ಕಲ್ಪ ಮೀಡಿಯಾ ಹೌಸ್ | ಬಾರಕೂರು |
ಪ್ರಾತಃಸ್ಮರಣೀಯರಾದ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರ ಸತ್ಯತೀರ್ಥ ಪೀಠಾರೋಹಣದ ಶತಮಾನೋತ್ಸವದ ಅಂಗವಾಗಿ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 47ನೇ ಚಾತುರ್ಮಾಸ್ಯ ಅವಧಿಯಲ್ಲಿ ಸ್ವಾಭಾವಿಕವಾಗಿ ಕೃಷ್ಣಮೃಗಗಳು (ಜಿಂಕೆ) ಇಂದಿಗೂ ಓಡಾಡತಕ್ಕಂತಹ ಈ ಪವಿತ್ರ ಭೂಮಿಯಾದ ಬಾರಕೂರಿನ (Barkur) ಭಂಡಾರಕೇರಿಯಲ್ಲಿ ಅನೇಕ ಕಾರ್ಯಕ್ರಮಗಳ ನಡೆಯಲಿವೆ.
ಸನಕಾದಿ ಪರಂಪರೆಯಲ್ಲಿ ವಿರಾಜಿಸಿದ ಶ್ರೀ ಅಚ್ಯುತಪ್ರೇಕ್ಷಾಚಾರ್ಯರು ಸುಮಾರು ಎಂಟು ಶತಮಾನಗಳ ಹಿಂದಿನ ಮಹಾನ್ ಯತಿಗಳು. ಜಗದ್ಗುರು ಶ್ರೀಮಧ್ವಾಚಾರ್ಯರಿಗೆ ಸಂನ್ಯಾಸದೀಕ್ಷೆ ನೀಡಿದ ಮಹನೀಯರಾಗಿ ಅವರು ಪ್ರಸಿದ್ಧರು. ಇತ್ತೀಚಿನ ಸಂಶೋಧನೆಗಳ ಪ್ರಕಾರ, ಅವರು ಭಂಡಾರಕೇರಿಯಲ್ಲಿ ದೀರ್ಘಕಾಲ ವಾಸವಿದ್ದು ರುದ್ರದೇವರನ್ನು ಪೂಜಿಸಿದ್ದರೆಂಬ ಉಲ್ಲೇಖಗಳು ದೊರೆತಿವೆ.
ಈ ಪರಂಪರೆಯಲ್ಲಿ ಶ್ರೀಮಧ್ವಾಚಾರ್ಯರ ಪ್ರಿಯಶಿಷ್ಯರಾದ ಶ್ರೀಸತ್ಯತೀರ್ಥರು ಪ್ರಮುಖ ಸ್ಥಾನವನ್ನು ಅಲಂಕರಿಸಿದರು. ಅವರು ಮಧ್ವಭಾಷ್ಯಗಳನ್ನು ಲಿಪಿಬದ್ಧಗೊಳಿಸಿದ ಮಹತ್ವದ ಕಾರ್ಯ ಮಾಡಿದ್ದಾರೆ. ಮುಂದಾಗಿ ಶ್ರೀರಘುವರತೀರ್ಥರು ಹಾಗೂ ಅನಂತರ ಶ್ರೀಸತ್ಯವ್ರತತೀರ್ಥರು, ಶ್ರೀವಿಶ್ವಾಧೀಶತೀರ್ಥರು, ಶ್ರೀವಿದ್ಯಾಧೀಶತೀರ್ಥರು ಮತ್ತು ಶ್ರೀವಿಶ್ವಮೂರ್ತಿತೀರ್ಥರು ಈ ಪರಂಪರೆಯನ್ನು ಮುಂದುವರಿಸಿದರು.
ಪರಂಪರೆ ನಂತರ ಎರಡು ಭಾಗಗಳಾಗಿ ವಿಭಜನೆಯಾಗಿ, ಶ್ರೀಗದಾಧರತೀರ್ಥರು ಭಂಡಾರಕೇರಿ ಮಠದ ಮೂಲಪುರುಷರಾಗಿದ್ದು, ಶ್ರೀವಿಶ್ವಪತಿತೀರ್ಥರು ಭೀಮನಕಟ್ಟೆ ಮಠದ ಮೂಲಸ್ಥಂಭರಾದರು.
