ಭದ್ರಾವತಿ: ಸಾಗುವಳಿ ಮಾಡುತ್ತಿರುವ ಕುಟುಂಬಕ್ಕೆ ಹಕ್ಕುಪತ್ರ ನೀಡದೆ ಆಮಿಷಕ್ಕೊಳಗಾಗಿ ಉಳ್ಳವರಿಗೆ ಹಕ್ಕುಪತ್ರ ನೀಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು.
ತಾಲೂಕಿನ ಕೂಡ್ಲಿಗೆರೆ ಹೋಬಳಿ ವ್ಯಾಪ್ತಿಯ ಅರಳಿಹಳ್ಳಿ ಗ್ರಾಮದ ನಿವಾಸಿ ಮಹಮದ್ ಯೂಸುಫ್ ಸಾಬ್ ಕುಟುಂಬದವರು ಬಸಲೀಕಟ್ಟೆ ಸರ್ವೆ ನಂ. 24 ಹಾಗೂ ಅತ್ತಿಗುಂದ ಗ್ರಾಮದ ಸರ್ವೆ ನಂ. 19(ಹಳೇ ಸರ್ವೆ ನಂ. 16 ಜಂಟಿ ಸರ್ವೆ) ರಲ್ಲಿ 5 ಎಕರೆ ಬಗರ್ ಹುಕುಂ ಜಮೀನನ್ನು ಸುಮಾರು 35 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಜಮೀನಿನಲ್ಲಿ ಅಡಕೆ ಬೆಳೆ ಬೆಳೆಯಲಾಗಿದೆ.
ಈ ಜಮೀನು ಸಂಬಂಧ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯವು ತೀರ್ಪು ನೀಡುವ ಮುನ್ನವೇ ತಹಸೀಲ್ದಾರರು ಉದ್ದೇಶ ಪೂರ್ವಕವಾಗಿ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಯೂಸುಫ್ ಸಾಬ್ ಕುಟುಂಬದವರನ್ನು ಒಕ್ಕಲೆಬ್ಬಿಸಿ ಅದೇ ಗ್ರಾಮದ ಚನ್ನಪ್ಪನ ಪತ್ನಿ ನೀಲಮ್ಮನವರಿಗೆ ಸ್ವಾಧೀನ ಕೊಡಿಸುವಂತೆ ಜ್ಞಾಪನಾ ಪತ್ರ ನೀಡಿ ಕರ್ತವ್ಯ ಲೋಪ ವೆಸಗಿದ್ದಾರೆಂದು ಆರೋಪಿಸಿದರು.
ನಿಜ ಸ್ಥಿತಿ ಅರಿತ್ತದ್ದರೂ ರಾಜಕೀಯ ಒತ್ತಡಗಳಿಗೆ ಮಣಿದು ಗ್ರಾಮಾಂತರ ಸಬ್ಇನ್ಸ್ಪೆಕ್ಟರ್ ಸಹ ಸಾಗು ಮಾಡುತ್ತಿರುವರ ವಿರುದ್ದ ದಬ್ಬಾಳಿಕೆ ಪ್ರದರ್ಶಿಸಿ ಕರ್ತವ್ಯ ಲೋಪ ವೆಸಗಿದ್ದಾರೆ. ಅದ್ದರಿಂದ ತಹಸೀಲ್ದಾರ್ ಮತ್ತು ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಇಬ್ಬರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಆಗ್ರಹಿಸಿದ್ದಾರೆ.
ದಸಂಸ ತಾಲೂಕು ಸಂಚಾಲಕ ವಿ. ವಿನೋದ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪಿ. ಏಳುಮಲೈ, ಎಂ. ಕುಬೇಂದ್ರಪ್ಪ, ಪರಮಶಿವನ್, ವಿ. ಮುನಿಸ್ವಾಮಿ, ರವಿನಾಯ್ಕ, ಏಕಾಂಬರಂ ಸೇರಿದಂತೆ ಭೂಮಿ ಸಾಗು ಮಾಡುತ್ತಿರುವ ಯೂಸುಫ್ ಸಾಬ್ ಕುಟುಂಬ ಸದಸ್ಯರು ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಮೊಹಮದ್ ಯೂಸುಫ್ ಸಾಬ್ ಕುಟುಂಬದವರನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು. ಕುಟುಂಬದವರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು. ತಹಸೀಲ್ದಾರ್ ಮತ್ತು ಗ್ರಾಮಾಂತರ ಆರಕ್ಷಕ ಉಪನಿರೀಕ್ಷಕರನ್ನು ತಕ್ಷಣ ಅಮಾನುತ್ತು ಗೊಳಿಸಬೇಕು. ಆಗರದಹಳ್ಳಿ ಹಾಗೂ ಆಗರದಹಳ್ಳಿ ಕ್ಯಾಂಪ್ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post