ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಿಂದಿಗಿಂತ ಇಂದು ಎಲ್ಲೆಡೆ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬಹಳ ಬದಲಾವಣೆಯಾಗಿದೆಯಾದರು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯದ ಮಾಧುರ್ಯತೆ ಕ್ಷೀಣಿಸುತ್ತಿದ್ದು, ಶಿಕ್ಷಣರಂಗದಲ್ಲಿ ಅವೀನಾಭಾವದ ಸಂಬಂಧ ಪುನಶ್ಚೇತನಗೊಳ್ಳಬೇಕಿದೆ ಎಂದು ಭದ್ರಾ ಪ್ರೌಢಶಾಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ತೀರ್ಥಯ್ಯ ಅಭಿಪ್ರಾಯಪಟ್ಟರು.


ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ 1991-94ನೆ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಹಾಗು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದ್ದರೂ ಸಹ ವಿವಿಧ ಕಾರಣಗಳಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಶಿಕ್ಷಣ ಸೇತುವೆಯಾಗಿದ್ದು ಅದಕ್ಕೆ ಶಿಕ್ಷಣ ಸಂಸ್ಥೆಗಳು ವೇದಿಕೆ ಒದಗಿಸುವ ಸಾಧನವಾಗಿರುತ್ತದೆ. ಅಂತಹ ಶಿಕ್ಷಣ ಸಂಸ್ಥೆಯ ಬಗ್ಗೆ ಅಲ್ಲಿ ಕಲಿತು ಸಮಾಜದ ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ತಾವು ವಿದ್ಯೆ ಕಲಿತ ಶಾಲೆಯನ್ನು, ಶಿಕ್ಷಕರನ್ನು ಸ್ನೇಹಿತರನ್ನು ಮರೆಯದೆ ನೆನೆಪಿಸಿಕೊಂಡು ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.


ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ಹಾಗೂ ಸನ್ಮಾನಿತರಾಗಿ ನಿವೃತ್ತ ಶಿಕ್ಷಕರುಗಳಾದ ಸುನಂದಮ್ಮ, ಹಿರೇಮಠ್, ಲೋಕೇಶಪ್ಪ, ವಿಮಲಮ್ಮ, ಉಜ್ಜೇನಪ್ಪ, ನಂಜುಂಡಪ್ಪ ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತರಾಗಿ ದಿವಂಗತ ಶಿಕ್ಷಕರಾದ ಶಿವಲಿಂಗಪ್ಪ ಮತ್ತು ಶಿವಕುಮಾರ್ ಅವರ ಕುಟುಂಬದವರು ಉಪಸ್ಥಿತರಿದ್ದರು.
1991-94ನೆಯ ಸಾಲಿನ ವಿದ್ಯಾರ್ಥಿಗಳಾದ ಸೀಮಾ, ಗೀತಾ, ಅಂಬಿಕಾ, ರಾಧ ಅವರುಗಳು ಪ್ರಾರ್ಥಿಸಿ, ಸೀಮಾ ಪ್ರಾಸ್ಥಾವಿಕ ನುಡಿಗಳನ್ನಾಡಿ, ಸತ್ಯನಾರಾಯಣ್ ವಂದಿಸಿದರು.


ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಅಂದಿನ ವಿದ್ಯಾರ್ಥಿಗಳಾದ ಮಂಜುನಾಥ್, ಮುಖ್ಯಮಂತ್ರಿ ಪದಕ ವಿಜೇತ ವಿಜಯೇಂದ್ರ, ಆನಂದ, ಕೃಷ್ಣಕುಮಾರ್ ಅವರನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಆಯೋಜಿಸಿದ್ದ 1991-94ನೆಯ ಸಾಲಿನ ಹಳೆಯ ವಿದ್ಯಾರ್ಥಿ ವೃಂದ ವಿದ್ಯಾರ್ಥಿಗಳು ಹಾಗೂ ಅಂದು ಶಿಕ್ಷಕರಾಗಿ ಈಗ ನಿವೃತ್ತಿ ಜೀವನ ನಡೆಸುತ್ತಿರುವ ಶಿಕ್ಷಕರು ಮಾತನಾಡಿ, ಶಾಲೆಯಲ್ಲಿ ಪರಸ್ಪರ ನಡೆದ ಹಳೆಯ ಮಧುರ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಹರ್ಷ ಚಿತ್ತರಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