ಮುಂದಿನ ಅವಧಿಯಲ್ಲಿ ಶ್ರೀಸುರೋತ್ತಮತೀರ್ಥರು, ಶ್ರೀವಾದಿರಾಜ ಗುರುಸಾರ್ವಭೌಮರ ಅನುಜರಾಗಿ ಈ ಪೀಠವನ್ನು ಅಲಂಕರಿಸಿ “ಯುಕ್ತಿಮಲ್ಲಿಕಾ” ಗ್ರಂಥಕ್ಕೆ ಟೀಕೆ ರಚಿಸಿದ್ದಾರೆ. ಅವರ ಮೂಲ ವೃಂದಾವನ ಬಾರಕೂರಿನಲ್ಲಿದೆ.
ಇದೇ ಪರಂಪರೆಯಲ್ಲಿ ಶ್ರೀರಾಜವಂದ್ಯತೀರ್ಥರು ತಪಸ್ಸಿನ ಪ್ರಭಾವದಿಂದ ಮಠಕ್ಕೆ ಭೂದಾನಗಳನ್ನು ತರಲು ಕಾರಣರಾದರು. ಅವರ ವೃಂದಾವನ ಕಾಗಿನೆಲೆಯ ಆದಿಕೇಶವ ದೇವಸ್ಥಾನದಲ್ಲಿದ್ದು, ಅಚ್ಚರಿಯ ಘಟನೆಗಳೊಂದಿಗೆ ಪ್ರಸಿದ್ಧವಾಗಿದೆ.
Barkur | ನಿರಂಜನ ಅಡಿಗರವರ ಸಂಶೋಧನೆಯ ಪ್ರಕಾರ…
ಇತ್ತೀಚಿನ ವರ್ಷಗಳಲ್ಲಿ, ಬಾರಕೂರಿನ ಬಗೆಗೆ ವಿಶೇಷವಾಗಿ ಸಂಶೋಧನೆ ನಡೆಸಿದ ಶ್ರೀಯುತ ನಿರಂಜನ ಅಡಿಗರವರ ಸಂಶೋಧನೆಯ ಪ್ರಕಾರ, ಶ್ರೀಅಚ್ಯುತಪ್ರೇಕ್ಷಾಚಾರ್ಯರು ತಾವು ಶ್ರೀಭಂಡಾರಕೇರಿಯಲ್ಲಿ ಅನೇಕ ವರ್ಷಗಳ ಕಾಲ, ರುದ್ರದೇವರನ್ನು ಪೂಜಿಸುತ್ತಿದ್ದು, “ಅಚ್ಯುತಪ್ರೇಕ್ಷೈರರ್ಚಿತಂ ಲಿಂಗಂ ಅನ್ಯೈರ್ಮುನಿಭಿಶ್ಚಾರ್ಚಿತಂ” ಎಂಬಂತಹ ಉಲ್ಲೇಖಗಳು ಕಂಡುಬಂದಿದ್ದು, ಅಚ್ಯುತಪ್ರೇಕ್ಷಾಚಾರ್ಯರು ಮಾತ್ರವಲ್ಲದೇ ಅಷ್ಟಮಠಾಧೀಶರಿಂದಲೂ ಪೂಜೆಗೊಂಡಂತಹ ಶಿವಲಿಂಗ ಭಂಡಾರಕೇರಿಯಲ್ಲಿತ್ತು ಎಂಬಂತಹ ಮಾಹಿತಿಯನ್ನು ಉಡುಪಿ ಮೂಲದ ಹಿರಿಯರ ಮೂಲಕ ತಿಳಿಯಬಹುದಾಗಿದೆ. ಅಂತೆಯೇ ಅಚ್ಯುತಪ್ರೇಕ್ಷಾಚಾರ್ಯರು ಅಂತಿಮಕಾಲದಲ್ಲಿ ಭಂಡಾರಕೇರಿಯಲ್ಲಿಯೇ ವಾಸವಿದ್ದ ಮಾಹಿತಿಯನ್ನು ಕೂಡ ತಿಳಿಯಬಹುದಾಗಿದೆ.
