ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 5 ವಿಧಾನಸಭಾ ಕ್ಷೇತ್ರಗಳಿದ್ದು, ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಮತ್ತು ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.
ಅವರು ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಚುನಾವಣೆಯಲ್ಲಿ ಯಾವುದೇ ಅವ್ಯವಹಾರ ಇಲ್ಲದೇ ಕಟ್ಟುನಿಟ್ಟಾಗಿ ಚುನಾವಣೆ ಎದುರಿಸಲು, ಜಿಲ್ಲಾ ವ್ಯಾಪ್ತಿಯಲ್ಲಿ 18 ಚೆಕ್ ಪೋಸ್ಟ್’ಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಅಂತಾರಾಜ್ಯ-11, ಅಂತರ್ ಜಿಲ್ಲೆ-5, ಜಿಲ್ಲಾ ವ್ಯಾಪ್ತಿಯಲ್ಲಿ 2 ಚೆಕ್ ಪೋಸ್ಟ್’ಗಳನ್ನು ತೆರೆದು ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ. ದಿನದ 24 ಗಂಟೆ ವಾಹನಗಳ ಮತ್ತು ಸಂಶಯಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 2 ವಾರಗಳಿಂದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಕ್ರಮ ಚಟುವಟಿಕೆಗಳ, ಮತದಾರರಿಗೆ ಉಚಿತ ಆಮಿಷಗಳನ್ನು ಒಡ್ಡುವರರ ಬಗ್ಗೆ, ಅಕ್ರಮ ಮದ್ಯ ಸಾಗಾಣಿಕೆ ಮತ್ತು ವಾರಸುದಾರರಿಲ್ಲದ ವಸ್ತುಗಳ ಮೇಲೆ ದಾಳಿ ಮಾಡಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ ಎಂದು ಹೇಳಿದರು.
ಚುನಾವಣೆಗೆ ಸಂಬಂಧಿಸಿದಂತೆ ನೆರೆಯ ಜಿಲ್ಲೆಗಳಾದ ವಿಜಯನಗರ, ಚಿತ್ರದುರ್ಗ, ಕೊಪ್ಪಳ, ರಾಯಚೂರು ಮತ್ತು ಗಡಿಭಾಗದ ಆಂಧ್ರಪ್ರದೇಶ, ಅನಂತಪುರ ಹಾಗೂ ಕರ್ನೂಲು ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಈಗಾಗಲೇ ಜಿಲ್ಲಾ ಗಡಿ ಅಪರಾಧ ಸಭೆಗಳನ್ನು ವಿಡಿಯೋ ಸಂವಾದದ ಮೂಲಕ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಮತ್ತು ಇತರೆ ಜಿಲ್ಲೆಯಲ್ಲಿರುವಂತಹ ಎನ್.ಬಿ.ಡಬ್ಲ್ಯೂ ವ್ಯಕ್ತಿಗಳು, ರೌಡಿಶೀಟರ್’ಗಳು, ಸಂಶಯುತ ಗಲಭೆ ಮಾಡುವಂತಹ ವ್ಯಕ್ತಿಗಳು ಮತ್ತು ಗಡಿ ಭಾಗದ ಗ್ರಾಮಗಳಲ್ಲಿ ನಡೆಯುವ ಚಟುವಟಿಕೆಗಳು ಮತ್ತು ಗಡಿ ತಪಾಸಣೆ ಚೆಕ್ ಪೋಸ್ಟ್’ಗಳಲ್ಲಿ ನಿರ್ವಹಿಸುವ ಬಗ್ಗೆ ಪರಸ್ಪರ ಸಹಕಾರ ಮತ್ತು ಮಾಹಿತಿಗಳ ವಿನಿಮಯ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ವಿವಿಧ ಠಾಣೆಗಳಲ್ಲಿ ಏರಿಯಾ ಡಾಮಿನೇಷನ್ ಪ್ರತಿದಿನ ನಿರ್ವಹಿಸಲಾಗುತ್ತಿದೆ. ಈ ಸಮಯದಲ್ಲಿ ವಾಹನ ತಪಾಸಣೆ, ರೌಡಿಗಳ ತಪಾಸಣೆ, ಸಂಶಯಾಸ್ಪದ ವ್ಯಕ್ತಿಗಳ ತಪಾಸಣೆ, ಕೋಟ್ಪಾ ಅಬಕಾರಿ ಪ್ರಕರಣಗಳು ಮತ್ತು ಕೆ.ಪಿ.ಆಕ್ಟ್ ಅಡಿಯಲ್ಲಿ ಕ್ರಮ ಜರುಗಿಸುವುದು, ವಾರೆಂಟ್ ಆಸಾಮಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸುವ ಕರ್ತವ್ಯ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ ಒಟ್ಟು 9 ಎನ್.ಡಿ.ಪಿ.ಎಸ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ರೂ.1,60,000 ಮೌಲ್ಯದ 5.5 ಕೆ.ಜಿ ಮಾದಕ ದ್ರವ್ಯವನ್ನು ಮತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ವಿವಿಧ ಠಾಣೆಗಳಲ್ಲಿ ಈ ಹಿಂದೆ ದಾಖಲಾಗಿದ್ದ ಎನ್.ಡಿ.ಪಿ.ಎಸ್. ಪ್ರಕರಣಗಳಲ್ಲಿ ಜಪ್ತಿ ಪಡಿಸಿಕೊಂಡಿದ್ದ ರೂ.7,72,532 ಮೌಲ್ಯದ 134.826 ಕೆ.ಜಿ ಮಾದಕ ವಸ್ತುಗಳನ್ನು ಈ ಡ್ರಗ್ ಡಿಸ್ಪೆÇೀಸಲ್ ಕಮಿಟಿ ನೇತೃತ್ವದಲ್ಲಿ ಹರಗಿನದೋಣಿ ಗ್ರಾಮದ ಹೊರ ವಲಯದಲ್ಲಿ ನಾಶಪಡಿಸಲಾಗಿರುತ್ತದೆ ಎಂದು ಹೇಳಿದರು.
ಬಳ್ಳಾರಿ ನಗರ ಸಂಚಾರ ವ್ಯಾಪ್ತಿಯಲ್ಲಿ 2 ಸಂಚಾರಿ ದೀಪಗಳನ್ನು ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಹಾಗೂ ವಿವಿಧ ಕಡೆ ಸೈನ್ ಬೋರ್ಡ್ಗಳನ್ನು ಅಳವಡಿಸಲಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇತರೆ ಪೊಲೀಸ್ ಅಧಿಕಾರಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post