ಭದ್ರಾವತಿ: ಬ್ಯಾಂಕಿನಿಂದ ಸಾಲ ಪಡೆದ ಸಣ್ಣ ರೈತರಿಗೆ ನ್ಯಾಯಾಲಯದ ಮೂಲಕ ಜಪ್ತಿಗೆ ಆದೇಶ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ನೇತೃತ್ವದಲ್ಲಿ ಹಳೇನಗರದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಮತ್ತಿಘಟ್ಟ ಗ್ರಾಮದ ಸಣ್ಣರೈತ ಗಣೇಶಪ್ಪ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಿಂದ 2004 ರಲ್ಲಿ ಪಡೆದಿರುವ 1 ಲಕ್ಷ 70 ಸಾವಿರ ರೂ. ಸಾಲದ ವಸೂಲಾತಿಗೆ ಬ್ಯಾಂಕಿನವರು ನ್ಯಾಯಾಲಯದ ನೋಟೀಸ್ ನೀಡಿ ಆಸ್ತಿ ಜಪ್ತಿಗೆ ಮುಂದಾಗಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
2008 ರಲ್ಲಿ ಕೇಂದ್ರ ಸರಕಾರ ಸಣ್ಣ ರೈತರ ಸಾಲ ಮನ್ನಾ ಮಾಡಿ ಆದೇಶಹೊರಡಿಸಿದೆ. ಪ್ರಸ್ತುತ ರಾಜ್ಯದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಣ್ಣರೈತರ ಸಾಲಮನ್ನಾ ಮಾಡಿದ್ದರೂ ಬ್ಯಾಂಕ್ ಅಧಿಕಾರಿಗಳು ಸರಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದೆ ರೈತರನ್ನು ಸತಾವಣೆ ಮಾಡುತ್ತಿದ್ದಾರೆ. ಅಲ್ಲದೆ ಅನೇಕ ರೈತರ ವಿರುದ್ಧ ಬ್ಯಾಂಕಿನ ಆಡಳಿತ ಮಂಡಳಿ ನ್ಯಾಯಾಲಯದ ಮೂಲಕ ನೋಟೀಸ್ ನೀಡಿ ಪ್ರಕರಣ ದಾಖಲಿಸಿ ಅವರ ಆಸ್ತಿ ಜಪ್ತಿಕಾರ್ಯಕ್ಕೆ ಮುಂದಾಗಿದೆ. ಸರಕಾರದ ಆದೇಶವನ್ನು ಪಾಲಿಸದೆ ಮನ ಬಂದಂತೆ ವರ್ತಿಸುತ್ತಾ, ರೈತರ ಸಾಲ ವಸೂಲಾತಿಗಾಗಿ ದಾವೆ ಹೂಡಿ ಕ್ರಮ ಕೈಗೊಳ್ಳಲು ಮುಂದಾಗಿರುವ ಕಾರಣದಿಂದ ರೈತರು ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳು ಕೂಡಲೆ ಬ್ಯಾಂಕಿನ ದುಂಡಾವರ್ತನೆ ನಿಲ್ಲಿಸುವಂತೆ ಆದೇಶಿಸಿ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕ್ರಮಕೈ ಮುಂದಾಗಬೇಕು. ನ್ಯಾಯಾಲಯದ ಮೂಲಕ ನೀಡಿರುವ ದಾವಾ ನೋಟೀಸುಗಳನ್ನು ಹಿಂಪಡೆಯಬೇಕು ಇಲ್ಲದಿದ್ದಲ್ಲಿ ರೈತ ಸಂಘ ಗೂ ಹಸಿರು ಸೇನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರಕಾರ ಹಾಗೂ ಬ್ಯಾಂಕಿನ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ನೊಂದ ರೈತ ಗಣೇಶಪ್ಪ, ಮುಖಂಡರಾದ ಹಿರಣ್ಣಯ್ಯ, ಯಶವಂತರಾವ್ ಘೋರ್ಪಡೆ, ವೀರೇಶ್, ಪುಟ್ಟಣ್ಣ, ಪಾಂಡುರಂಗಪ್ಪ, ಜಿ.ಆರ್. ಸಣ್ಣರಂಗಪ್ಪ ಮುಂತಾದವರು ಸೇರಿದಂತೆ ಅನೇಕ ರೈತರು ಭಾಗವಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post