ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರದ್ದೆ , ಆಸಕ್ತಿ ಮತ್ತು ಭಕ್ತಿಗಳು ಸಮ್ಮಿಲನಗೊಂಡಾಗ ಮಾತ್ರ ಕಲೆಗಳು ಒಲಿಯಲು ಸಾಧ್ಯ ಎಂದು ಖ್ಯಾತ ಸಂಗೀತ ತಜ್ಞೆ ಪದ್ಮಾ ಗುರುದತ್ತ ಹೇಳಿದರು.
ಅವರು ಜಯನಗರ 4ನೇ ಬಡಾವಣೆಯ ವಿವೇಕ ಸಭಾಂಗಣದಲ್ಲಿ ಆತ್ಮಾಲಯ ನೃತ್ಯ ಸಂಸ್ಥೆಯ ವಿದುಷಿ ಪದ್ಮಜಾ ವೆಂಕಟೇಶ್ ಅವರ ಗರಡಿಯಲ್ಲಿ ಪಳಗಿದ ಶ್ರೇಯಾ ಶ್ರೀನಾಥ ಭರತನಾಟ್ಯ ರಂಗ ಪ್ರವೇಶ ‘ನೃತ್ಯ ನಿವೇದನಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಂಪ್ರದಾಯ ಬದ್ಧವಾದ ನೃತ್ಯದ ಪಾಠಾಂತರಕ್ಕೆ ನುರಿತ ಗುರು ಮತ್ತು ಅದಕ್ಕೆ ತಕ್ಕನಾದ ಶಿಷ್ಯ ಪರಂಪರೆ ದೊರಕುವುದು ಒಂದು ಯೋಗವೇ ಸರಿ. ಶಿಷ್ಯರಲ್ಲಿ ಗುರುವಿನ ಅನುಸರಣೆಗೆ ಪೂರಕವಾಗಿ ಅಭಿನಯ ಮತ್ತು ನೈಪುಣ್ಯಗಳು ಸಂಗಮವಾದಾಗ ಉತ್ತಮವಾದ ಅಭಿವ್ಯಕ್ತಿ ನೀಡಲು ಸಾಧ್ಯ . ಇದಕ್ಕೆ ಶ್ರೇಯಾ ಉತ್ತಮ ಉದಾಹರಣೆ ಎಂದರು.
ಅಂಬಾಲಂ ಫೌಂಡೇಶನ್ ನ ಹಿರಿಯ ನೃತ್ಯವಿದುಷಿ ಇಂದಿರಾ ಕಡಾಂಬಿ ಮಾತನಾಡಿ, ಕ್ಲಿಷ್ಟಕರವಾದ ನೃತ್ಯ ಸಂಯೋಜನೆ ಗಳನ್ನು ಶ್ರೇಯಾ ಅವರು ಸುಂದರವಾಗಿ ವೇದಿಕೆ ಮೇಲೆ ಪಡ ಮೂಡಿಸಿ ದ್ದಾರೆ. ಇದು ಆಕೆಯ ಬೆಳವಣಿಗೆಗೆ ಪೂರಕವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನೃತ್ಯಗುರು ಪದ್ಮಜಾ ವೆಂಕಟೇಶ, ಸುಮಾ, ಶ್ರೀನಾಥ ಸಲ್ವಾದಿ ಹಾಜರಿದ್ದರು.
ಕೃತಿಗಳ ಪ್ರಸ್ತುತಿ:
ಸೌರಾಷ್ಟ್ರಮ್ ರಾಗದ ಷಣ್ಮಾತ್ರ ಗಾಯತ್ರಿ ಸ್ವಾಗತ ಹಾಗೂ ಗಣಪತಿ ಸ್ತುತಿಯೊಂದಿಗೆ ನೃತ್ಯ ಪ್ರಸ್ತುತಿಯನ್ನು ಆರಂಭಿಸಿದ ಶ್ರೇಯಾ, ರಾಗ ಮಾಲಿಕಾ ರಾಗದ ಅಲರಿಪುವಿನಲ್ಲಿ ಸೂರ್ಯ ನಮನ, ಗಂಭೀರ ನಾಟರಾಗದ ವರ್ಣಂ (ಅಂಬಾ ಆನಂದದಾಯಿನಿ ಕೃತಿ), ಹಂಸಾನಂದಿರಾಗ) ‘ಶಂಕರ ಸಿರಿಗಿರಿ ನಾಥ ಪ್ರಭೋ’ ವಿನಲ್ಲಿ ತಮ್ಮ ಚಲನೆಗಳನ್ನು ಸ್ಪಷ್ಟವಾಗಿ ಹೊರಹೊಮ್ಮಿದರು
ಭೈರವಿ ರಾಗದ ಯಾರೋ ಇವರು ಯಾರು?, ಕೇದಾರ ಗೌಳರಾಗದ ‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ’ ದೇವರನಾಮ ಮನೋಜ್ಞವಾಗಿ ಮೂಡಿ ಬಂತು. ಶಂಕರಾಭರಣ ರಾಗದ ತಿಲ್ಲಾನ ದೊಂದಿಗೆ ನೃತ್ಯ ನಿವೇದನೆಗೆ ಅವರು ಮಂಗಳವನ್ನು ಹಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post