ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಉಡುಪಿ |
ಉಡುಪಿಯ ಉತ್ತಮ ವಿದ್ವಾಂಸರು, ವಾಗ್ಮಿಗಳು, ಲೇಖಕರು, ಸಂಶೋಧಕರು, ಚಿಂತಕರು, ಸದಾ ಅನುಸಂಧಾನಪ್ರಿಯರೂ, ಸದಾಚಾರ ನಿಷ್ಠರೂ, ಸಾಧಕರೂ ಆದ ವಿದ್ವಾಂಸರಾದ ಶ್ರೀ ಸಗ್ರಿ ರಾಘವೇಂದ್ರಾಚಾರ್ಯ ಉಪಾಧ್ಯಾಯರು ಹೃದಯಾಘಾತಕ್ಕೊಳಗಾಗಿ ಹರಿಪಾದ ಸೇರಿದ್ದಾರೆ.
ಬೆಂಗಳೂರಿನಲ್ಲಿರುವ ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥರ ಗಳ 70ನೇ ವರ್ಧಂತಿ ಅಂಗವಾಗಿ 70 ವಿದ್ವಾಂಸರಿಂದ ಆಯೋಜಿಸಲಾಗಿದ್ದ ಪ್ರವಚನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ನಿನ್ನೆ ಸಂಜೆ ಉಪನ್ಯಾಸ ನೀಡಿ ಕೆಲವೇ ನಿಮಿಷದಲ್ಲಿ ಅವರಿಗೆ ಹೃದಯಾಘಾತಕ್ಕೆ ಒಳಗಾಗಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೇ ಇಂದು ಮುಂಜಾನೆ ಹರಿಪಾದ ಸೇರಿದ್ದಾರೆ.
ಶ್ರೀಹರಿಯ ದಶಾವತಾರಗಳಲ್ಲಿ ರಾಮದೇವರ ಅವತಾರದಲ್ಲಿಯೇ ಅತಿ ಹೆಚ್ಚಿನ ಮೋಕ್ಷ ಪ್ರದಾನ ಮಾಡಿದ್ದು ಎಂಬ ವಿಚಾರವನ್ನು ತಮ್ಮ ಉಪನ್ಯಾಸದಲ್ಲಿ ಆಚಾರ್ಯರು ಉಲ್ಲೇಖಿಸಿದ್ದರು. ಆದರೆ, ಈ ವಿಚಾರ ತಿಳಿಸಿ ಕೆಲವೇ ಕ್ಷಣಗಳಲ್ಲಿ ಅವರಿಗೆ ಹೃದಯಾಘಾತವಾಗಿರುವುದು ದುಃಖಕರ ಸಂಗತಿಯಾಗಿದೆ.
ಸಾರಸ್ವತ ಲೋಕದ ಧೀಮಂತ ಸಗ್ರಿ ಉಪಾಧ್ಯಾಯರು
1953ಯಲ್ಲಿ ಶ್ರೀ ನರಸಿಂಹ ಉಪಾಧ್ಯಾಯ ಮತ್ತು ಸೀತಾಲಕ್ಷ್ಮಿ ದಂಪತಿಗಳಲ್ಲಿ ಜನಿಸಿದ ಉಪಾಧ್ಯಾಯರು ಮಧ್ವ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದುದು.
ಪ್ರಾತಃ ಸ್ಮರಣೀಯ ಶ್ರೀ ವಿದ್ಯಾ ಮಾನ್ಯತೀರ್ಥರು, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಅವರಲ್ಲದೆ ಶ್ರೀ ಕಾಪು ಹಯಗ್ರೀವಾಚಾರ್ಯರು, ಮೊದಲಾದ ಪಂಡಿತರಲ್ಲಿ ಅಧ್ಯಯನ ಮಾಡಿ, ವೇದಾಂತ ಶಾಸ್ತçದಲ್ಲಿ, ಸಂಸ್ಕೃತದಲ್ಲಿ ಎಂಎ ಪಡೆದು SMSP ಸಂಸ್ಕೃತ ಕಾಲೇಜು, ಉಡುಪಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
Also read: ನೀಟ್ ಮರು ಪರೀಕ್ಷೆ | ಎನ್ಎಸ್ಯುಐ ಹೋರಾಟಕ್ಕೆ ಸಂದ ಜಯ: ನಗರಾಧ್ಯಕ್ಷ ಚರಣ್
ತಮ್ಮದೇ ಆದ ಪರವಿದ್ಯಾ ಪ್ರಕಾಶನ ಸಂಸ್ಥೆ ಪ್ರಾರಂಭಿಸಿ ನೂರಾರು ಗ್ರಂಥಗಳನ್ನು ರಚಿಸಿರುವ ಅವರು ಉಡುಪಿಯ ಹಲವಾರು ಮಠಗಳಿಗೆ ಆಸ್ಥಾನ ವಿದ್ವಾಂಸರಾಗಿ ಗೌರವಿತರಾಗಿದ್ದಾರೆ.
ತತ್ವವಾದ ಮತ್ತು ಸರ್ವಮೂಲ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಸಾಧಕರಿಗೊಂದು ಕಿವಿಮಾತು, ಶ್ರೀ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥರ ಉಪನ್ಯಾಸ ಸಂಗ್ರಹವಾದ ವಿಷ್ಣು ಸಹಸ್ರನಾಮ ಟಿಪ್ಪಣಿ, ಮುಖ್ಯಪ್ರಾಣ ಚಿಂತನೆ, ಸುವರ್ಣ ಸಂದೇಶ, ವೈಷ್ಣವ ದೀಕ್ಷೆ, ಪಾತಿವ್ರತ್ಯ ಪ್ರದೀಪಿಕಾ, ಶ್ರೀನಿವಾಸೇಸ್ತು ಮೇ ಮನಃ ಸೇರಿದಂತೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಎಲ್ಲಾ ಸ್ವಾಮಿಗಳ ಪ್ರವಚನವನ್ನು ಆಲಿಸಿ ಅದನ್ನು ಗ್ರಂಥರೂಪದಲ್ಲಿ ತಂದಿದ್ದಾರೆ. ರಾಮಾಯಣ, ಭಾಗವತ, ತಾತ್ಪರ್ಯ ನಿರ್ಣಯ, ಸರ್ವಮೂಲ ಪ್ರಮೇಯಗಳ ಬಗ್ಗೆ ನೂರಾರು ಪ್ರವಚನಗಳನ್ನು ನೀಡಿದ್ದಾರೆ. ವಿಷ್ಣು ಸಹಸ್ರನಾಮದಲ್ಲಿ ಅತ್ಯಂತ ಹೆಚ್ಚಿನ ಸಾಧನೆ ಮಾಡಿದ್ದಾರೆ.
ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯರ ಸೇವೆ ಮಾಧ್ವ ವಾಗ್ಮಯ ಪ್ರಪಂಚಕ್ಕೆ ಅತ್ಯದ್ಭುತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















