ಶಿವಮೊಗ್ಗ: ಶಿವಮೊಗ್ಗ ಹಾಗೂ ಬೆಂಗಳೂರು ನಡುವೆ ಸಂಚರಿಸುತ್ತಿರುವ ಇಂಟರ್ ಸಿಟಿ ರೈಲನ್ನು ತಾಳಗುಪ್ಪಕ್ಕೆ ವಿಸ್ತರಣೆ ಮಾಡಿ ಸಾಗರ ಸೀಮೆ ಮಂದಿಗೆ ಕೇಂದ್ರ ಸರ್ಕಾರ ವಿಶೇಷ ಕೊಡುಗೆ ನೀಡಿದೆ.
ಚುನಾವಣಾ ಸಮಯದಲ್ಲಿ ಸಾಗರಕ್ಕೆ ಆಗಮಿಸಿದ್ದ ಕೇಂದ್ರ ಸಂಪರ್ಕ ಮತ್ತು ಸಂವಹನ ಹಾಗೂ ರೈಲ್ವೆ ರಾಜ್ಯ ಸಚಿವ ಮನೋಜ್ ಕುಮಾರ್ ಸಿನ್ಹಾ ಅವರಿಗೆ ಪ್ರಯಾಣಿಕರ ಹಿತ ದೃಷ್ಟಿಯಿಂದ ಶಿವಮೊಗ್ಗ – ಬೆಂಗಳೂರು ಇಂಟರ್ ಸಿಟಿ ರೈಲ್ವೆ ಸಂಪರ್ಕವನ್ನು ತಾಳುಗುಪ್ಪಕ್ಕೆ ವಿಸ್ತರಿಸುವಂತೆ ಮನವಿ ಸಲ್ಲಿಸಲಾಗಿತ್ತು.
ಆನಂತರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿರುವ ಸಚಿವರು ಇಂಟರ್ ಸಿಟಿ ರೈಲನ್ನು ತಾಳಗುಪ್ಪದವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಸೇವೆಗೆ ವಿಶೇಷವಾಗಿ ಸ್ಪಂದಿಸಿ ಜನರಿಗೆ ಸೇವೆ ಒದಗಿಸಿದ ಯಡಿಯೂರಪ್ಪನವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಾಗರ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಪ್ರಸನ್ನ ಕೆರೆಕೈ ಉಪಸ್ಥಿತರಿದ್ದರು.
ವೇಳಾಪಟ್ಟಿ ಇಂತಿದೆ:
ನೂತನ ಆದೇಶದಂತೆ ಬೆಳಗಿನ ಜಾವ 3.50ಕ್ಕೆ ತಾಳಗುಪ್ಪದಿಂದ ಹೊರಡುವ ರೈಲು 11.35ಕ್ಕೆ ಬೆಂಗಳೂರು ತಲುಪಲಿದೆ. ಅದೇ ರೀತಿ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಡುವ ರೈಲು 10.15ಕ್ಕೆ ತಾಳಗುಪ್ಪ ತಲುಪಲಿದೆ. ಈಗಾಗಲೇ ಇರುವಂತೆಯೇ ಇದು ವೇಗದೂತ ರೈಲಾಗಿದ್ದು, ಶಿವಮೊಗ್ಗ ನಂತರ ಆನಂದಪುರಂ ಹಾಗೂ ಸಾಗರದಲ್ಲಿ ನಿಲುಗಡೆ ಹೊಂದಲಿದೆ.

