ಈ ಪರಂಪರೆಯಲ್ಲಿ ಶ್ರೀ ಮಧ್ವಾಚಾರ್ಯರ ಪ್ರಿಯಶಿಷ್ಯರಾದ ಶ್ರೀಸತ್ಯತೀರ್ಥರು ವಿರಾಜಿಸಿದರು. ಶ್ರೀಮಧ್ವಾಚಾರ್ಯರಿಂದ ಮೂರು ಬಾರಿ ಐತರೇಯ ಶಾಖೆಯ ವ್ಯಾಖ್ಯಾನವನ್ನು ಶ್ರವಣ ಮಾಡಿದವರು. ಶ್ರೀಮಧ್ವಕರಾರ್ಚಿತ ದೇವತಾ ಪ್ರತಿಮೆಯ ಧಾರಕರು. ಶ್ರೀಮಧ್ವಾಚಾರ್ಯರ ಬ್ರಹ್ಮಸೂತ್ರಭಾಷ್ಯವನ್ನು ಲಿಪಿಬದ್ಧಗೊಳಿಸಿದವರು.
ಶ್ರೀಮಧ್ವಾಚಾರ್ಯರ ಪೂರ್ವರೂಪವಾದ ಭೀಮಸೇನನ ಜೊತೆಗೆ ಸೇರಿ ಕುರುಕ್ಷೇತ್ರದಲ್ಲಿ ತಮ್ಮ ಹಿಂದಿನ ಜನ್ಮದಲ್ಲಿ ಯುದ್ಧವನ್ನು ಮಾಡಿದವರು. ಇವರ ಆಯುಧವನ್ನು ಶ್ರೀಮಧ್ವಾಚಾರ್ಯರು ತೋರಿಸಿದರೆಂದು ಭಾವಪ್ರಕಾಶಿಕೆಯಲ್ಲಿ ನಾರಾಯಣಪಂಡಿತಾಚಾರ್ಯರು ಉಲ್ಲೇಖಿಸಿದ್ದಾರೆ. ಪಾಠಾಂತರವನ್ನು ಆಶ್ರಿಯಿಸಿ ಈ ರೀತಿಯಾಗಿ ಹೇಳಬಹುದು.
ಈ ಸತ್ಯತೀರ್ಥರ ಪೀಠದಲ್ಲಿ ಶ್ರೀರಘುವರತೀರ್ಥರು ವಿರಾಜಿಸಿದರು. ಇವರಿಗೆ ವಿಜಯನಗರದ ರಾಜರು ಭೂದಾನ ಮಾಡಿದ್ದು ಶಿಲಾಶಾಸನದಲ್ಲಿ ಉಲ್ಲೇಖವಿದೆ.
ಸನಕಾದಿ ಪರಂಪರೆಯಲ್ಲಿ ಶ್ರೀಸತ್ಯತೀರ್ಥರು, ಶ್ರೀಸತ್ಯವ್ರತತೀರ್ಥರು, ಶ್ರೀವಿಶ್ವಾಧೀಶತೀರ್ಥರು, ಶ್ರೀವಿದ್ಯಾಧೀಶತೀರ್ಥರು, ಶ್ರೀವಿಶ್ವಮೂರ್ತಿತೀರ್ಥರು ವಿರಾಜಿಸಿದರು. ಅನಂತರ ಈ ಪರಂಪರೆಯಲ್ಲಿ ಎರಡು ವಿಭಾಗಗಳಾದವು.
Also Read>> Shivamogga | ‘ಕಿಶೋರ ದೀಪಿಕಾ’ ಬಿಡುಗಡೆ: ಪೋಷಕರಿಗೆ ಮಹತ್ವದ ಸಂದೇಶ
ಶ್ರೀ ಗದಾಧರತೀರ್ಥರು ಒಂದು ಭಾಗದ ಶ್ರೀಭಂಡಾರಕೇರಿ ಮಠದ ಪರಂಪರೆಗೆ ಮೂಲಪುರುಷರು. ಶ್ರೀವಿಶ್ವಪತಿತೀರ್ಥರು ಇನ್ನೊಂದು ಭಾಗದ ಶ್ರೀ ಭೀಮನಕಟ್ಟೆ ಮಠಕ್ಕೆ ಮೂಲಪುರುಷರು.
