ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಮುಂದಿನ ವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತಾಗಿ ಬೆಳಗಾವಿ ವಿಟಿಯು ಗೆಸ್ಟ್ ಹೌಸ್’ನಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರನ್ನು ಭೇಟಿಯಾದ ಈಶ್ವರಪ್ಪ Eshwarappa ಹಾಗೂ ಜಾರಕಿಹೊಳಿ Jarkiholi ಅವರುಗಳು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು ಮುಂದಿನ ವಾರ ಇಬ್ಬರೂ ಮುಖಂಡರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈಶ್ವರಪ್ಪ ಅವರು ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದರು. ಆದರೆ, ಈ ಪ್ರಕರಣದಲ್ಲಿ ಅವರಿಗೆ ಕ್ಲೀನ್ ಚಿಟ್ ದೊರೆದು ತಿಂಗಳುಗಳೇ ಕಳೆದಿವೆ. ಆರೋಪ ಮುಕ್ತರಾದ ನಂತರವೂ ಸಹ ಸಂಪುಟಕ್ಕೆ ಸೇರಿಸಿಕೊಳ್ಳದೇ ವಿಳಂಬ ಧೋರಣೆ ತಾಳುತ್ತಿರುವ ಪಕ್ಷ ಹಾಗೂ ಸರ್ಕಾರದ ವಿರುದ್ಧ ಈಶ್ವರಪ್ಪನವರು ಕೆಲವು ಬಾರಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.
ಅಲ್ಲದೇ, ಸೋಮವಾರದಿಂದ ಬೆಳಗಾವಿಯಲ್ಲಿ ಆರಂಭವಾದ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೂ ಸಹ ಹಾಜರಾಗದೇ, ವಿನಾಯ್ತಿ ನೀಡುವಂತೆ ಸ್ಪೀಕರ್’ಗೆ ಪತ್ರ ಬರೆದಿದ್ದರು. ಬಾಗಲಕೋಟೆಯಲ್ಲಿ ಮಾತನಾಡಿದ್ದ ಅವರು, ಸಂಪುಟಕ್ಕೆ ಯಾಕೆ ಸೇರಿಸಿಕೊಂಡಿಲ್ಲ ಎಂಬುದಕ್ಕೆ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು ಎಂದು ಅಸಮಾಧಾನ ಹೊರ ಹಾಕಿದ್ದರು.
ಆದರೆ, ಆನಂತರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ನನ್ನ ಮೇಲೆ ನಿರಾಧಾರವಾದ ಆರೋಪ ಬಂದಿತ್ತು. ಆಗ ಕೇಂದ್ರದ ನಾಯಕರಿಗೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ವಿಚಾರ ತಿಳಿಸಿದೆ. ಆಗ ಎಲ್ಲರೂ ಬೇಡ ಅಂದಿದ್ದರು. ಹಿಂದೆ ನಾನು ಪರಿಷತ್ ಪ್ರತಿಪಕ್ಷದ ನಾಯಕನಾಗಿದ್ದಾಗ ಕೆಜೆ ಜಾರ್ಜ್ ಮೇಲೆ ಆರೋಪ ಬಂದಿತ್ತು. ಆಗ ಅವರಿಗೂ ರಾಜೀನಾಮೆ ನೀಡಲು ಮನವಿ ಮಾಡಿದ್ದೆ. ಅವರು ಅದನ್ನು ಗೌರವಿಸಿ ವಾಪಸ್ ಬಂದರು. ಅದೇ ರೀತಿ ನಾನೂ ಕೂಡ ರಾಜೀನಾಮೆ ಕೊಟ್ಟೆ. ನನ್ನ ಕೇಸ್ ತನಿಖೆ ಆಯ್ತು, ಈ ಕೇಸ್ ನಿರಾಧಾರ ಅಂತ ತೀರ್ಪು ಬಂತು, ಕ್ಲೀನ್ ಚಿಟ್ ದೊರೆತು 4 ತಿಂಗಳಾಗಿದೆ. ನಾನು ಯಾವುದೇ ರಾಷ್ಟ್ರೀಯ ನಾಯಕರನ್ನು ಸಂಪರ್ಕ ಮಾಡಿಲ್ಲ. ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಬೆಳಗಾವಿಗೆ ಹೋಗಿ ಸೌಮ್ಯ ಸ್ವಭಾವದ ಪ್ರತಿಭಟನೆ ಮಾಡೋದಾಗಿ ತಿಳಿಸಿದ್ದೇನೆ ಎಂದಿದ್ದರು.
ಸಿಎಂ ನೇರವಾಗಿ ಹೇಳಿಲ್ಲ. ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯನ್ನು ನೋಡಿದ್ದೇನೆ. ಸದನದಲ್ಲಿ ಪಾಲ್ಗೊಳ್ಳುವ ವಿಚಾರ ರಾತ್ರಿ ನಿರ್ಧರಿಸುತ್ತೇನೆ. ಸಿಎಂ ಅವರನ್ನು ನಂಬುತ್ತೇನೆ. ಅವರ ಬಳಿ ಮಾತಾಡಿ ತೀರ್ಮಾನ ಮಾಡುತ್ತೇನೆ. ನನಗೆ ಸಚಿವ ಆಗಬೇಕು ಎಂದು ಆಸೆ ಅಲ್ಲ. ಆದರೆ, ಆಪಾದನೆ ಬಂದಿತ್ತು, ಅದರಿಂದ ಕ್ಲೀನ್ ಆಗಿ ಹೊರಬಂದಿದ್ದೇನೆ. ನನ್ನ ವಾಪಸ್ ಸಚಿವ ಮಾಡ್ತೀನಿ ಎಂದು ಬಿಎಸ್’ವೈ, ಸಿಎಂ ಹಾಗೂ ಕಟೀಲ್ ಹೇಳಿದ್ದರು. ಈಗ ಅದ್ದಕ್ಕಾಗಿ ಕೇಳುತ್ತಿದ್ದೇನೆ. ನಾನು ಸಚಿವನಾಗದೇ ಇರುವುದಕ್ಕೆ ಪಿತೂರಿ ಬಗ್ಗೆ ಪ್ರಸ್ತಾಪ ಮಾಡಲ್ಲ. ಪಕ್ಷವನ್ನು 2-3 ಭಾಗ ಮಾಡಲು ಇಷ್ಟ ಇಲ್ಲ ಎಂದಿದ್ದರು.
ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳನ್ನು ಇಬ್ಬರೂ ನಾಯಕರು ಭೇಟಿಯಾಗಿದ್ದು, ಮುಂದಿನ ವಾರದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ಈ ವಿಚಾರ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post