಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರಕ್ಕೆ ತಮ್ಮ ಕಾಣಿಕೆಯೂ ಇರಬೇಕೆಂದು ರಾಮನಗರದ ಭಕ್ತ ಮಹಾಶಯರು ಅಪೇಕ್ಷೆ ವ್ಯಕ್ತಪಡಿಸಿದರು. ಈ ಮೂಲಕ ರಾಮನಗರದ ಜನತೆಗೆ ಪರಮಾತ್ಮನ ಆಶೀರ್ವಾದ ಸಿಕ್ಕಿದೆ’ ಎಂದು ಸಚಿವರು ಬಣ್ಣಿಸಿದರು.

ಸಚಿವರ ಜೊತೆ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜು, ರಾಜ್ಯ ರೇಷ್ಮೆ ಕೈಗಾರಿಕೆ ಉದ್ಯಮಗಳ ನಿಗಮದ ಅಧ್ಯಕ್ಷ ಗೌತಮ್ ಗೌಡ ಸೇರಿದಂತೆ ಹಲವರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post