ಈ ಸತ್ಯತೀರ್ಥರ ಪರಂಪರೆಯಾದ ಶ್ರೀಭಂಡಾರಕೇರಿ ಮಠದ ಪೀಠದಲ್ಲಿ ಮುಂದೆ ಶ್ರೀವಾದಿರಾಜ ಗುರುಸಾರ್ವಭೌಮರ ಅನುಜರಾದ ಶ್ರೀಸುರೋತ್ತಮತೀರ್ಥರು ವಿರಾಜಿಸಿದರು. ಅವರು ಶ್ರೀವಾದಿರಾಜರ ಮೇರುಕೃತಿ ಯುಕ್ತಿಮಲ್ಲಿಕೆಗೆ ಟೀಕೆ ಬರೆದಿದ್ದಾರೆ. ಅವರ ಮೂಲವೃಂದಾವನ ಬಾರಕೂರಿನ ಮೂಲಮಠದಲ್ಲಿ ಇದೆ.
ಇದೇ ಶ್ರೀ ಭಂಡಾರಕೇರಿ ಮಠದ ಪರಂಪರೆಯಲ್ಲಿ ಬಂದ ಯತಿವರೇಣ್ಯರು ಶ್ರೀರಾಜವಂದ್ಯತೀರ್ಥರು. ಇವರ ತಪಃಶ್ಶಕ್ತಿಯ ಪ್ರಭಾವದಿಂದ ಶ್ರೀಮಠಕ್ಕೆ ಅನೇಕ ಭೂಮಿಯು ದಾನವಾಗಿ ಬಂದಿದ್ದ ಮಾಹಿತಿಯನ್ನು ಅಲ್ಲಿನ ಹಿರಿಯರು ತಿಳಿಸಿದ್ದಾರೆ. ಇವರ ವೃಂದಾವನವು ಕಾಗಿನೆಲೆಯ ಆದಿಕೇಶವನಿಗೆ ಅಭಿಮುಖವಾಗಿ ಧ್ವಜಸ್ತಂಭದ ಎದುರುಗಡೆ ಇದ್ದು, ಆ ಬೃಂದಾವನವನ್ನು ಸ್ಥಳಾಂತರಿಸಲು ಪ್ರಯತ್ನಿಸಿದಾಗ, ಸೂಚನೆಯಾಗಿ ಅನಂತರ ಸ್ಥಳಾಂತರಿಸದೇ, ಈಗಲೂ ಇವರ ವೃಂದಾವನವು ಕಾಗಿನೆಲೆಯ ಆದಿಕೇಶವನಿಗೆ ಅಭಿಮುಖವಾಗಿ ದೇವಸ್ಥಾನದ ಆವರಣದಲ್ಲಿಯೇ ಇದೆ. ಹಾಗೆಯೇ ಇವರು ವೃಂದಾವನಸ್ಥರಾದ ಮೇಲೆ, ಕೆಲವು ದಿನಗಳ ನಂತರ, ಇವರ ದೇಹವನ್ನು ಪುನಃ ತೆಗೆದಂತಹ ಸಂದರ್ಭದಲ್ಲಿ, ಇವರ ದೇಹದಲ್ಲಿದ್ದ ತುಳಸೀಮಾಲೆಯು ಹಚ್ಚ-ಹಸಿರಾಗಿತ್ತು ಎಂಬುದನ್ನು ಪ್ರಾತಃಸ್ಮರಣೀಯರಾದ ಶ್ರೀವಿದ್ಯಾಮಾನ್ಯತೀರ್ಥರು ಅನೇಕ ಬಾರಿ ಸ್ಮರಿಸುತ್ತಿದ್ದರು.
ಶ್ರೀ ಸತ್ಯತೀರ್ಥರಪೀಠವನ್ನೇ ಶ್ರೀವಿದ್ಯಾಮಾನ್ಯತೀರ್ಥರು 1925ನೇ ಇಸವಿಯಲ್ಲಿ ಅದಮಾರು ಮಠಾಧೀಶರಾಗಿದ್ದ ವಿಭೂತಿಪುರುಷ ಶ್ರೀವಿಬುಧಪ್ರಿಯತೀರ್ಥರಿಂದ ಅಲಂಕರಿಸಿದರು. ಶ್ರೀವಿದ್ಯಾಮಾನ್ಯತೀರ್ಥರ ಶಿಷ್ಯತ್ವವನ್ನು ವಹಿಸಿ 1944 ರಿಂದ 1951ರವರೆಗೆ ಪ್ರಖ್ಯಾತ ಯತಿವರೇಣ್ಯರಾದ ಶ್ರೀವಿಶ್ವೇಶತೀರ್ಥಶ್ರೀಪಾದರು ಬಾರಕೂರಿನ ಮೂಲ ಶ್ರೀಭಂಡಾರಕೇರಿ ಮಠದಲ್ಲಿ ವಿದ್ಯಾಭ್ಯಾಸ ಮಾಡಿದರು.
