ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪ್ರತಿವರ್ಷ 10 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದ ಭದ್ರಾವತಿ ದಸರಾ ಆಚರಣೆಯನ್ನು ಈ ಬಾರಿ ಕೇವಲ ಎರಡು ದಿನಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ನಗರಸಭಾ ಆಯುಕ್ತ ಪರಮೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು. ಮುಂದಿನ ವರ್ಷ ಎಂದಿನಂತೆ 9 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸುತ್ತೇವೆ ಎಂದು ಮನವಿ ಮಾಡಿದರು.
ಕಂದಾಯ ಅಧಿಕಾರಿ ರಾಜ್ಕುಮಾರ್ ಮಾತನಾಡಿ, ಅ.೭ರಂದು ಬೆಳಗ್ಗೆ 11ಗಂಟೆಗೆ ಗ್ರಾಮದೇವತೆ ಶ್ರೀಹಳದಮ್ಮ ದೇವಿ ದೇವಸ್ಥಾನದಲ್ಲಿ ಖ್ಯಾತ ವೈದ್ಯ ಡಾ. ಎಸ್. ಕೃಷ್ಣಭಟ್ ಅವರು, ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾಗೆ ಚಾಲನೆ ನೀಡಲಿದ್ದಾರೆ.
ಅ.15ರಂದು ವಿಜಯದಶಮಿಯ ದಿನ ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಅಪ್ಪರ್ ವೃತ್ತದಿಂದ ಮೆರವಣಿಗೆ ಹೊರಡಲಿದ್ದು, ಸಂಜೆ ಕನಕ ಮಂಟಪ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಶಾಸಕ ಬಿ.ಕೆ. ಸಂಗಮೇಶ್ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದು, ನಗರದ ವಿವಿಧ 50 ಅಲಂಕೃತ ದೇವಾನುದೇವತೆಗಳ ಉತ್ಸವ ಪಾಲ್ಗೊಳ್ಳಲಿದೆ. ಇದರೊಂದಿಗೆ ವಿವಿಧ ಕಲಾಪ್ರಕಾರಗಳು ಡೊಳ್ಳುಕುಣಿತ, ವೀರಗಾಸೆ ವಿವಿಧ ಇಲಾಖೆಗಳ ಯೋಜನೆಗಳನ್ನು ಭಿತ್ತರಿಸುವ ಹಾಗೂ ಕೊರೋನಾ ಜಾಗೃತಿ ಮೂಡಿಸುವ ಟ್ಯಾಬ್ಲೋಗಳು ಮೆರವಣಿಯಲ್ಲಿ ಪಾಲ್ಗೊಳ್ಳಲಿವೆ.
ಸಂಜೆ ಕನಕ ಮಂಟಪ ಮೈದಾನದಲ್ಲಿ ತಹಶೀಲ್ದಾರ್ ಅವರು, ಶಮೀ ಪೂಜೆ ನೆರವೇರಿಸಿ ಅಂಬು ಕಡಿಯಲಿದ್ದಾರೆ. ನಂತರ ರಾವಣ ಸಂಹಾರ ಹಾಗೂ ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯಲಿದೆ. ಎರಡು ದಿನದ ಕಾರ್ಯಕ್ರಮದಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸಲಾಗುತ್ತದೆ ಎಂದರು.
ಎರಡು ದಿನದ ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ, ಪ್ರಚಾರ ಸಮಿತಿ, ದೇವರ ಉತ್ಸವ ಸಮಿತಿ ಹಾಗೂ ಆಯುಧ ಪೂಜಾ ಸಮಿತಿಯನ್ನು ರಚಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧಿಕಾರಿಗಳಾದ ಸುಹಾಸಿನಿ, ಪ್ರಭಾಕರ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post