ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಪ್ರಸ್ತುತ ಸಚಿವ ಸಂಪುಟದಲ್ಲಿರುವ ಅರ್ಧ ಡಜನ್ಗೂ ಹೆಚ್ಚು ಮಂತ್ರಿಗಳಿಗೆ ವಿದಾಯ ಹೇಳಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿದೆ.
ಹೀಗೆ ಹೊರಬೀಳಲಿರುವ ನಾಯಕರಿಗೆ ರಾಷ್ಟ್ರೀಯ ಮುಖಂಡರು ಪಕ್ಷ ಕಟ್ಟುವ ಜವಾಬ್ದಾರಿ ವಹಿಸುವ ಸಾಧ್ಯತೆ ಇದ್ದು, ಪಕ್ಷ ಹಾಗೂ ಸರ್ಕಾರಕ್ಕೆ ಹಿರಿಯ ನಾಯಕರು ತುಂಬಿರುವ ಶಕ್ತಿ ಅಪಾರವಾಗಿದೆ. ಹೀಗಾಗಿ ತಾವು ಪ್ರತಿನಿಧಿಸುವ ಕ್ಷೇತ್ರದ ಜತೆಗೆ ಕನಿಷ್ಟ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಗೆಲುವು ತರಬೇಕು ಎಂಬ ಸೂಚನೆ ನೀಡಬಹುದು ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ಬಲಿಷ್ಟತೆ ಹೆಚ್ಚಲು ಹಿರಿಯ ನಾಯಕರ ಕೊಡುಗೆ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೂ ತಮ್ಮ ಅನುಭವದ ಅಗತ್ಯವಿದೆ. 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಡಿ ಎದುರಿಸಿ, ಗೆದ್ದು ಅಧಿಕಾರ ಹಿಡಿದ ಮೇಲೆ ಪುನ: ಮಂತ್ರಿಗಳಾಗಿ ಎಂದು ಸೂಚಿಸಬಹುದು ಎನ್ನಲಾಗಿದೆ.
ರಾಜ್ಯದಲ್ಲಿ ಪಕ್ಷದ ಬಲವರ್ಧನೆಯಾದರೆ ಮಾತ್ರ 2024ರ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತೈದರಷ್ಟು ಸ್ಥಾನ ಗಳಿಸಲು ಸುಲಭವಾಗಲಿದ್ದು, ಈಗ ಸರ್ಕಾರದಲ್ಲಿದ್ದು ನೀವು ಮಾಡಿದ ಕ್ರಾಂತಿಕಾರಿ ಸಾಧನೆಗಳು ಜನರ ಮೆಚ್ಚುಗೆ ಗಳಿಸಿವೆ. ಹೀಗಾಗಿ ಪರ್ಯಾಯ ಸರ್ಕಾರದಲ್ಲಿ ಹೊಸಬರಿಗೆ ಅವಕಾಶ ನೀಡಿ ಅವರಲ್ಲಿ ನಾಯಕತ್ವದ ಶಕ್ತಿ ಹೆಚ್ಚಿಸೋಣ ಎಂದು ಸಲಹೆ ನೀಡಬಹುದು ಎಂದು ತಿಳಿದುಬಂದಿದೆ.
ಹಿರಿಯ ಮುಖಂಡರು ಈಗಾಗಲೇ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವುದರಿಂದ ಪಕ್ಷ ಸಂಘಟನೆಯ ಕೆಲಸಕ್ಕೆ ತೆರಳಿ ಎಂದು ಈ ನಾಯಕರಿಗೆ ಸೂಚನೆ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post