ಪಂಡಿತವರೇಣ್ಯರಾದ ಶ್ರೀ ವಿಶ್ವೇಶತೀರ್ಥರಿಂದ ಪ್ರಖ್ಯಾತವಾದ ಪೂರ್ಣಪ್ರಜ್ಞ ವಿದ್ಯಾಪೀಠವು ತಾನು ಸ್ಥಾಪಿತವಾಗಿ ಸಾವಿರಾರು ಮಂದಿಗೆ ಅಧ್ಯಾತ್ಮ ವಿದ್ಯಾಮೃತವನ್ನು ಇಂದಿಗೂ ಉಣಿಸುತ್ತಿದೆ. ನಮ್ಮ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರು 1943ರಲ್ಲಿ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ಮೂಲಕ ದ್ವೈತಶಾಸ್ತ್ರಗಳನ್ನು ಓದುವ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ ಮಾಡಿ, ದ್ವೈತಶಾಸ್ತ್ರದ ಪ್ರಸಾರವಾಗಲು ಪ್ರಮುಖ ಪಾತ್ರವಹಿಸಿದವರು.
ಸರಿಸುಮಾರು 196162 ನೇ ಇಸವಿಯಲ್ಲಿ ಶ್ರೀವಿದ್ಯಾಮಾನ್ಯತೀರ್ಥರು ಜಗತ್ತಿಗೆ ಇದ್ದ ಅಷ್ಟಗ್ರಹಯೋಗದ ಅನಿಷ್ಟ ನಿವಾರಣೆಗಾಗಿ ದೆಹಲಿಯಲ್ಲಿ ವಿಶ್ವಕಲ್ಯಾಣಯಾಗವನ್ನು ನಡೆಸಿ, ಸುಮಾರು ಸಾವಿರ ಸಂಖ್ಯೆಯಲ್ಲಿ ಪಂಡಿತರನ್ನು ಭಾರತದ ಅನೇಕ ಭಾಗಗಳಿಂದ ಕರೆಸಿ, ವಿದ್ವಾಂಸರಿಂದ ಹೋಮ-ಪ್ರವಚನ, ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮ, ಹಾಗೆಯೇ ಪ್ರತಿನಿತ್ಯ ಐದಾರು ಸಾವಿರ ಜನರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಿದವರು.
ಈ ಕಾರ್ಯಕ್ರಮದಲ್ಲಿ ಅವತ್ತಿನ ಭಾರತದ ರಾಷ್ಟ್ರಪತಿಗಳಾಗಿದ್ದ ಶ್ರೀರಾಜೇಂದ್ರಪ್ರಸಾದ್ ಅವರೇ ಮೊದಲಾದ ಅನೇಕ ಗಣ್ಯವ್ಯಕ್ತಿಗಳು ಭೇಟಿ ನೀಡಿದ್ದರು ಎಂಬುದು ವಿಶೇಷ.
