ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪೋತೆ ಸ್ನೇಹಮಯಿ, ವಾತ್ಸಲ್ಯ ಮಯಿ, ವಿಶ್ವಾಸಕ್ಕೆ ಎಂದೂ ಕುಂದು ತರುವ ವ್ಯಕ್ತಿ ಅಲ್ಲ. ಪೋತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತರಲ್ಲ ಎಂದು ಹಿರಿಯ ಸಾಹಿತಿ ಹಂಪನಾ ಹೇಳಿದರು.
ಅವರು ಸಪ್ನ ಬುಕ್ ಹೌಸ್, ಕನ್ನಡ ಜನಶಕ್ತಿ ಕೇಂದ್ರ ಬೆಂಗಳೂರು ಹಾಗೂ ಕಲಬುರಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದೊಂದಿಗೆ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ. ಎಚ್.ಟಿ. ಪೋತೆಯವರ ನಾಲ್ಕು ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋತೆ ಅವರ ಬಹು ಮುಖ್ಯ ಕ್ಷೇತ್ರ ಅಂದ್ರೆ ಜಾನಪದ ಕ್ಷೇತ್ರ. ಅವರು ಜಾನಪದ ಕ್ಷೇತ್ರದಲ್ಲಿ ವಿಶಿಷ್ಟ ಕೆಲಸಗಳನ್ನು, ಪ್ರಯೋಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರು ಯಾವ ಸಮಾಜದಿಂದ ಬಂದರು ಆ ಸಮಾಜದ ಹೊರ ಅಧ್ಯಯನ ಮತ್ತು ಒಳ ಅಧ್ಯಯನವನ್ನು ಮಾಡಿದ್ದಾರೆ ಹಾಗೂ ಆ ಸಮುದಾಯವನ್ನು ಅಭಿವೃದ್ಧಿ ಪಡಿಸಿದ ಅಂಬೇಡ್ಕರ್ ಅವರಂತೆ ಇನ್ನಿತರ ವ್ಯಕ್ತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಅವರು ಬೆಳೆದು ಬಂದಿರುವ ಹಾದಿ ಬಹಳ ವಿಭಿನ್ನವಾಗಿದೆ. ಇನ್ನು ಮುಂದೆಯೂ ಇನ್ನಷ್ಟು ಹೊಸ ಕೃತಿಗಳು ಅವರಿಂದ ಬರಲಿ ಎಂದು ಆಶಿಸಿದರು.
ಕನ್ನಡ ಅಧ್ಯಯನ ಕೇಂದ್ರ ಕರ್ನಾಟಕ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಮುದೇನೂರು ನಿಂಗಪ್ಪ ಮಾತಾನಾಡಿ, ‘ಬಯಲೆಂಬೊ ಬಯಲು’ ವಚನ ಸಾಹಿತ್ಯವಾಗಿದೆ. ತಾತ್ವಿಕ ನೆಲೆಯಲ್ಲಿಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಯಾವುದೇ ಲೇಖಕ ತನ್ನ ಆತ್ಮ ವಿಶ್ವಾಸವನ್ನು ಕೊನೆಯವರೆಗೂ ಇಟ್ಟುಕೊಳ್ಳಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ತಿಳಿಹೇಳಲಾಗಿದೆ ಎಂದು ಅವರು ಕೃತಿಯ ಬಗ್ಗೆ ಅವಲೋಕನ ಮಾಡಿದರು.
ಶ್ರೀಶೈಲ ನಾಗರಾಳ ಮಾತನಾಡಿ, ಪೋತೆ ಅವರು ಜನಪದ ಕ್ಷೇತ್ರ, ವಿಚಾರವಾದಿ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದು ಬಹುಮುಖ್ಯವಾಗಿ ಅವರು ಸೃಜನಶೀಲ ಲೇಖಕ ಕೂಡ ಹೌದು. ಅವರ ಎರಡು ಕಾದಂಬರಿಗಳು ‘ಬಯಲೊಂಬ ಬಯಲು’ ಮತ್ತು ‘ಮಹಾಬಿಂದು’ ಕಾದಂಬರಿ ಪುನರಾವಲೋಕನಕ್ಕೆ ಹೆಸರುವಾಸಿಯಾಗಿವೆ. ವಿಶ್ವ ಪರ್ಯಟನೆ ಮಾಡಿದ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಇವರಿಗಿದೆ ಎಂದು ಹೇಳಿದರು.