ಅಂತಹ ಪ್ರಾತಃಸ್ಮರಣೀಯರಾದ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರ ಸತ್ಯತೀರ್ಥ ಪೀಠಾರೋಹಣದ ಶತಮಾನೋತ್ಸವದ ಅಂಗವಾಗಿ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 47ನೇ ಚಾತುರ್ಮಾಸ್ಯದ ಅವಧಿಯಲ್ಲಿ ಸ್ವಾಭಾವಿಕವಾಗಿ ಕೃಷ್ಣಮೃಗಗಳು (ಜಿಂಕೆ) ಇಂದಿಗೂ ಓಡಾಡತಕ್ಕಂತಹ ಈ ಪವಿತ್ರ ಭೂಮಿಯಾದ ಭಂಡಾರಕೇರಿಯಲ್ಲಿ ಅನೇಕ ಮುಖದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಚಾತುರ್ಮಾಸ್ಯ ಮಹೋತ್ಸವ – 2026
📅 ಅವಧಿ: ಜುಲೈ 29ರಿಂದ ಸೆಪ್ಟೆಂಬರ್ 26, 2026
📍 ಸ್ಥಳ: ಶ್ರೀ ಭಂಡಾರಕೇರಿ ಮಠ, ಬಾರಕೂರು
ಪ್ರತಿದಿನದ ಕಾರ್ಯಕ್ರಮಗಳು
- 🕗 ಬೆಳಗ್ಗೆ 8:30 – 9:00
ಅನುಗ್ರಹ ಸಂದೇಶ – ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಂದ - 🕘 9:00 – 12:30 & 3:00ರಿಂದ ಮುಂದುವರಿಕೆ
100 ವಿದ್ವಾಂಸರಿಂದ ತಂಡ-ತಂಡವಾಗಿ ನಾಲ್ಕು ವೇದಗಳ ಪಾರಾಯಣ, ಮಧ್ವಭಾರತ, ಭಾಗವತ ಪಠಣ, ರಾಮ-ಕೃಷ್ಣ ಮಂತ್ರ ಜಪ - 🕓 ಅಪರಾಹ್ನ 4:00 – 5:00
ವಿವಿಧ ಭಜನಾಮಂಡಲಿಗಳಿಂದ ಭಜನಾ ಕಾರ್ಯಕ್ರಮಗಳು - 🕔 5:00 – 6:30
ವಿದ್ವಾಂಸರಿಂದ ಭಾರತ-ರಾಮಾಯಣಾದಿಗಳ ಉಪಾಖ್ಯಾನಗಳ ಬಗೆಗೆ ಪ್ರವಚನ ಉಪನ್ಯಾಸಗಳು & ಅನುಗ್ರಹ ಸಂದೇಶ - 🕡 6:30 – 8:00
ಸಾಂಸ್ಕೃತಿಕ ಕಾರ್ಯಕ್ರಮಗಳು, ಹರಿಕಥಾ ಕಾಲಕ್ಷೇಪ, ಯಕ್ಷಗಾನ, ತಾಳಮದ್ದಳೆ, ದಾಸವಾಣಿ, ಶಾಸ್ತ್ರೀಯ ಸಂಗೀತ, ಗಮಕ ವಾಚನ-ವ್ಯಾಖ್ಯಾನ, ಭರತನಾಟ್ಯ, ವೀಣಾವಾದನ, ವಿದ್ಯೇಶವಿಠ್ಠಲಾಂಕಿತ ಕೃತಿಗಳ ಸಾಮೂಹಿಕ ಗಾಯನ
✨ ವಿಶೇಷ ಕಾರ್ಯಕ್ರಮಗಳು
- 📖 ಸೆಪ್ಟೆಂಬರ್ 12 – 26
ಪ್ರೋಷ್ಠಪದಿ ಭಾಗವತ ಪ್ರವಚನ (15 ವಿದ್ವಾಂಸರು) - 🎉 ಸೆಪ್ಟೆಂಬರ್ 5
ಅಪರಾಹ್ನ 3-00 ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಿಂದ ಭರಿತವಾದ ವಿಟ್ಲಪಿಂಡಿ ಶ್ರೀಕೃಷ್ಣಜಯಂತಿ ಮಹೋತ್ಸವ - 🏅 100 ವಿದ್ವಾಂಸರ ಸನ್ಮಾನ
ಶ್ರೀಶ್ರೀವಿದ್ಯೇಶತೀರ್ಥ ಶ್ರೀಪಾದರಿಂದ ಮಾಧ್ವರಾದ್ಧಾಂತ ವರ್ಧಕ ಸಭೆಯಿಂದ ಗೌರವ
📜 ಪಾರಾಯಣ ಯಜ್ಞದ ವಿವರಗಳು
- ಜುಲೈ 30 – ಆಗಸ್ಟ್ 7: 10 ವೇದ ವಿದ್ವಾಂಸರ ತಂಡದಿಂದ ಅಥರ್ವಣವೇದದ ಶೌನಕ ಶಾಖೆಯ ಪಾರಾಯಣಯಜ್ಞ, ರಾಮಮಂತ್ರ ಹಾಗೂ ಕೃಷ್ಣಮಂತ್ರಗಳ ಜಪಯಜ್ಞ
- ಆಗಸ್ಟ್ 8 – 16: 10 ವೇದ ವಿದ್ವಾಂಸರ ತಂಡದಿಂದ ಸಾಮವೇದದ ಜೈಮಿನೀಯ, ಕೌಥುಮ, ರಾಣಾಯನೀಯ ಶಾಖೆಗಳ ಪಾರಾಯಣಯಜ್ಞ – ರಾಮಮಂತ್ರ ಹಾಗೂ ಕೃಷ್ಣಮಂತ್ರಗಳ ಜಪಯಜ್ಞ
- ಆಗಸ್ಟ್ 15 – 23: 10 ವೇದ ವಿದ್ವಾಂಸರ ತಂಡದಿಂದ ಕೃಷ್ಣಯಜುರ್ವೇದದ ತೈತ್ತಿರೀಯ ಶಾಖೆಯ ಪಾರಾಯಣಯಜ್ಞ – ರಾಮಮಂತ್ರ ಹಾಗೂ ಕೃಷ್ಣಮಂತ್ರಗಳ ಜಪಯಜ್ಞ
- ಆಗಸ್ಟ್ 26 – ಸೆಪ್ಟೆಂಬರ್ 3: 16 ವೇದ ವಿದ್ವಾಂಸರ ತಂಡದಿಂದ ಋಗ್ವೇದದ ಶಾಕಲ ಶಾಖೆಯ ಪಾರಾಯಣಯಜ್ಞ – ರಾಮಮಂತ್ರ ಹಾಗೂ ಕೃಷ್ಣಮಂತ್ರಗಳ ಜಪಯಜ್ಞ
- ಸೆಪ್ಟೆಂಬರ್ 2 – 10: 18 ವೇದ ವಿದ್ವಾಂಸರ “ಎ” ತಂಡದಿಂದ ಪ್ರತಿಯೊಬ್ಬ ವಿದ್ವಾಂಸರಿಂದ 3 ಬಾರಿ ಮಧ್ವಮಹಾಭಾರತದ ಪಾರಾಯಣಯಜ್ಞ – ರಾಮಮಂತ್ರ ಹಾಗೂ ಕೃಷ್ಣಮಂತ್ರಗಳ ಜಪಯಜ್ಞ
- ಸೆಪ್ಟೆಂಬರ್ 9 – 17: 18 ವಿದ್ವಾಂಸರ “ಬಿ” ತಂಡದಿಂದ – ಪ್ರತಿಯೊಬ್ಬ ವಿದ್ವಾಂಸರಿಂದ 3 ಬಾರಿ ಮಧ್ವಮಹಾಭಾರತದ ಪಾರಾಯಣಯಜ್ಞ – ರಾಮಮಂತ್ರ ಹಾಗೂ ಕೃಷ್ಣಮಂತ್ರಗಳ ಜಪಯಜ್ಞ
- ಸೆಪ್ಟೆಂಬರ್ 16 – 24: 16 ವಿದ್ವಾಂಸರ ತಂಡದಿಂದ – ಪ್ರತಿಯೊಬ್ಬ ವಿದ್ವಾಂಸರಿಂದ ಸಮಗ್ರ ಭಾಗವತದ ಪಾರಾಯಣಯಜ್ಞ – ರಾಮಮಂತ್ರ ಹಾಗೂ ಕೃಷ್ಣಮಂತ್ರಗಳ ಜಪಯಜ್ಞ
📞 ಹೆಚ್ಚಿನ ಸಂಪರ್ಕಕ್ಕಾಗಿ:
ಶ್ರೀಶಕೇಶವ : 8105318801, ಶ್ರೀಸಮೀರ : 9632542330, ಭಂಡಾರಕೇರಿ ಮಠ, 9901299259, ರಮೇಶ : 9972836205 ಗೋಪಾಲಕೃಷ್ಣ : 9071889899
ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಈ ಚಾತುರ್ಮಾಸ್ಯ ಮಹೋತ್ಸವ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾಗಿ ಭಕ್ತರಿಗೆ ಅಪೂರ್ವ ಅವಕಾಶವನ್ನು ಒದಗಿಸುತ್ತದೆ. ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀಹರಿ-ಗುರುಗಳ ಅನುಗ್ರಹ ಪಡೆಯುವಂತೆ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಪೀಠಾರೋಹಣ ಶತಮಾನೋತ್ಸವ ಸಮಿತಿ ಹಾಗು ಶ್ರೀವಿದ್ಯೇಶತೀರ್ಥರ ಚಾತುರ್ಮಾಸ್ಯ ಸಮಿತಿ, — ಬಾರಕೂರು, ಶ್ರೀ ಭಂಡಾರಕೇರಿ ಮಠದ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