ಕನ್ನಡ ವಿಭಾಗ ಶೇಷಾದ್ರಿಪುರಂ ಸಂಜೆ ಕಾಲೇಜಿನ ಮುಖ್ಯಸ್ಥರು ಸತ್ಯಮಂಗಲ ಮಹಾದೇವ ಅವರು ಮಾತಾನಾಡಿ, ‘ಅಂಬೇಡ್ಕರ್ ಭಾರತ’ ಹಲವು ಹೂಗಳ ಹಾರವಾಗಿದೆ. ಹಾಗೆಯೇ ಭಾರತವು ಜಾತ್ಯಾತೀತಗಳಿಂದ, ಸಮಾನತೆಯಿಂದ ಕೂಡಿದ ದೇಶವಾಗಿದೆ. ಅಂಬೇಡ್ಕರ್ ಕಂಡ ಭಾರತವನ್ನು ಪೋತೆಯವರು ಕಟ್ಟಿಕೊಟ್ಟಿದ್ದಾರೆ ಎಂದು ‘ಅಂಬೇಡ್ಕರ್ ಭಾರತ’ ಕೃತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ದಿ ಆಕ್ಸ್ಫರ್ಡ್ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ನ ಸಹ ಪ್ರಾಧ್ಯಾಪಕ ಶಿವರಾಜ ಬ್ಯಾಡರಹಳ್ಳಿಯವರು, ಜನಪದ ಕೃತಿ ಎಂಬುದು ಬಹಳ ಸುಲಭವಾಗಿರುತ್ತದೆ ಎಂಬ ಭ್ರಮೆಯಲ್ಲಿ ಎಲ್ಲರೂ ಇರುತ್ತಾರೆ. ಆದರೆ ನಿಜವಾದ ಜನಪದ ಸಾಹಿತ್ಯ 1970 ರಲ್ಲಿ ಪ್ರಾರಂಭವಾಯಿತು. ಇಂದಿನ ಕಾಲದಲ್ಲಿ ಎಲ್ಲ ಕೃತಿಗಳಿಗೂ ಪ್ರಶಸ್ತಿ ಸಿಗುವುದನ್ನು ನಾವು ಕಾಣುತ್ತೇವೆ. ಇಂದು ಒಂದು ಪುಸ್ತಕವು ಮರುಮುದ್ರಣಗೊಳ್ಳಬೇಕಾದರೆ ಬಹಳ ಕಷ್ಟವಿದೆ. ಆದರೆ ಈ ಕೃತಿಯು ಮರು ಮುದ್ರಣಗೊಂಡು ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಸಮಾಜೋಜಾನಪದ ಮತ್ತು ಜಾನಪದ ಜ್ಞಾನ-ವಿಜ್ಞಾನ ಕೃತಿಯ ಬಗ್ಗೆ ವಿಷಯ ಮಂಡನೆ ಮಾಡಿದರು.
ಲೇಖಕ ಎಚ್.ಟಿ. ಪೋತೆ ಮಾತಾನಾಡಿ, ನಾನು ಈ ಕೃತಿಗಳನ್ನು ರಚಿಸಲು ಮುಖ್ಯ ಕಾರಣ ನಮ್ಮ ದೇಶಕ್ಕೆ ಅಂಟಿಕೊಂಡಿರುವ ಜಾತಿಪದ್ಧತಿ, ಮತಾಂಧತೆಯನ್ನು ಹೋಗಲಾಡಿಸಬೇಕು ಎಂಬುದಾಗಿದೆ. ಸಂವಿಧಾನ ಇರಲಿಲ್ಲ ಎಂದರೆ ನನ್ನ ಪ್ರಕಾರ ನಾನು ಹಾಗೂ ನನ್ನ ಕುಟುಂಬದ ಸದಸ್ಯರು ವಿದ್ಯಾವಂತಾರಾಗುತ್ತಿರಲಿಲ್ಲ. ಇಂದು ನಾನು ಈ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ನಿಂತಿದ್ದೇನೆ ಎಂದಾದರೆ ಅದು ನನಗೆ ಸಾಮಾನ್ಯ ವಿಚಾರವಲ್ಲ. ಏಕೆಂದರೆ ಕನ್ನಡ ಸಾಹಿತ್ಯ ಕೇಂದ್ರ ಎನ್ನುವುದು ಒಂದು ಪುಣ್ಯ ಶಕ್ತಿ ಕೇಂದ್ರವಾಗಿದೆ ಎಂದು ತನ್ನ ಓದಿನ ದಿನ ಹಾಗೂ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.
ಹಿ.ಚಿ.ಬೋರಲಿಂಗಯ್ಯ ಮಾತಾನಾಡಿ. ಇಂದಿನ ಕಾಲದಲ್ಲಿ ಪತ್ರಿಕೆಗಳನ್ನು ಓದುವವರೇ ಇಲ್ಲ. ಇನ್ನು ಪುಸ್ತಕಗಳನ್ನು ಓದುವವರ ಸಂಖ್ಯೆ ತೀರ ಕ್ಷೀಣಿಸಿದೆ. ಇದು ನಿಜವಾದ ದುರಂತ. ಇಂತಹ ಕಾಲಘಟ್ಟದಲ್ಲಿ ಪೋತೆಯವರಂತಹ ಲೇಖಕರು ಇರುವುದು ಇಂದಿನ ಸಾಹಿತ್ಯ ಕ್ಷೇತ್ರ ಉಳಿಯಲು ಬಹು ಮುಖ್ಯ ಕಾರಣ ಎನ್ನಬಹುದಾಗಿದೆ. ಪೋತೆಯವರ 3 ಕೃತಿಗಳು ಒಂದೊಂದು ಸಂದೇಶವನ್ನು ನೀಡುತ್ತವೆ ಹಾಗೂ ಅವರು ನಡೆಸಿರುವ ಅಧ್ಯಯನ ಪುಸ್ತಕದಲ್ಲಿ ಬಹಳ ಚೆನ್ನಾಗಿ ಬಿಂಬಿತವಾಗಿದೆ ಎಂದು ಅಧ್ಯಕ್ಷೀಯ ನುಡಿಗಳಾನ್ನಾಡಿದರು.
ಜನಶಕ್ತಿ ಕೇಂದ್ರ ಅಧ್ಯಕ್ಷ ರಾಮೇಗೌಡ ಸ್ವಾಗತಿಸಿ, ನಂಜುಂಡ ಅವರು ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post